Ballari | ʼವಿಜಯೀಭವʼ ಶಿಬಿರ ಸಮಾರೋಪ : ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಕಾರ್ಯಕ್ರಮ

ಸಂಡೂರು/ಬಳ್ಳಾರಿ : ರಾಜ್ಯದಲ್ಲೇ ಮೊದಲ ಬಾರಿಗೆ ಸರ್ಕಾರಿ ಶಾಲೆಗಳ ಹತ್ತನೇ ತರಗತಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ “ವಿಜಯೀಭವ” ಪಠ್ಯ ಪುಸ್ತಕ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಜಿಂದಾಲ್ ವಿದ್ಯಾನಗರದ ಜೆ-ಮ್ಯಾಕ್ಸ್ ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು.
ಜೀವನ್ ಸಂಗೀತ್ ಸಂಸ್ಥೆ ಹಮ್ಮಿಕೊಂಡಿದ್ದ ಈ ವಿಶೇಷ ಶಿಬಿರದಲ್ಲಿ ತಾಳೂರು, ಬನ್ನಿಹಟ್ಟಿ ಹಾಗೂ ವಡ್ಡು ಗ್ರಾಮದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಎರಡು ತಿಂಗಳ ಕಾಲ ಭಾಗವಹಿಸಿ ಹತ್ತನೇ ತರಗತಿಯ ಪಠ್ಯಾಭ್ಯಾಸದಲ್ಲಿ ತರಬೇತಿ ಪಡೆದರು.
ಶಿಬಿರದ ಅಂಗವಾಗಿ ವಿದ್ಯಾರ್ಥಿಗಳನ್ನು ಬೆಳಿಗ್ಗೆಯೇ ವಿದ್ಯಾನಗರಕ್ಕೆ ಕರೆದುಕೊಂಡು ಹೋಗಿ ಮಂದಿರ, ಓಪಿಜೆ ಮ್ಯೂಸಿಯಂ ಹಾಗೂ ಕಲಾಧಾಮಕ್ಕೆ ಭೇಟಿ ನೀಡಿಸಲಾಯಿತು. ಕಲಾಧಾಮದಲ್ಲಿ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಊಟದ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು.
ಸಮಾರೋಪ ಸಮಾರಂಭದಲ್ಲಿ ತಾಳೂರು ಶಾಲೆಯ ಮುಖ್ಯೋಪಾಧ್ಯಾಯ ಬಸವರಾಜ್ ಮಾತನಾಡಿ, “ಜೀವನ್ ಸಂಗೀತ್ ಸಂಸ್ಥೆಯ ಸಹಯೋಗದಲ್ಲಿ ನಡೆದ ಈ ತರಬೇತಿ ಶಿಬಿರದಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯೋಜನವಾಗಿದೆ. ಕಳೆದ ವರ್ಷ ನಡೆದ ಬೇಸಿಗೆ ಶಿಬಿರದ ಫಲವಾಗಿ 19 ವರ್ಷಗಳ ಬಳಿಕ ತಾಳೂರು ಶಾಲೆ ಹತ್ತನೇ ತರಗತಿಯಲ್ಲಿ ಶೇ.100 ಫಲಿತಾಂಶ ದಾಖಲಿಸಿತು. ಈ ಬಾರಿ ‘ನಮ್ಮ ಚಿತ್ತ ನೂರ ಅರವತ್ತೈದರತ್ತ’ ಎಂಬ ಗುರಿಯೊಂದಿಗೆ ಶ್ರಮಿಸುತ್ತಿದ್ದೇವೆ” ಎಂದು ಹೇಳಿದರು.
ಜಿಂದಾಲ್ ಆಡಳಿತಾಧಿಕಾರಿ ಶ್ರೀಮತಿ ಭವ್ಯ ಮಾತನಾಡಿ, “ಸರ್ಕಾರಿ ಶಾಲೆಗಳಲ್ಲಿಯೂ ಉತ್ತಮ ಸಾಧನೆ ಸಾಧ್ಯ ಎಂಬುದನ್ನು ಈ ಶಿಬಿರ ತೋರಿಸಿದೆ. ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಿ ಬೆಳೆಬೇಕು” ಎಂದು ಕರೆ ನೀಡಿದರು.
ಅಧಿಕಾರಿ ಶಂಕ್ರಪ್ಪ ಅವರು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಮಾತುಗಳ ಮೂಲಕ ನೀತಿಕಥೆಗಳನ್ನು ವಿವರಿಸಿದರು.
ಜೀವನ್ ಸಂಗೀತ್ ಸಂಸ್ಥೆಯ ಅಧ್ಯಕ್ಷೆ ಗೀತಾವೀರೇಶ್ ಮಾತನಾಡಿ, “ತಾಳೂರು ಶಾಲೆಯ ಫಲಿತಾಂಶ ಇಂದು ಜಿಲ್ಲೆಗೆ ಮಾದರಿಯಾಗಿದೆ. ನಮ್ಮ ಬೇಸಿಗೆ ಶಿಬಿರವೂ ಇದರಲ್ಲಿ ಪ್ರಮುಖ ಪಾತ್ರವಹಿಸಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಇನ್ನಷ್ಟು ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಮಕ್ಕಳಿಗಾಗಿ “ನರಸಿಂಹ” ಅನಿಮೇಟೆಡ್ ಚಲನಚಿತ್ರ ಪ್ರದರ್ಶಿಸಲಾಯಿತು.
ಕಾರ್ಯಕ್ರಮವನ್ನು ವೀರೇಂದ್ರ ನಿರೂಪಿಸಿದರು. ಸುದೀಪ್, ಪ್ರಾರ್ಥನಾ ಹಾಗೂ ಸುಪ್ರಿಯಾ ವಿದ್ಯಾರ್ಥಿಗಳ ವ್ಯವಸ್ಥೆಯನ್ನು ನೋಡಿಕೊಂಡರು.






