ಬಳ್ಳಾರಿ | ಡಾ.ಜಿ.ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲು ಆಗ್ರಹಿಸಿ ಪ್ರತಿಭಟನೆ

ಬಳ್ಳಾರಿ / ಕಂಪ್ಲಿ: ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಒತ್ತಾಯಿಸಿ, ಪ್ರಗತಿಪರ ಒಕ್ಕೂಟ, ದಲಿತ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದರು.
ನಂತರ ಮುಖಂಡ ಸಣಾಪುರ ಮರಿಸ್ವಾಮಿ ಮಾತನಾಡಿ, ಸ್ವಾತಂತ್ರ್ಯ ಬಂದ ದಿನದಿಂದಲೂ ದಲಿತ ಸಮುದಾಯಗಳು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿವೆ. ರಾಜ್ಯದಲ್ಲಿ 1.10 ಕೋಟಿಗೂ ಅಧಿಕ ದಲಿತ ಸಮುದಾಯದ ಜನಸಂಖ್ಯೆ ಇದೆ. ಕಾಂಗ್ರೆಸ್ ಪಕ್ಷದಲ್ಲಿ ಸಮರ್ಥ ದಲಿತ ನಾಯಕರಿದ್ದರೂ, ಇಲ್ಲಿಯವರೆಗೂ ಯಾರನ್ನೂ ಮುಖ್ಯಮಂತ್ರಿ ಮಾಡಿಲ್ಲ. ಕಾಂಗ್ರೆಸ್ನಲ್ಲಿ ದಲಿತ ಮುಖ್ಯಮಂತ್ರಿ ಎಂಬುದು ಕೇವಲ ಚರ್ಚೆಯ ವಿಷಯವಾಗಿದೆ. ಈಗಲಾದರೂ ವರಿಷ್ಠರು ಜಿ.ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಆಗ್ರಹಿಸಿದರು.
ದಲಿತಪರ ನಾಯಕ ಡಾ.ಜಿ.ಪರಮೇಶ್ವರ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬ ಘೋಷಣೆಗಳು ಕೂಗಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎಂ.ಸಿ.ಮಾಯಪ್ಪ, ರವಿ ಮಣ್ಣೂರು, ಎಸ್.ಬಸವರಾಜ, ಪಿ.ರಾಜ, ಸಿ.ಬಸವರಾಜ, ಕೆ.ಹೊನ್ನೂರಪ್ಪ ಸೇರಿದಂತೆ ಇತರರು ಇದ್ದರು.





