ಬಳ್ಳಾರಿ | ವಡ್ಡರಬಂಡೆ ಶಾದಿ ಮಹಲ್ ಕಾಮಗಾರಿ ಶೀಘ್ರ ಆರಂಭ: ಶಾಸಕ ನಾರಾ ಭರತ್ ರೆಡ್ಡಿ

ಬಳ್ಳಾರಿ : ವಡ್ಡರಬಂಡೆ ಪ್ರದೇಶದಲ್ಲಿ ಶಾದಿ ಮಹಲ್ ನಿರ್ಮಾಣ ಕಾಮಗಾರಿ ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಮಂಗಳವಾರ ನಗರದ 3ನೇ ವಾರ್ಡ್ ವ್ಯಾಪ್ತಿಯ ಮುಸ್ಲಿಂ ಖಬರಸ್ತಾನದ ಕಂಪೌಂಡ್ ಹಾಗೂ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು.
ಸೈಯದ್ ನಾಸಿರ್ ಹುಸೇನ್ ಅವರ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಝಮೀರ್ ಅಹ್ಮದ್ ಖಾನ್ ಅವರ ನೆರವಿನಿಂದ ನಗರದಲ್ಲಿ ಎರಡು ಶಾದಿ ಮಹಲ್ ನಿರ್ಮಾಣಕ್ಕೆ ಈಗಾಗಲೇ ತೀರ್ಮಾನಿಸಲಾಗಿದೆ. ಇದರಿಂದ ಬಡ ಕುಟುಂಬಗಳ ಮಕ್ಕಳ ಮದುವೆ ಕಾರ್ಯಕ್ರಮಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ನಗರದ ಮುಸ್ಲಿಂ ಸಮುದಾಯದ ಯುವಕರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂಬುದು ನಮ್ಮ ಆಶಯವಾಗಿತ್ತು. ಅದೇ ರೀತಿ ಈಗ ನಗರದ ಈದ್ಗಾ ಹಾಗೂ ಖಬರಸ್ತಾನದ ಸ್ವಚ್ಛತೆ, ರಕ್ಷಣೆ ಮತ್ತು ಹಸೀರೀಕರಣ ಕಾರ್ಯವನ್ನು ಯುವಕರು ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು. ಇದೇ ರೀತಿಯಲ್ಲಿ ನಗರದಲ್ಲಿನ ಜನವಸತಿ ಬಡಾವಣೆಗಳಲ್ಲೂ ಹಸೀರೀಕರಣ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.
ಭೂಮಿ ಪೂಜೆಯ ನಂತರ “ಯೂತ್ ರೆವಲ್ಯೂಷನ್” ತಂಡದ ಸದಸ್ಯರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಹುಮಾಯೂನ್ ಖಾನ್, ಪಾಲಿಕೆಯ ಸದಸ್ಯರಾದ ಎಂ.ಪ್ರಭಂಜನಕುಮಾರ್, ನಾಜು, ಆಸಿಫ್, ಕಾಂಗ್ರೆಸ್ ಮುಖಂಡರಾದ ಆಯಾಜ್ ಅಹ್ಮದ್, ದಾದಾಭಾಯ್, ಕಣೇಕಲ್ ಮೆಹಬೂಬಸಾಬ, ಹುಸೇನ್ ಪೀರಾ, ಯೂನುಸ್ ಭಾಯ್, ಮಹಮ್ಮದ್ ಭಾಯ್, ಉಸ್ಮಾನ್, ಅನ್ವರ್, ಅರ್ಷದ್, ಅತೀಕ್, ತೌಸೀಫ್, ಸಮೀರ್, ಅಫಾಕ್, ನೂರ್, ಫರಾಜ್, ತಬರೇಜ್ ಮತ್ತಿತರರು ಹಾಜರಿದ್ದರು.







