Ballari | ʼನಮ್ಮ ಕೆರೆ ನಮ್ಮ ಊರುʼ ಯೋಜನೆಗೆ ನಿಡುಗುರ್ತಿಯಲ್ಲಿ ಚಾಲನೆ

ಸಂಡೂರು/ಬಳ್ಳಾರಿ: ತಾಲೂಕಿನ ನಿಡುಗುರ್ತಿ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ “ನಮ್ಮ ಕೆರೆ ನಮ್ಮ ಊರು” ಯೋಜನೆಯಡಿ ಚಿಕ್ಕ ಕೆರೆಯ ಹೂಳು ತೆರವು ಕಾರ್ಯಕ್ಕೆ ಚಾಲನೆ ನೀಡುವ ಉದ್ದೇಶದಿಂದ ಮಹತ್ವದ ಸಭೆ ನಡೆಯಿತು.
ಧರ್ಮಸ್ಥಳ ಮಂಜುನಾಥ ಸಂಘದ ವತಿಯಿಂದ, ಗ್ರಾಮ ಪಂಚಾಯತಿ ಹಾಗೂ ಗ್ರಾಮಸ್ಥರ ಸಹಭಾಗಿತ್ವದಲ್ಲಿ ಯೋಜನೆ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದ್ದು, ಯೋಜನೆಗಾಗಿ ವಿಶೇಷ ಸಮಿತಿಯನ್ನೂ ರಚಿಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಧರ್ಮಸ್ಥಳ ಸಂಘದ ಮೇಲ್ವಿಚಾರಕ ವಿಠ್ಠಲ್ ಪೂಜಾರಿ, “ಧರ್ಮಸ್ಥಳ ಸಂಘವು ಕೇವಲ ಸಾಲ ನೀಡುವ ಸಂಸ್ಥೆಯಲ್ಲ. ಗ್ರಾಮಗಳ ಅಭಿವೃದ್ಧಿ ಮತ್ತು ಕುಟುಂಬಗಳ ಸಮಗ್ರ ಬೆಳವಣಿಗೆಗಾಗಿ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ,” ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕು ಯೋಜನಾಧಿಕಾರಿ ಸೂರ್ಯನಾರಾಯಣ, “ಧರ್ಮಸ್ಥಳ ಸಂಘವು ಗ್ರಾಮಾಭಿವೃದ್ಧಿಗೆ ಅನೇಕ ಯೋಜನೆಗಳನ್ನು ರೂಪಿಸಿಕೊಂಡಿದ್ದು, ರಾಜ್ಯದಾದ್ಯಂತ ಸಾವಿರಕ್ಕೂ ಹೆಚ್ಚು ಕೆರೆಗಳ ಹೂಳು ತೆರವು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ,” ಎಂದು ತಿಳಿಸಿದರು.
ಗ್ರಾಮ ಪಂಚಾಯತಿ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ನಡೆಯುವ ಈ ಯೋಜನೆ ನೀರಿನ ಸಂರಕ್ಷಣೆ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಹೇಳಿದರು. ಹಿಂದೆ ಕುಡಿಯುವ ನೀರಿಗಾಗಿ ಜನರು ದೂರದೂರಿಗೆ ತೆರಳಬೇಕಾಗುತ್ತಿತ್ತು. ಜಾನುವಾರುಗಳು ಹಾಗೂ ಜನರ ನೀರಿನ ಅಗತ್ಯ ಪೂರೈಸಲು ಕೆರೆಗಳ ಅಭಿವೃದ್ಧಿ ಅಗತ್ಯವಾಗಿದ್ದು, ಇಂತಹ ಯೋಜನೆಗಳು ಪರಿಣಾಮಕಾರಿ ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಪ್ರಾಥಮಿಕ ಶಾಲೆಯ ಮುಖ್ಯಗುರು ಎ. ಯಾರಿಸ್ವಾಮಿ, ಪಂಚಾಯತಿ ಕಾರ್ಯದರ್ಶಿ ಮಂಜುನಾಥ, ಗ್ರಾಮದ ಮುಖಂಡರಾದ ಎನ್.ಎಸ್. ಈರಣ್ಣ, ಬಣಕಾರ ಮಾಯಪ್ಪ, ಮಾಜಿ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.






