Ballari | ಮಣ್ಣಿನ ಆರೋಗ್ಯ ಕಾಪಾಡಲು ಸಾವಯವ ಗೊಬ್ಬರ ಬಳಕೆ ಅಗತ್ಯ : ಡಾ.ಕೃಷ್ಣರಾವ್

ಬಳ್ಳಾರಿ : ಮಣ್ಣಿನ ಆರೋಗ್ಯವನ್ನು ಸುಧಾರಿಸಿ ಕೃಷಿಯನ್ನು ಸುಸ್ಥಿರಗೊಳಿಸಲು ಹಸಿರು ಗೊಬ್ಬರ, ಕೊಟ್ಟಿಗೆ ಗೊಬ್ಬರ ಹಾಗೂ ಕೆರೆಯ ಹೂಳಿನ ಬಳಕೆ ಅತ್ಯಂತ ಮಹತ್ವದ್ದಾಗಿದೆ ಎಂದು ಐಸಿಎಆರ್–ಭಾರತೀಯ ಮಣ್ಣು ಮತ್ತು ನೀರು ಸಂರಕ್ಷಣಾ ಸಂಸ್ಥೆಯ ಮುಖ್ಯಸ್ಥ ಡಾ.ಬಿ. ಕೃಷ್ಣರಾವ್ ಹೇಳಿದರು.
ಐಸಿಎಆರ್ ಸಂಸ್ಥೆ ವತಿಯಿಂದ ‘ಮೇರಾ ಗಾಂವ್ ಮೇರಾ ಗೌರವ್’ ಕಾರ್ಯಕ್ರಮದಡಿ ಇಫ್ಕೋ ಸಹಯೋಗದಲ್ಲಿ ಬಳ್ಳಾರಿ ತಾಲೂಕಿನ ಬಿ. ಬೆಳಗಲ್ ತಾಂಡಾದಲ್ಲಿ ಬುಧವಾರ ಆಯೋಜಿಸಿದ್ದ ‘ಸ್ಮಾರ್ಟ್ ರಸಗೊಬ್ಬರ ಬಳಕೆ, ಪೋಷಕಾಂಶ ಬಳಕೆ ದಕ್ಷತೆ ಮತ್ತು ಮಣ್ಣಿನ ಆರೋಗ್ಯ ನಿರ್ವಹಣೆ’ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮತೋಲಿತ ರಸಗೊಬ್ಬರ ಬಳಕೆ, ನೈಸರ್ಗಿಕ ಹಾಗೂ ಸಾವಯವ ಕೃಷಿ ಪದ್ಧತಿ, ಪಶುಸಂಗೋಪನೆ ಮತ್ತು ತರಕಾರಿ ಬೆಳೆಗಳ ಮಹತ್ವದ ಬಗ್ಗೆ ರೈತರು ಅರಿವು ಹೊಂದಬೇಕು ಎಂದು ಹೇಳಿದರು.
ಮಣ್ಣು ವಿಭಾಗದ ಹಿರಿಯ ವಿಜ್ಞಾನಿ ಡಾ. ಮಹಿಪಾಲ್ ಚೌಧರಿ ಮಾತನಾಡಿ, ಸುಸ್ಥಿರ ಕೃಷಿಗಾಗಿ ಸರಿಯಾದ ಸಮಯದಲ್ಲಿ ಮತ್ತು ನಿಖರ ಪ್ರಮಾಣದಲ್ಲಿ ರಸಗೊಬ್ಬರ ಬಳಸುವುದು ಅಗತ್ಯ. ಬೇವು ಲೇಪಿತ ಯೂರಿಯಾ ಹಾಗೂ ಗಂಧಕ ಲೇಪಿತ ಯೂರಿಯಾದಂತಹ ನಿಧಾನ ಬಿಡುಗಡೆ ರಸಗೊಬ್ಬರಗಳ ಬಳಕೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಹಣ್ಣು ವಿಭಾಗದ ವಿಜ್ಞಾನಿ ಅನುಷಾ ಎನ್.ಎಂ. ಮಾತನಾಡಿ, ಮಣ್ಣಿನ ಪರೀಕ್ಷಾ ವರದಿ ಆಧರಿಸಿ ರಸಗೊಬ್ಬರ ಬಳಕೆ ಮಾಡಿದರೆ ಕೃಷಿ ವೆಚ್ಚ ಕಡಿಮೆಯಾಗಿ ಉತ್ಪಾದನೆ ಮತ್ತು ಲಾಭ ಹೆಚ್ಚುತ್ತದೆ ಎಂದು ತಿಳಿಸಿದರು. ಇದೇ ವೇಳೆ ಮಣ್ಣಿನ ಮಾದರಿ ಸಂಗ್ರಹಿಸುವ ವೈಜ್ಞಾನಿಕ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.
ಇಫ್ಕೋ ಬಳ್ಳಾರಿ ಮಾರ್ಕೆಟಿಂಗ್ ಮ್ಯಾನೇಜರ್ ಹನುಮಂತ್ ಮಾತನಾಡಿ, ಬೇವು ಲೇಪಿತ ಯೂರಿಯಾ ಮತ್ತು ನ್ಯಾನೋ ರಸಗೊಬ್ಬರಗಳ ಪ್ರಯೋಜನಗಳ ಕುರಿತು ರೈತರಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಇಫ್ಕೋ ಉತ್ಪನ್ನಗಳ ಪ್ರದರ್ಶನ ಹಾಗೂ ಡ್ರೋನ್ ಮೂಲಕ ರಸಗೊಬ್ಬರ ಸಿಂಪಡಣೆ ತಂತ್ರಜ್ಞಾನದ ಪ್ರಾತ್ಯಕ್ಷಿಕೆ ನಡೆಸಲಾಯಿತು. ಡ್ರೋನ್ ತಂತ್ರಜ್ಞಾನದಿಂದ ಸಮಯ, ಕಾರ್ಮಿಕ ವೆಚ್ಚ ಹಾಗೂ ರಸಗೊಬ್ಬರ ವ್ಯರ್ಥ ಬಳಕೆ ಕಡಿಮೆಯಾಗುವುದರ ಜೊತೆಗೆ ನಿಖರ ಸಿಂಪಡಣೆ ಸಾಧ್ಯವಾಗುತ್ತದೆ ಎಂದು ವಿವರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೈತರು ಮಣ್ಣಿನ ಆರೋಗ್ಯ, ಸಮತೋಲಿತ ರಸಗೊಬ್ಬರ ಬಳಕೆ ಹಾಗೂ ನಿಯಂತ್ರಿತ ಬಿಡುಗಡೆ ರಸಗೊಬ್ಬರಗಳ ಉಪಯೋಗದ ಕುರಿತು ಮಾಹಿತಿ ಪಡೆದುಕೊಂಡರು.






