ಬಳ್ಳಾರಿ | ರಸಪ್ರಶ್ನೆ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಜ್ಞಾರ್ನಾಜನೆಗೆ ಪ್ರಯೋಜನಕಾರಿ : ಎಎಸ್ಐ ಬಸವರಾಜ

ಬಳ್ಳಾರಿ / ಕಂಪ್ಲಿ : ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದ್ದು, ವಿದ್ಯಾರ್ಥಿಗಳು ಈ ದಿಸೆಯಲ್ಲಿ ರಸಪ್ರಶ್ನೆ ಸೇರಿದಂತೆ ಇನ್ನಿತರ ಪರೀಕ್ಷೆಗಳನ್ನು ಎದುರಿಸುವ ಮೂಲಕ ಸಾಧನೆ ಮಾಡಲು ಸಾಧ್ಯ ಎಂದು ಕಂಪ್ಲಿ ಪೊಲೀಸ್ ಠಾಣೆಯ ಎಎಸ್ಐ ಬಸವರಾಜ ಅಭಿಪ್ರಾಯಪಟ್ಟರು.
ಕಂಪ್ಲಿ ಪೊಲೀಸ್ ಠಾಣೆವತಿಯಿಂದ ಪಟ್ಟಣದ ಓದ್ಸೋ ಜಡೇಯಮ್ಮ ಗುರುಸಿದ್ದಯ್ಯನವರ (ಶಾರದಾ) ಪ್ರೌಢಶಾಲೆಯಲ್ಲಿ ಸರ್ದಾರ್ ವಲ್ಲಬಾಯಿ ಪಟೇಲ್ ಐಕ್ಯತಾ(ಭಾವೈಕ್ಯತೆ)ದಿನದ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸ್ಪರ್ಧಾತ್ಮಕವಾಗಿ ತೊಡಗಿಸಿಕೊಂಡಾಗ ಜ್ಞಾನಾರ್ಜನೆ ಮಟ್ಟ ಹೆಚ್ಚಾಗುತ್ತದೆ ಎಂದರು.
ಶಾಲೆಯ ಆಡಳಿತಾಧಿಕಾರಿ ಚಂದ್ರಶೇಖರ ಮಾತನಾಡಿ, ಬದಲಾದ ಪರೀಕ್ಷೆ ಪದ್ಧತಿ ಮತ್ತು ವಿಷಯಗಳಿಗೆ ಅನುಗುಣವಾಗಿ ಮಕ್ಕಳನ್ನು ಅಣಿಗೊಳಿಸಬೇಕಾದ ಜವಾಬ್ಧಾರಿ ಶಿಕ್ಷಕರ ಮೇಲಿದೆ. ಶಿಕ್ಷಕರ ಶ್ರಮದಿಂದ ಶಾಲೆಗಳಿಗೆ ಉತ್ತಮ ಫಲಿತಾಂಶ ಬರಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಮುಖ್ಯಶಿಕ್ಷಕಿ ಜಿ.ಪದ್ಮಾವತಿ, ಪ್ರೌಢಶಾಲೆ ಸಹ ಶಿಕ್ಷಕರಾದ ಬಿ. ಜಿಲಾನ್, ರೇಣುಕಾ, ಸರೋಜ, ಸುನಿಲ್ ಮಾಲಿಪಾಟೀಲ್, ಕೆ.ಮಾಲನ್ ಬೀ, ಜಡೇಶ, ಸುಭಾಷ್, ಫಕೀರೇಶ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.





