Ballari | ಒಂದೇ ವಾಹನಕ್ಕೆ ಕುರುಗೋಡು ಅಗ್ನಿಶಾಮಕ ಠಾಣೆ ಸೀಮಿತ

ಬಳ್ಳಾರಿ / ಕುರುಗೋಡು : ಪಟ್ಟಣದ ಅಗ್ನಿಶಾಮಕ ಠಾಣೆಯಲ್ಲಿ ಪ್ರಸ್ತುತ ಒಂದೇ ಅಗ್ನಿಶಾಮಕ ವಾಹನ ಕಾರ್ಯನಿರ್ವಹಿಸುತ್ತಿದ್ದು, ಏಕಕಾಲಕ್ಕೆ ಹಲವು ಕಡೆ ಬೆಂಕಿ ಅವಘಡ ಸಂಭವಿಸಿದರೆ ಸಿಬ್ಬಂದಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಹಿಂದೆ ಠಾಣೆಯಲ್ಲಿ ಎರಡು ವಾಹನಗಳಿದ್ದರೂ, 15 ವರ್ಷಗಳ ಸೇವೆ ಪೂರ್ಣಗೊಳಿಸಿದ್ದ ಒಂದು ವಾಹನವನ್ನು ಎರಡು ವರ್ಷಗಳ ಹಿಂದೆಯೇ ಸ್ಥಗಿತಗೊಳಿಸಲಾಗಿದೆ. ಕುರುಗೋಡು ತಾಲ್ಲೂಕಿನ 33 ಹಳ್ಳಿಗಳು, 25 ಕ್ಯಾಂಪ್ಗಳು ಸೇರಿದಂತೆ ಸಿರಿಗೇರಿ, ಕಂಪ್ಲಿ, ಎಮ್ಮಿಗನೂರು ಹಾಗೂ ಬಳ್ಳಾಪುರ ಭಾಗದ ಗ್ರಾಮಗಳು ಅಗ್ನಿ ಅವಘಡಗಳ ಸಂದರ್ಭದಲ್ಲಿ ಇದೇ ಠಾಣೆಯನ್ನು ಅವಲಂಬಿಸಿವೆ.
ಬೇಸಿಗೆಯ ತೀವ್ರತೆಯಿಂದ ಗುಡಿಸಲು, ಹುಲ್ಲಿನ ಬಣವೆ ಹಾಗೂ ಅಪಘಾತ ಸಂಬಂಧಿತ ಬೆಂಕಿ ಅವಘಡಗಳು ಹೆಚ್ಚಾಗುತ್ತಿವೆ. ಒಂದೇ ದಿನ ಎರಡು ಕಡೆ ಬೆಂಕಿ ಕಾಣಿಸಿಕೊಂಡರೆ ರಕ್ಷಣಾ ಕಾರ್ಯಾಚರಣೆ ನಡೆಸುವುದು ಕಷ್ಟಸಾಧ್ಯವಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ 30ರಿಂದ 50 ಕಿಲೋಮೀಟರ್ ದೂರದ ಬಳ್ಳಾರಿ ಅಥವಾ ಸಿರುಗುಪ್ಪದಿಂದ ವಾಹನಗಳು ಬರುವಷ್ಟರಲ್ಲಿ ಆಸ್ತಿಪಾಸ್ತಿಗಳು ಬೆಂಕಿಗೆ ಆಹುತಿಯಾಗುತ್ತಿವೆ.
