Ballari | ನಿಡುಗುರ್ತಿ ಚಿಕ್ಕಕೆರೆಯ ಅಕ್ರಮ ಮರಳು ಸಾಗಾಟಕ್ಕೆ ಬ್ರೇಕ್; 6 ಜನರ ವಿರುದ್ಧ FIR ದಾಖಲು
ವಾರ್ತಾಭಾರತಿ ವರದಿ ಫಲಶ್ರುತಿ

ಬಳ್ಳಾರಿ/ಸಂಡೂರು: ತಾಲೂಕಿನ ನಿಡುಗುರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಕೆರೆಯಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಾಟದ ಕುರಿತು ವಾರ್ತಾಭಾರತಿ ಪತ್ರಿಕೆಯಲ್ಲಿ ಸತತವಾಗಿ ವರದಿ ಪ್ರಕಟವಾಗಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಚೋರನೂರು ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಸೆ.16ರಂದು ಕ್ರೈಂ ನಂ.92/2026ರಂತೆ ಮೂವರು ಹೆಸರಿತ ಆರೋಪಿಗಳು ಹಾಗೂ ಮೂವರು ಅನಾಮಿಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ತಹಶೀಲ್ದಾರ್ ಎಂ. ಅನಿಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಚೋರನೂರು ಹೋಬಳಿಯ ಕಂದಾಯ ನಿರೀಕ್ಷಕ ವೀರೇಂದ್ರ ಅವರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಅದರ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
FIRನಲ್ಲಿ ಬಣಕಾರ ಬಸವರಾಜ ಮಲ್ಲಾಪುರ, ಕೊಂಡಾಪುರದ ಪರಮೇಶಿ ಮತ್ತು ಮಂಜುನಾಥ ಅವರನ್ನು ಹೆಸರಿತ ಆರೋಪಿಗಳನ್ನಾಗಿ ದಾಖಲಿಸಲಾಗಿದೆ. ಅಕ್ರಮ ಮರಳು ಸಾಗಾಟಕ್ಕೆ ಬಳಸಲಾಗಿದೆ ಎನ್ನಲಾದ ವಾಹನಗಳ ಮೂವರು ಚಾಲಕರ ವಿರುದ್ಧವೂ ಅನಾಮಿಕ ಆರೋಪಿಗಳಾಗಿ ಪ್ರಕರಣ ದಾಖಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ನಿಡುಗುರ್ತಿ ಗ್ರಾಮದ ಸರ್ವೆ ನಂ.259ರ ಚಿಕ್ಕಕೆರೆ ಪ್ರದೇಶದಿಂದ ಅಕ್ರಮವಾಗಿ ಮರಳು ತೆಗೆದು ಸಾಗಾಟ ನಡೆಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಒಟ್ಟು ಆರು ಟ್ರ್ಯಾಕ್ಟರ್–ಟ್ರೇಲರ್ಗಳ ವಿವರ ಉಲ್ಲೇಖಿಸಲಾಗಿದ್ದು, ಅವುಗಳ ಅಂದಾಜು ಮೌಲ್ಯ 10.50 ಲಕ್ಷ ರೂ. ಎಂದು ದಾಖಲಿಸಲಾಗಿದೆ.
ಪ್ರಕರಣವನ್ನು ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 303(1) ಅಡಿ ದಾಖಲಿಸಲಾಗಿದ್ದು, ಜುಲೈ 27ರಿಂದ ಸೆಪ್ಟೆಂಬರ್ 16ರವರೆಗೆ ನಡೆದ ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ತನಿಖೆ ಆರಂಭಿಸಲಾಗಿದೆ.
ಸ್ಥಳೀಯರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಕ್ರಮ ಕೈಗೊಂಡಿದ್ದು, ಚಿಕ್ಕಕೆರೆ ಸೇರಿದಂತೆ ಸಾರ್ವಜನಿಕ ಜಲಮೂಲಗಳಿಂದ ಅಕ್ರಮ ಮರಳು ತೆಗೆಯುವುದನ್ನು ತಡೆಯಲು ಮುಂದಿನ ದಿನಗಳಲ್ಲೂ ನಿರಂತರ ನಿಗಾ ವಹಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.






