Ballari | ಗೊಲ್ಲರಹಟ್ಟಿಗಳಲ್ಲಿ ಅನಿಷ್ಟ ಪದ್ಧತಿಗೆ ಕಡಿವಾಣ: ಬಾಣಂತಿ–ನವಜಾತ ಶಿಶುವನ್ನು ಜೋಪಡಿಯಿಂದ ಮನೆಗೆ ಕರೆತಂದ ಅಧಿಕಾರಿಗಳು
ವಿಶೇಷ ಜನಜಾಗೃತಿ ಅಭಿಯಾನ

ಸಂಡೂರು/ಬಳ್ಳಾರಿ: ದೇಶಕ್ಕೆ ಸ್ವಾತಂತ್ರ್ಯ ಬಂದು 80 ವರ್ಷಗಳಾದರೂ ಗೊಲ್ಲರಹಟ್ಟಿಗಳಲ್ಲಿ ಮಹಿಳೆಯರು ಹಾಗೂ ಬಾಣಂತಿಯರನ್ನು ಪ್ರತ್ಯೇಕವಾಗಿ ಹೊರಗಿಡುವಂತಹ ಅನಿಷ್ಟ ಸಂಪ್ರದಾಯಗಳು ಮುಂದುವರಿದಿರುವುದು ವಿಷಾದನೀಯ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಡುಗಿನ ಬಸಪ್ಪ ಬೇಸರ ವ್ಯಕ್ತಪಡಿಸಿದರು.
ಸಂಡೂರು ವಿಧಾನಸಭಾ ಕ್ಷೇತ್ರದ ಶಾಸಕಿ ಅನ್ನಪೂರ್ಣ ಈ. ತುಕಾರಾಮ್ ಅವರು ಕೆಡಿಪಿ ಸಭೆಯಲ್ಲಿ ನೀಡಿದ ಸೂಚನೆಯಂತೆ ತಾಲೂಕಿನ ಬಿ. ಗೊಲ್ಲರಹಟ್ಟಿ, ಸಿ. ಗೊಲ್ಲರಹಟ್ಟಿ, ವಿ. ಗೊಲ್ಲರಹಟ್ಟಿ ಹಾಗೂ ಆರ್. ಗೊಲ್ಲರಹಟ್ಟಿ ಗ್ರಾಮಗಳಲ್ಲಿ ಮಹಿಳಾ ದೌರ್ಜನ್ಯ, ಬಾಲ್ಯವಿವಾಹ ಹಾಗೂ ಮೂಢನಂಬಿಕೆಗಳ ವಿರುದ್ಧ ವಿಶೇಷ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಅಭಿಯಾನದ ವೇಳೆ ವಿ. ಗೊಲ್ಲರಹಟ್ಟಿಯಲ್ಲಿ ಮಹಿಳೆಯರು ಋತುಮತಿಯಾದ ಸಂದರ್ಭದಲ್ಲಿ ಮನೆ ಅಥವಾ ಹಟ್ಟಿಯಿಂದ ಹೊರಗೆ ಪ್ರತ್ಯೇಕ ಸ್ಥಳದಲ್ಲಿ ಇರಿಸುವ ಪದ್ಧತಿ ಹಾಗೂ ಹೆರಿಗೆಯಾದ ಬಳಿಕ ಬಾಣಂತಿಯನ್ನು ಗ್ರಾಮದ ಹೊರಭಾಗದ ಜೋಪಡಿಯಲ್ಲಿ ಇರಿಸುವ ಆಚರಣೆ ಕಂಡುಬಂದಿದೆ. ಇಂತಹ ಪದ್ಧತಿಗಳು ಮಹಿಳೆಯರ ಘನತೆ, ಆರೋಗ್ಯ ಹಾಗೂ ಸುರಕ್ಷತೆಗೆ ಧಕ್ಕೆ ಉಂಟುಮಾಡುತ್ತವೆ ಎಂದು ಅಧಿಕಾರಿಗಳು ಗ್ರಾಮಸ್ಥರಿಗೆ ಮನವರಿಕೆ ಮಾಡಿದರು.