ಇತ್ತೀಚೆಗೆ ಪಟ್ಟಣದ ಮನೆಯೊಂದರಲ್ಲಿ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡ ವೇಳೆ ಅಗ್ನಿಶಾಮಕ ವಾಹನ ಅಲ್ಲಿಗೆ ತೆರಳಿದ್ದಾಗಲೇ ಸೋಮಲಾಪುರ ಗ್ರಾಮದಲ್ಲಿ ಬಣವೆಗೆ ಬೆಂಕಿ ಬಿದ್ದ ಘಟನೆ ನಡೆದಿದೆ. ಒಂದೇ ವಾಹನ ಇರುವುದರಿಂದ ಎರಡೂ ಕಡೆ ತಕ್ಷಣ ಸ್ಪಂದಿಸಲು ಸಾಧ್ಯವಾಗಿರಲಿಲ್ಲ. ವಾರ್ಷಿಕವಾಗಿ 100ಕ್ಕೂ ಹೆಚ್ಚು ಅಗ್ನಿ ಅವಘಡಗಳು ಸಂಭವಿಸುತ್ತಿದ್ದರೂ ಮತ್ತೊಂದು ವಾಹನ ನೀಡದಿರುವುದಕ್ಕೆ ರೈತ ಮುಖಂಡ ಗುರಳ್ಳಿ ರಾಜ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಠಾಣೆಯಲ್ಲಿ 26 ಸಿಬ್ಬಂದಿ ಇರಬೇಕಾದರೆ ಪ್ರಸ್ತುತ 21 ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, 5 ಹುದ್ದೆಗಳು ಖಾಲಿ ಇವೆ. ಸಿಬ್ಬಂದಿಗೆ ವಸತಿಗೃಹ ನಿರ್ಮಿಸಲು ಈವರೆಗೂ ಸರ್ಕಾರಿ ಜಾಗ ಗುರುತಿಸದಿರುವುದು ಮತ್ತೊಂದು ಸಮಸ್ಯೆಯಾಗಿದೆ.
2005ರಲ್ಲಿ ಆರಂಭವಾದ ಠಾಣೆ :
2005ರಲ್ಲಿ ನಾರಾ ಸೂರ್ಯನಾರಾಯಣ ರೆಡ್ಡಿ ಅವರು ಶಾಸಕರಾಗಿದ್ದ ಅವಧಿಯಲ್ಲಿ ಎಪಿಎಂಸಿ ಉಪ ಮಾರುಕಟ್ಟೆಯ ಶೆಡ್ನಲ್ಲಿ ಅಗ್ನಿಶಾಮಕ ಠಾಣೆ ಆರಂಭಿಸಲಾಗಿತ್ತು. ಬಳಿಕ 2010ರಲ್ಲಿ ಜಿ. ಜನಾರ್ಧನರೆಡ್ಡಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆ ಹಾಗೂ ಟಿ.ಎಚ್. ಸುರೇಶ್ ಬಾಬು ಶಾಸಕರಾಗಿದ್ದ ಅವಧಿಯಲ್ಲಿ ಬಳ್ಳಾರಿ ರಸ್ತೆಯ ನೂತನ ಕಟ್ಟಡಕ್ಕೆ ಠಾಣೆ ಸ್ಥಳಾಂತರಿಸಲಾಯಿತು. ಠಾಣೆಗೆ ಸುಸಜ್ಜಿತ ಕಟ್ಟಡವಿದ್ದರೂ ವಸತಿಗೃಹಗಳ ಕೊರತೆ ಸಿಬ್ಬಂದಿಗೆ ತೊಂದರೆಯಾಗಿದೆ.
ಡಿವಿಜನ್ ಹಾಗೂ ಜಿಲ್ಲಾ ಕಚೇರಿಗಳಿಗೆ ವಾಹನ ಮತ್ತು ಸಿಬ್ಬಂದಿ ಕೊರತೆ ಕುರಿತು ಮನವಿ ಸಲ್ಲಿಸಲಾಗಿದೆ. ಹಂತ ಹಂತವಾಗಿ ವಾಹನ ಹಾಗೂ ಸಿಬ್ಬಂದಿ ಒದಗಿಸಲಾಗುವುದು ಎಂದು ಮೇಲಾಧಿಕಾರಿಗಳು ತಿಳಿಸಿದ್ದಾರೆ.
-ಎಂ. ಮೈಲಾರಪ್ಪ, ಅಗ್ನಿಶಾಮಕ ಠಾಣಾಧಿಕಾರಿ, ಕುರುಗೋಡು






