Ballari | ಕಂಪ್ಲಿಯಲ್ಲಿ ಪೆಟ್ರೋಲ್ ಬಂಕ್ ಬಂದ್ : ಸಾರ್ವಜನಿಕರ ಆಕ್ರೋಶ

ಬಳ್ಳಾರಿ / ಕಂಪ್ಲಿ : ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ನಡುವೆ ಕಂಪ್ಲಿ ಪಟ್ಟಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ಪೆಟ್ರೋಲ್ ಬಂಕ್ಗಳು ಅಚಾನಕವಾಗಿ ಬಂದ್ ಆಗಿರುವುದು ಸಾರ್ವಜನಿಕರಲ್ಲಿ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ಕಂಪ್ಲಿ ಪಟ್ಟಣದ ಬಳ್ಳಾರಿ ರಸ್ತೆಯಲ್ಲಿರುವ ಕೆಲವು ಪ್ರಮುಖ ಪೆಟ್ರೋಲ್ ಬಂಕ್ಗಳು ದಿನಪೂರ್ತಿ ಕಾರ್ಯನಿರ್ವಹಿಸದೇ ಬಂದ್ ಆಗಿದ್ದರಿಂದ ವಾಹನ ಸವಾರರು ಇಂಧನಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಭಾರತ್ ಪೆಟ್ರೋಲಿಯಂ ಹಾಗೂ ಇಂಡಿಯನ್ ಆಯಿಲ್ ಸಂಸ್ಥೆಗಳ ಬಂಕ್ಗಳು ಬಂದ್ ಆಗಿರುವುದು ಸ್ಥಳೀಯರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.
ತಾಲೂಕಿನ ಗುತ್ತಿಗನೂರು ಸಮೀಪದ ಪೆಟ್ರೋಲ್ ಬಂಕ್ ಕೂಡ ಕಾರ್ಯನಿರ್ವಹಿಸದೇ ಬಂದ್ ಆಗಿದ್ದರಿಂದ ಗ್ರಾಮೀಣ ಭಾಗದ ಜನರು ಸಂಕಷ್ಟ ಅನುಭವಿಸಿದರು. ದೂರ ಪ್ರಯಾಣಕ್ಕೆ ಹೊರಟಿದ್ದ ವಾಹನ ಸವಾರರು ಹಲವಾರು ಕಿಲೋಮೀಟರ್ ದೂರದ ಬಂಕ್ಗಳಿಗೆ ತೆರಳಿ ಇಂಧನ ಪಡೆಯಬೇಕಾದ ಪರಿಸ್ಥಿತಿ ಎದುರಾಯಿತು.
ಸ್ಥಳೀಯರ ಆರೋಪದ ಪ್ರಕಾರ, ಕೆಲವು ಬಂಕ್ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಸಂಗ್ರಹ ಇದ್ದರೂ ಸಾರ್ವಜನಿಕರಿಗೆ ವಿತರಣೆ ಮಾಡಲಾಗುತ್ತಿಲ್ಲ. ತೈಲ ದರ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಲ್ಲಿ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಇಂಧನ ದರ ಏರಿಕೆಯಿಂದ ಈಗಾಗಲೇ ಸಾರಿಗೆ ವೆಚ್ಚ, ಅಗತ್ಯ ವಸ್ತುಗಳ ಬೆಲೆ, ರೈತರು ಮತ್ತು ಸಣ್ಣ ವ್ಯಾಪಾರಿಗಳ ಮೇಲಿನ ಹೊರೆ ಹೆಚ್ಚಾಗಿದ್ದು, ಈ ಸಂದರ್ಭದಲ್ಲಿ ಬಂಕ್ ಬಂದ್ ಆಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
“ಬಂಕ್ನಲ್ಲಿ ಇಂಧನ ಇದ್ದರೂ ನೀಡುತ್ತಿಲ್ಲ. ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಂಡು ಪರಿಶೀಲನೆ ನಡೆಸಬೇಕು” ಎಂದು ವಾಹನ ಸವಾರರು ಒತ್ತಾಯಿಸಿದ್ದಾರೆ.
ಅತ್ಯಾವಶ್ಯಕ ಸೇವೆಗಳಿಗೆ ತೆರಳುವ ಜನರು, ಆಟೋ ಚಾಲಕರು, ರೈತರು ಹಾಗೂ ಸಣ್ಣ ವ್ಯಾಪಾರಿಗಳು ಇಂಧನ ಸಿಗದೇ ಸಂಕಷ್ಟಕ್ಕೆ ಸಿಲುಕಿದ್ದು, ಕೆಲವು ಕಡೆಗಳಲ್ಲಿ ವಾಹನಗಳ ಉದ್ದ ಸಾಲುಗಳು ಕಂಡುಬಂದಿವೆ. ಇನ್ನೂ ಕೆಲವು ಬಂಕ್ಗಳಲ್ಲಿ “ಇಂಧನ ಇಲ್ಲ” ಎಂಬ ಫಲಕ ಅಳವಡಿಸಲಾಗಿತ್ತು.
ಜಿಲ್ಲಾಡಳಿತ ತಕ್ಷಣ ಗಮನಹರಿಸಿ ಕೃತಕ ಅಭಾವ ಸೃಷ್ಟಿಸುತ್ತಿರುವವರ ವಿರುದ್ಧ ಕ್ರಮ ಕೈಗೊಂಡು ಸಾರ್ವಜನಿಕರಿಗೆ ನಿರಂತರ ಇಂಧನ ಪೂರೈಕೆ ಖಚಿತಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.






