Ballari | ಕಂಪ್ಲಿ ಜೆಸ್ಕಾಂ ಎಇಇ ಕಚೇರಿ ಕಟ್ಟಡ ಕಾಮಗಾರಿಗೆ ಚಾಲನೆ

ಬಳ್ಳಾರಿ/ಕಂಪ್ಲಿ : ಪಟ್ಟಣದ ಜೆಸ್ಕಾಂ ಉಪವಿಭಾಗ (ಎಇಇ) ಕಚೇರಿಯ ನೂತನ ಕಟ್ಟಡ ನಿರ್ಮಾಣಕ್ಕೆ ಅಡ್ಡಿಯಾಗಿದ್ದ ಅರಣ್ಯ ಇಲಾಖೆಯ ಅನುಮತಿ ಸಮಸ್ಯೆ ಅಂತಿಮವಾಗಿ ಬಗೆಹರಿದಿದ್ದು, ಸ್ಥಳದಲ್ಲಿದ್ದ 10ಕ್ಕೂ ಹೆಚ್ಚು ಗಿಡಮರಗಳನ್ನು ತೆರವುಗೊಳಿಸಲು ಅನುಮತಿ ದೊರೆತ ಹಿನ್ನೆಲೆಯಲ್ಲಿ ಕಾಮಗಾರಿಗೆ ಶನಿವಾರ ಅಧಿಕೃತ ಚಾಲನೆ ನೀಡಲಾಗಿದೆ.
ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್. ಗಣೇಶ್ ಅವರ ಪ್ರಯತ್ನದಿಂದ 2025-26ನೇ ಸಾಲಿನ ಜೆಸ್ಕಾಂ ಅನುದಾನದಡಿ 1.50 ಕೋಟಿ ರೂ. ವೆಚ್ಚದಲ್ಲಿ ಕಚೇರಿ ನಿರ್ಮಾಣಕ್ಕೆ ಮಂಜೂರಾತಿ ದೊರೆತು, 2026ರ ಏಪ್ರಿಲ್ 18ರಂದು ಭೂಮಿಪೂಜೆ ನೆರವೇರಿಸಲಾಗಿತ್ತು. ಆದರೆ, ಕಟ್ಟಡ ನಿರ್ಮಾಣ ಸ್ಥಳದಲ್ಲಿದ್ದ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಯ ಅನುಮತಿ ವಿಳಂಬವಾದ ಕಾರಣ ಕಾಮಗಾರಿ ಆರಂಭವಾಗಿರಲಿಲ್ಲ.
2024ರ ಆಗಸ್ಟ್ 9ರಂದು ಸ್ಥಳೀಯ ಜೆಸ್ಕಾಂ ಸಹಾಯಕ ಇಂಜಿನಿಯರ್ ಕಾರ್ಯಪಾಲನಾ ಶಾಖೆಯನ್ನು ಉಪವಿಭಾಗ (ಎಇಇ) ಕಚೇರಿಯಾಗಿ ಉನ್ನತೀಕರಿಸಲಾಗಿದ್ದರೂ, ಪ್ರತ್ಯೇಕ ಕಟ್ಟಡದ ಕೊರತೆಯಿಂದ ಹಳೆಯ ಕಚೇರಿಯಲ್ಲೇ ಕಾರ್ಯನಿರ್ವಹಿಸಲಾಗುತ್ತಿತ್ತು.
ಇದೀಗ ಅರಣ್ಯ ಇಲಾಖೆಯಿಂದ ಮರ ತೆರವಿಗೆ ಅನುಮತಿ ಲಭಿಸಿದ ನಂತರ ಜೆಸ್ಕಾಂ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸ್ಥಳದಲ್ಲಿ ಮಾರ್ಕಿಂಗ್ ಕಾರ್ಯ ಪೂರ್ಣಗೊಳಿಸಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಶೀಘ್ರದಲ್ಲೇ ಕಟ್ಟಡ ನಿರ್ಮಾಣ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಸಮರ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಖಾಜ ಮೋಹಿದ್ದೀನ್, ಸಂತೋಷ್, ಕೆ. ಶ್ರೀನಿವಾಸಪ್ರಸಾದ್ ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.






