ಬಳ್ಳಾರಿ | ಕಲಾವಿದರನ್ನು ಗೌರವಿಸುವ ಸಂಸ್ಕಾರ ಬೆಳೆಸಬೇಕು: ಚಂದ್ರಶೇಖರ ಗೌಡ

ಬಳ್ಳಾರಿ: ಕಲಾವಿದರನ್ನು ಪೋಷಿಸುವ ಹಾಗೂ ಗೌರವಿಸುವ ಕಲಾಸಂಸ್ಕಾರವನ್ನು ಪ್ರತಿಯೊಬ್ಬರೂ ಜೀವನದಲ್ಲಿ ರೂಡಿಸಿಕೊಂಡಾಗ ಮಾತ್ರ ಕಲೆಗೆ ನಿಜವಾದ ಗೌರವ ಸಿಗುತ್ತದೆ ಎಂದು ಯುವ ಉದ್ಯಮಿ ಎಂ. ಚಂದ್ರಶೇಖರ ಗೌಡ ಹೇಳಿದರು.
ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಸಿರುಗುಪ್ಪದ ನೇತ್ರ ಕಲಾ ಸಂಘದ 15ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರ ಮತ್ತು ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನೇತ್ರ ಕಲಾ ಸಂಸ್ಥೆ ಸಾಹಿತಿಗಳು, ಕಲಾವಿದರು ಹಾಗೂ ಸಮಾಜದ ವಿವಿಧ ಕ್ಷೇತ್ರದ ಸಾಧಕರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಸನ್ಮಾನಿಸುವ ಕಾರ್ಯ ಮೆಚ್ಚುವಂತಾಗಿದೆ. ಇತ್ತೀಚಿನ ದಿನಗಳಲ್ಲಿ ಮನುಷ್ಯರಲ್ಲಿ ತಿಳಿವಳಿಕೆ ಕಡಿಮೆಯಾಗಲು ಸ್ವಾರ್ಥಪರ ಆಲೋಚನೆ ಕಾರಣವಾಗಿದೆ. ಯುವಕರು ಸತ್ಯದ ಚಿಂತನೆಯ ಜೊತೆಗೆ ಸಂಸ್ಕಾರಯುತ ಕಲೆಯನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ವೀರೇಶ್ ದಳವಾಯಿ ಮಾತನಾಡಿ, ಎಲೆಮರೆಯ ಕಾಯಿಯಂತಿರುವ ಅನೇಕ ಕಲಾವಿದರನ್ನು ಸರ್ಕಾರ ಗುರುತಿಸಲು ಸಾಧ್ಯವಾಗುತ್ತಿಲ್ಲ. ಅಂತಹ ಕಲಾವಿದರನ್ನು ಗುರುತಿಸಿ ಪ್ರತಿವರ್ಷ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಗುತ್ತಿದೆ. ಕೋವಿಡ್ ಸಮಯದಲ್ಲಿ ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗಲಿಲ್ಲ. ಇದೀಗ 15ನೇ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಹಿತಿಗಳು, ಸಂಗೀತಜ್ಞರು, ಕಲಾವಿದರು, ಸಮಾಜಸೇವಕರು, ಪತ್ರಕರ್ತರು ಹಾಗೂ ಸಂಘ–ಸಂಸ್ಥೆಗಳ ಸಂಘಟಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೆ ಚಿಕ್ಕುಂತಿ ಮಹಾಮಠದ ಬಸವಲಿಂಗ ಶಿವಮೂರ್ತಿ ಸ್ವಾಮಿಗಳು ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಬಿ. ನಾಗರಾಜ, ಕೇಂದ್ರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷ ಮಾನಯ್ಯ, ಹಿರಿಯ ಸಾಹಿತಿ ಗಂಗಾಧರ ಪತ್ತಾರ್, ನೇತ್ರ ಕಲಾ ಸಂಘದ ಅಧ್ಯಕ್ಷ ದಳವಾಯಿ ಅಂಬಣ್ಣ, ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಎಲ್ಲನಗೌಡ, ರಂಗತೋರಣದ ಪ್ರಭುದೇವ್ ಕಪ್ಪಗಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.







