Ballari | ಕಂಪ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 47ನೇ ವಾರ್ಷಿಕ ಮಹಾಜನ ಸಭೆ

ಬಳ್ಳಾರಿ/ಕಂಪ್ಲಿ : ಪಟ್ಟಣದ ಹೊಸ ಬಸ್ ನಿಲ್ದಾಣದ ಮುದ್ದಾಪುರ ಅಗಸಿಯಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿ ಆವರಣದಲ್ಲಿ 47ನೇ ವಾರ್ಷಿಕ ಮಹಾಜನ ಸಭೆ ಶುಕ್ರವಾರ ನಡೆಯಿತು.
ಸಭೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಹೆಚ್. ಈರಣ್ಣ ವಾರ್ಷಿಕ ವರದಿ ಮಂಡಿಸಿ ಮಾತನಾಡಿ, ಸಂಘದಲ್ಲಿ ಒಟ್ಟು 4,068 ಸದಸ್ಯರು ಇದ್ದು, 1.32 ಕೋಟಿ ರೂ. ಶೇರು ಬಂಡವಾಳ ಹೊಂದಿದೆ ಎಂದು ತಿಳಿಸಿದರು.
ಸಂಘವು ರೈತರಿಗೆ 7.19 ಕೋಟಿ ರೂ. ಕೆಸಿಸಿ ಅಲ್ಪಾವಧಿ ಸಾಲ, 1.69 ಕೋಟಿ ರೂ. ಬಿಡಿಪಿ ಸಾಲ, 10 ರೈತರಿಗೆ 36 ಲಕ್ಷ ರೂ. ಪಂಪ್ಸೆಟ್ ಸಾಲ ಹಾಗೂ ಸ್ವಸಹಾಯ ಗುಂಪುಗಳಿಗೆ 5 ಲಕ್ಷ ರೂ. ಸಾಲ ವಿತರಿಸಿದೆ ಎಂದು ಮಾಹಿತಿ ನೀಡಿದರು.
2025-26ನೇ ಸಾಲಿನಲ್ಲಿ ಸಂಘವು ಆಡಿಟ್ ವರ್ಗೀಕರಣದಲ್ಲಿ ‘ಎ’ ಗ್ರೇಡ್ ಪಡೆದುಕೊಂಡಿದ್ದು, 1.47 ಕೋಟಿ ರೂ. ಮೌಲ್ಯದ ರಸಗೊಬ್ಬರ ವ್ಯವಹಾರ ನಡೆಸಿ 24.16 ಲಕ್ಷ ರೂ. ವ್ಯಾಪಾರ ಲಾಭ ಗಳಿಸಿದೆ. ಸಂಘದಲ್ಲಿ 2.84 ಕೋಟಿ ರೂ. ಠೇವಣಿ ಇದ್ದು, ಪ್ರಸಕ್ತ ಸಾಲಿನಲ್ಲಿ 12.40 ಲಕ್ಷ ರೂ. ನಿವ್ವಳ ಲಾಭ ದಾಖಲಿಸಿದೆ ಎಂದು ಹೇಳಿದರು.
ಸಂಘದ ಅಭಿವೃದ್ಧಿಗೆ ಆಡಳಿತ ಮಂಡಳಿ, ರೈತರು ಹಾಗೂ ಸದಸ್ಯರು ನಿರಂತರ ಸಹಕಾರ ನೀಡುತ್ತಿದ್ದು, ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಬೆಂಬಲ ನೀಡುವಂತೆ ಮನವಿ ಮಾಡಿದರು.
ಸಂಘದ ಅಧ್ಯಕ್ಷ ಬಿ. ಬಸವರಾಜ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಗಂಗಣ್ಣ ತಳವಾರ, ನಿರ್ದೇಶಕರಾದ ಕಟ್ಟೆ ಸಣ್ಣ ದುರುಗಪ್ಪ, ಅಳ್ಳಿ ನಾಗರಾಜ, ಈರಪ್ಪ ಜೋಳಮಾರ, ಬಳೆ ಮಲ್ಲಿಕಾರ್ಜುನ, ಟಿ. ನಿರಂಜನಯ್ಯ, ಸಣ್ಣಪ್ಪ ಎಸ್., ರಾಜೇಶ ಶೆರೆಗಾರ, ಕೃಷ್ಣ ಕೆ., ವಿಶಾಲಾಕ್ಷಿ ಬಿ.ಎಂ., ಕೆ. ನಾಗಮ್ಮ, ಕ್ಷೇತ್ರಾಧಿಕಾರಿ ವಿ. ರಾಮಚಂದ್ರ ಹಾಗೂ ಸಿಬ್ಬಂದಿ ಮತ್ತು ರೈತರು ಸಭೆಯಲ್ಲಿ ಉಪಸ್ಥಿತರಿದ್ದರು.






