Ballari | ಎಂ.ತುಂಬರಗುದ್ದಿ ಸರ್ಕಾರಿ ಪ್ರೌಢಶಾಲೆಯಲ್ಲಿ ಅದ್ದೂರಿ ಸ್ವಾತಂತ್ರ್ಯೋತ್ಸವ

ಸಂಡೂರು/ಬಳ್ಳಾರಿ: ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಮಹನೀಯರನ್ನು ಸ್ಮರಿಸುವ ಮೂಲಕ ತಾಲೂಕಿನ ಎಂ. ತುಂಬರಗುದ್ದಿ ಸರ್ಕಾರಿ ಪ್ರೌಢಶಾಲೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ವಿನೂತನವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಸ್ವಾತಂತ್ರ್ಯೋತ್ಸವದ ಅಂಗವಾಗಿ ಶಾಲೆಯಲ್ಲಿ ‘80 ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳಿಗೆ 80 ಜನರಿಂದ ಗೌರವ ನಮನ’ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಕಡಿದಾಳ್ ಮಂಜಪ್ಪ, ನರಗುಂದದ ಬಾಬಾಸಾಹೇಬ್ ಸೇರಿದಂತೆ ದೇಶಕ್ಕಾಗಿ ಹೋರಾಡಿದ 80 ಮಹನೀಯರ ಭಾವಚಿತ್ರಗಳನ್ನು ಅಲಂಕರಿಸಿ, ತಳಿರು ತೋರಣ ಹಾಗೂ ಬೆಳಕಿನ ವ್ಯವಸ್ಥೆಯೊಂದಿಗೆ 80 ಆಸನಗಳಲ್ಲಿ ಪ್ರತಿಷ್ಠಾಪಿಸಲಾಗಿತ್ತು.
ವಿಶೇಷವಾಗಿ ಸಿದ್ಧಪಡಿಸಿದ ಹೂಗುಚ್ಛಗಳನ್ನು ಹಿಡಿದು ವಿದ್ಯಾರ್ಥಿ ನಾಯಕರು ಸೈನಿಕರ ಮಾದರಿಯಲ್ಲಿ ಶಿಸ್ತಿನಿಂದ ಸಾಗಿದರು. ಬಳಿಕ 80 ಮಂದಿ ಹೋರಾಟಗಾರರ ಭಾವಚಿತ್ರಗಳಿಗೆ ಹೂಗುಚ್ಛ ಸಮರ್ಪಿಸಿ ಗೌರವ ವಂದನೆ ಸಲ್ಲಿಸಿದರು. ದೇಶಕ್ಕಾಗಿ ತಮ್ಮ ಬದುಕನ್ನೇ ಅರ್ಪಿಸಿದ ಹೋರಾಟಗಾರರನ್ನು ಸಾಮೂಹಿಕವಾಗಿ ಸ್ಮರಿಸಿದ ಈ ವಿನೂತನ ಕಾರ್ಯಕ್ರಮ ಗಮನ ಸೆಳೆಯಿತು.
SSLC ಸಾಧಕರಿಗೆ ಪ್ರೋತ್ಸಾಹಧನ :
ತುಂಬರಗುದ್ದಿ ಗ್ರಾಮದ ಶಿಕ್ಷಣ ಪ್ರೇಮಿ ಹಾಗೂ ಸಮಾಜ ಸೇವಕ ನಾಗೇಶ್ ಪಾಟೀಲ್ ಅವರು ತಮ್ಮ ಜನ್ಮದಿನದ ಅಂಗವಾಗಿ 2025–26ನೇ ಸಾಲಿನ SSLC ಪರೀಕ್ಷೆಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಗಳಿಸಿದ 17 ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಪ್ರತಿಯೊಬ್ಬರಿಗೂ ತಲಾ 3,000 ರೂ. ಪ್ರೋತ್ಸಾಹಧನ ನೀಡಿದರು.
ಪ್ರತಿವರ್ಷದಂತೆ SSLCನಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಬೆಳ್ಳಿ ನಾಣ್ಯ ನೀಡುವ ಕಾರ್ಯವನ್ನು ಸೂರ್ಯಕಿರಣ ಯರಯ್ಯನಹಳ್ಳಿ ಅವರ ಸ್ಮರಣಾರ್ಥ ಅವರ ಕುಟುಂಬದವರು ನೆರವೇರಿಸಿದರು. ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಕಾರ್ತಿಕ್, ಇನಾಯತ್, ಮಹಾಭಾಷಾ ಹಾಗೂ ಕಲಿಲ್ ಜಮೀರ್ ಬೆಳ್ಳಿ ನಾಣ್ಯಗಳನ್ನು ನೀಡಿದರು.