ಎರಡು ದಿನದ ಬಾಣಂತಿ–ನವಜಾತ ಶಿಶುವನ್ನು ಜೋಪಡಿಯಿಂದ ಮನೆಗೆ
ವಿ. ಗೊಲ್ಲರಹಟ್ಟಿಯಲ್ಲಿ ಹೆರಿಗೆಯಾಗಿ ಕೇವಲ ಎರಡು ದಿನಗಳಾಗಿದ್ದ ಬಾಣಂತಿ ಹಾಗೂ ನವಜಾತ ಶಿಶುವನ್ನು ಗ್ರಾಮದ ಹೊರಭಾಗದ ಜೋಪಡಿಯಲ್ಲಿ ಇರಿಸಿರುವುದನ್ನು ಅಧಿಕಾರಿಗಳು ಗಮನಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಕುಟುಂಬಸ್ಥರು ಹಾಗೂ ಗ್ರಾಮದ ಮುಖಂಡರೊಂದಿಗೆ ಚರ್ಚಿಸಿ, ತಾಯಿ ಮತ್ತು ಮಗುವನ್ನು ಹೊರಭಾಗದಲ್ಲಿ ಇರಿಸುವುದು ಸುರಕ್ಷಿತವಲ್ಲ ಎಂದು ತಿಳಿಸಿದರು.
ಅಧಿಕಾರಿಗಳ ಮನವಿಗೆ ಸ್ಪಂದಿಸಿದ ಕುಟುಂಬಸ್ಥರು ಬಾಣಂತಿ ಹಾಗೂ ನವಜಾತ ಶಿಶುವನ್ನು ಜೋಪಡಿಯಿಂದ ಮನೆಯೊಳಗೆ ಕರೆತಂದು ಆರೈಕೆ ಮಾಡಲು ಒಪ್ಪಿಕೊಂಡರು. ಈ ವೇಳೆ ಗ್ರಾಮದ ಮುಖಂಡ ಪೂಜಾರ್ ಚಿತ್ತಪ್ಪ ಅವರನ್ನು ಸನ್ಮಾನಿಸಿ, ಮುಂದೆ ಯಾವುದೇ ಮಹಿಳೆ ಹೆರಿಗೆಯಾದ ಬಳಿಕ ಬಾಣಂತಿ ಹಾಗೂ ನವಜಾತ ಶಿಶುವನ್ನು ಗ್ರಾಮದ ಹೊರಗೆ ಇರಿಸದೆ ಮನೆಯಲ್ಲಿಯೇ ಸುರಕ್ಷಿತವಾಗಿ ನೋಡಿಕೊಳ್ಳುವಂತೆ ಗ್ರಾಮಸ್ಥರಿಂದ ಆಶ್ವಾಸನೆ ಪಡೆಯಲಾಯಿತು.
ಶಾಲೆಗಳಲ್ಲಿ ಮಕ್ಕಳಿಗೆ ಕೋಳಿ ಮೊಟ್ಟೆ ನೀಡಬಾರದು ಎಂಬ ಮೂಢನಂಬಿಕೆ ಕುರಿತು ಕೂಡ ಅಧಿಕಾರಿಗಳು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದರು. ಮೊಟ್ಟೆ ಮಕ್ಕಳಿಗೆ ಅಗತ್ಯವಾದ ಪೌಷ್ಟಿಕ ಆಹಾರವಾಗಿದ್ದು, ಅದರ ಸೇವನೆಯಿಂದ ಮಕ್ಕಳ ಆರೋಗ್ಯ ಹಾಗೂ ಬೆಳವಣಿಗೆಗೆ ನೆರವಾಗುತ್ತದೆ ಎಂದು ವಿವರಿಸಿದರು.
