Ballari | ಕುರುಗೋಡಿನಲ್ಲಿ ವಿಶ್ವ ಝೂನೋಸಿಸ್ ದಿನಾಚರಣೆ

ಬಳ್ಳಾರಿ/ಕುರುಗೋಡು : ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಮ್ಮ ಕ್ಲಿನಿಕ್ ಹಾಗೂ ಕುರುಗೋಡು ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಸೋಮವಾರ ತಾಲೂಕು ಸಮುದಾಯ ಆರೋಗ್ಯ ಸಭಾಭವನದಲ್ಲಿ ವಿಶ್ವ ಝೂನೋಸಿಸ್ ದಿನಾಚರಣೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ದಂತ ವೈದ್ಯಾಧಿಕಾರಿ ಡಾ. ಗಾಯತ್ರಿ ಮಾತನಾಡಿ, 1885ರ ಜುಲೈ 6ರಂದು ವಿಜ್ಞಾನಿ ಲೂಯಿಸ್ ಪಾಶ್ಚರ್ ಅವರು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ರೇಬೀಸ್ ರೋಗಕ್ಕೆ ಮೊದಲ ಯಶಸ್ವಿ ಲಸಿಕೆ ನೀಡಿದ ದಿನದ ಸ್ಮರಣಾರ್ಥ ವಿಶ್ವ ಝೂನೋಸಿಸ್ ದಿನವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಈ ವರ್ಷದ ಘೋಷವಾಕ್ಯ “ಒಟ್ಟಾಗಿ ಕಾರ್ಯನಿರ್ವಹಿಸೋಣ; ಸಮುದಾಯದ ಕ್ರಿಯಾಶೀಲತೆಯ ಮೂಲಕ ಝೂನೋಟಿಕ್ ರೋಗಗಳನ್ನು ತಡೆಗಟ್ಟೋಣ” ಎಂಬುದಾಗಿದ್ದು, ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಮಾರಕ ರೋಗಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
ತಾಲೂಕಿನ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿ ಸಭೆಗಳನ್ನು ಆಯೋಜಿಸಿ, ರೈತರು ಹಾಗೂ ಸಾರ್ವಜನಿಕರಿಗೆ ಝೂನೋಟಿಕ್ ರೋಗಗಳ ತಡೆ, ಮುನ್ನೆಚ್ಚರಿಕೆ ಕ್ರಮಗಳು ಮತ್ತು ಆರೋಗ್ಯ ಸುರಕ್ಷತೆ ಕುರಿತು ಅರಿವು ಮೂಡಿಸುವಂತೆ ಆರೋಗ್ಯ ಸಿಬ್ಬಂದಿಗೆ ಸೂಚಿಸಲಾಯಿತು.
ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ರೋಹಿಣಿ, ಡಾ. ಜಿ. ಪಲ್ಲವಿ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಕೆ. ಮಂಜುನಾಥ, ಷಡಕ್ಷರಯ್ಯ ಸ್ವಾಮಿ, ಮಹೇಂದ್ರ ಕುಮಾರ್, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳಾದ ಡಿ. ಸುನೀತಾ, ಗಿರಿಜಾ, ರೇಣುಕಾ, ಜಯಶ್ರೀ, ಶುಶ್ರೂಷಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಕಿಶೋರಿಯರು, ಗರ್ಭಿಣಿಯರು, ಮಹಿಳೆಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.