ಮುಂದಿನ ವರ್ಷ SSLCನಲ್ಲಿ ಪ್ರಥಮ ಸ್ಥಾನ ಪಡೆಯುವ ವಿದ್ಯಾರ್ಥಿಯ ಮುಂದಿನ ಶಿಕ್ಷಣಕ್ಕೆ ಅಗತ್ಯವಾದ ಆರ್ಥಿಕ ನೆರವು ನೀಡುವುದಾಗಿ ಈ ಸಂದರ್ಭದಲ್ಲಿ ಘೋಷಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮೆರುಗು :
ವಿದ್ಯಾರ್ಥಿಗಳು ಸ್ವಾತಂತ್ರ್ಯ ಗೀತೆ, ಏಕತೆಯ ರೂಪಕ, ಕೂಡಲ ಸಂಗಮದೇವರ ವಚನ ರೂಪಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮನೋಜ್ಞವಾಗಿ ಪ್ರದರ್ಶಿಸಿದರು. ಮುಖ್ಯ ಗುರು ಅಮರೇಶ ಸೊನ್ನದ್ ರಚಿಸಿದ ‘ನಮ್ಮ ನಡೆ ಸ್ವಾತಂತ್ರ್ಯದ ಕಡೆ’ ಕಿರು ನಾಟಕವೂ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ನಾಗೇಶ್ ಪಾಟೀಲ್, ಗ್ರಾಮದ ಹಿರಿಯರು, ಎಸ್ಡಿಎಂಸಿ ಬಳಗ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ನಿವೃತ್ತ ಶಿಕ್ಷಕ ದೇವರಮನೆ ನಾಗಪ್ಪ, ಶಿಕ್ಷಣ ಪ್ರೇಮಿ ವಸಂತ್ ಕುಮಾರ್ ಹಾಗೂ ನಿವೃತ್ತ ಉಪನ್ಯಾಸಕ ತಿಪ್ಪೇಸ್ವಾಮಿ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು. ಶಿಕ್ಷಕರಾದ ಮಹೇಶ್ವರಪ್ಪ, ಪ್ರವೀಣ್ ಕುಮಾರ್, ನೀಲಾಂಬಿಕ, ಭಾಸ್ಕರ್, ಕೃಷ್ಣಪ್ಪ, ಸಿಂಧು, ನಾಗರಾಜ್ ಹಾಗೂ ಮಾರೇಶ್ ಉಪಸ್ಥಿತರಿದ್ದರು.
ಎಸ್ಡಿಎಂಸಿ ಅಧ್ಯಕ್ಷ ಶಿವರಾಜ್, ಸದಸ್ಯರಾದ ಮಲ್ಲಿಕಾರ್ಜುನ, ದಾದಾ ಕಲಂದರ್, ಹನುಮಂತಪ್ಪ, ನಾಗಪ್ಪ, ವಿಜಯಲಕ್ಷ್ಮಿ, ನಾಗರಾಜ್ ಹಾಗೂ ರಾಮಣ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ಉಮೇಶ್, ಪ್ರಭಾಕರ್, ನಾಗರಾಜ್, ವಲಿಸಾಬ್, ಸುರೇಶ್ ಹಾಗೂ ಅಂಜನಪ್ಪ ಸೇರಿದಂತೆ ಗ್ರಾಮದ ಹಿರಿಯರು, ಯುವಕರು ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವೇದಿಕೆ ಕಾರ್ಯಕ್ರಮದಲ್ಲಿ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಮಹೇಶ್ವರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ದಾವೂದ್ ಅಸ್ಲಾಂ ಕಾರ್ಯಕ್ರಮ ನಿರೂಪಿಸಿದರು.
80 ಹೋರಾಟಗಾರರನ್ನು 80 ಜನರಿಂದ ಗೌರವಿಸುವ ಮೂಲಕ ಸ್ವಾತಂತ್ರ್ಯದ ಮೌಲ್ಯ, ತ್ಯಾಗ ಮತ್ತು ಬಲಿದಾನದ ಸಂದೇಶವನ್ನು ಮುಂದಿನ ಪೀಳಿಗೆಗೆ ತಲುಪಿಸಿದ ಈ ಕಾರ್ಯಕ್ರಮ ಗ್ರಾಮದಲ್ಲಿ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು.