ಅಧಿಕಾರಿಗಳ ಮನವೊಲಿಕೆಗೆ ಸ್ಪಂದಿಸಿದ ನಾಲ್ಕು ಗೊಲ್ಲರಹಟ್ಟಿಗಳ ಗ್ರಾಮ ಮುಖಂಡರು ಶಾಲಾ ಮಕ್ಕಳಿಗೆ ಮೊಟ್ಟೆ ನೀಡಲು ಒಪ್ಪಿಗೆ ಸೂಚಿಸಿದರು. ಕಾರ್ಯಕ್ರಮದಲ್ಲೇ ಮಕ್ಕಳಿಗೆ ಬೇಯಿಸಿದ ಮೊಟ್ಟೆ ವಿತರಿಸಿ ಸೇವಿಸುವಂತೆ ಮಾಡಲಾಯಿತು.
ಗೊಲ್ಲರಹಟ್ಟಿಗಳಲ್ಲಿನ ಕೆಲವು ಅನಿಷ್ಟ ಆಚರಣೆಗಳನ್ನು ಕಂಡು ವಿಷಾದ ವ್ಯಕ್ತಪಡಿಸಿದ ಮಡುಗಿನ ಬಸಪ್ಪ, “ದೇಶಕ್ಕೆ ಸ್ವಾತಂತ್ರ್ಯ ಬಂದು 80 ವರ್ಷಗಳಾಗಿವೆ. ಇಂತಹ ವ್ಯವಸ್ಥೆಯನ್ನು ನೋಡಿದಾಗ ಮಾನಸಿಕವಾಗಿ ಆಘಾತವಾಗುತ್ತದೆ. ನಾವು ಯಾವ ಕಾಲದಲ್ಲಿದ್ದೇವೆ ಎಂಬ ಪ್ರಶ್ನೆ ಮೂಡುತ್ತದೆ” ಎಂದು ಹೇಳಿದರು.
ಹಟ್ಟಿಗಳಲ್ಲಿ ಸಾಮಾಜಿಕ ಬದಲಾವಣೆ ಅಗತ್ಯವಿದ್ದು, ಮೂಢನಂಬಿಕೆ ಹಾಗೂ ಅಮಾನವೀಯ ಸಂಪ್ರದಾಯಗಳನ್ನು ತೊರೆದು ಆರೋಗ್ಯಕರ ಬದುಕಿನತ್ತ ಸಾಗಲು ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಅಭಿಯಾನದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಡುಗಿನ ಬಸಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ನಾಗರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್. ಅಕ್ಕಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವೆಂಕಟೇಶ್, ಪಿಎಚ್ಸಿ ವೈದ್ಯ ಅಕ್ಷಯ್, ಪಿಎಸ್ಐ ಮುದ್ದು ರಂಗಸ್ವಾಮಿ, ಪಿಡಿಒ ಕರಿಬಸವರಾಜ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.
ಗೊಲ್ಲರಹಟ್ಟಿಗಳಲ್ಲಿ ಅನಿಷ್ಟ ಸಂಪ್ರದಾಯಗಳ ವಿರುದ್ಧ ಜಾಗೃತಿ ಅಭಿಯಾನವನ್ನು ಮುಂದುವರಿಸಲು ಅಧಿಕಾರಿಗಳು ನಿರ್ಧರಿಸಿದ್ದು, ಮುಂದಿನ ನಾಲ್ಕು ಹಂತಗಳಲ್ಲಿ ಮಹಿಳೆಯರ ಸುರಕ್ಷತೆ, ಮಕ್ಕಳ ಹಕ್ಕುಗಳು, ಬಾಲ್ಯವಿವಾಹ ತಡೆ, ಬಾಣಂತಿ ಹಾಗೂ ನವಜಾತ ಶಿಶುಗಳ ಆರೋಗ್ಯ ಮತ್ತು ಪೌಷ್ಟಿಕತೆ ಕುರಿತು ನಿರಂತರವಾಗಿ ಅರಿವು ಮೂಡಿಸಲಾಗುವುದು.






