ಬಳ್ಳಾರಿ | ಮಹಿಳಾ ಸಬಲೀಕರಣ ಮಹೋತ್ಸವ : ಸಾಧಕಿಯರಿಗೆ ಸನ್ಮಾನ,

ಬಳ್ಳಾರಿ/ಸಂಡೂರು: ತಾಲ್ಲೂಕು ಆಡಳಿತ ಮತ್ತು ತಾಲೂಕು ಪಂಚಾಯಿತಿ ಸಂಡೂರು ಅವರ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ “ಮಹಿಳಾ ಸಬಲೀಕರಣ ಮಹೋತ್ಸವ”ವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ ವಿಜಯ ಸರ್ಕಲ್ನಿಂದ ಆದರ್ಶ ಕಲ್ಯಾಣ ಮಂಟಪದವರೆಗೆ ಬೃಹತ್ ಮೆರವಣಿಗೆ ನಡೆಯಿತು. ಕ್ಷೇತ್ರದ ಶಾಸಕಿ ಶ್ರೀಮತಿ ಅನ್ನಪೂರ್ಣಾ ಈ ತುಕಾರಾಮ್ ಡೊಳ್ಳು ಬಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಸಭಾ ಕಾರ್ಯಕ್ರಮದಲ್ಲಿ ಮಹಿಳಾ ಸಾಧಕಿಯರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಮಹಿಳಾ ದಿನಾಚರಣೆಯ ಅಂಗವಾಗಿ ಮಾರ್ಚ್ 8ರಂದು ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿದ್ದು, 700ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. ಮಾರ್ಚ್ 12ರಂದು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು, ಮತ್ತು ಮಾರ್ಚ್ 13ರಂದು ರಂಗೋಲಿ ಸ್ಪರ್ಧೆ ಹಾಗೂ ವಿವಿಧ ಆಟಗಳಲ್ಲಿ ಭಾಗವಹಿಸಿದ ಮಹಿಳೆಯರಿಗೆ ಬಹುಮಾನಗಳು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಿಶೇಷ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್, ಮಹಿಳೆಯರು ಶಿಕ್ಷಣದ ಮೂಲಕ ತಮ್ಮ ಸಾಮರ್ಥ್ಯವನ್ನು ಬೆಳೆಸಿಕೊಂಡರೆ ಸಮಾಜದಲ್ಲಿ ಮಹತ್ವಪೂರ್ಣ ಸಾಧನೆ ಸಾಧ್ಯ ಎಂದು ಹೇಳಿದರು. ಬಾಲ್ಯ ವಿವಾಹ ತಡೆ, ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸುವ ಅಗತ್ಯದ ಕುರಿತು ಕೂಡ ಅವರು ಕರೆ ನೀಡಿದರು.
ಬೇಸಾಯದಂತೆ, ಬೆಂಗಳೂರು ಮೂಲದ ಹಿರಿಯ ಪತ್ರಕರ್ತೆ ಹಾಗೂ ಸಾಹಿತಿ ಪ್ರತಿಭಾ ನಂದಕುಮಾರ್, ಮಹಿಳೆಯರ ಸಾಧನೆಗಳನ್ನು ಗುರುತಿಸುವ ಸಂಸ್ಕೃತಿ ಸಮಾಜದಲ್ಲಿ ಹೆಚ್ಚಾಗಬೇಕು ಎಂದು ಅಭಿಪ್ರಾಯಪಟ್ಟರು. “Give to Gain – ಕೊಟ್ಟು ಪಡೆದುಕೊಳ್ಳಿ” ಎಂಬ ಘೋಷವಾಕ್ಯದ ಅರ್ಥವನ್ನು ವಿವರಿಸಿ, ಮಹಿಳೆಯರಿಗೆ ಅವಕಾಶ, ಗೌರವ, ಜ್ಞಾನ, ನ್ಯಾಯ, ಸಂಪನ್ಮೂಲ ಮತ್ತು ಸಮಾನ ವೇತನ ನೀಡುವ ಪರಸ್ಪರ ಸಹಕಾರದ ಮನೋಭಾವ ಬೆಳೆಸಬೇಕು ಎಂದು ಹೇಳಿದರು.
ಸಭೆಯಲ್ಲಿ ಮಾತನಾಡಿದ ಕ್ಷೇತ್ರದ ಶಾಸಕಿ ಅನ್ನಪೂರ್ಣಾ ಈ ತುಕಾರಾಮ್, ತಮ್ಮ ರಾಜಕೀಯ ಜೀವನದ ಯಶಸ್ಸಿನ ಪಾಲನ್ನು ಕ್ಷೇತ್ರದ ಮಹಿಳೆಯರಿಗೆ ಸಮರ್ಪಿಸುತ್ತೇನೆ ಎಂದರು. ಮಹಿಳೆಯರು ಅಡುಗೆ ಮನೆಯಲ್ಲೇ ಸೀಮಿತವಾಗದೆ, ಅಂತರಿಕ್ಷವರೆಗೂ ಸಾಧನೆ ತೋರುತ್ತಿದ್ದಾರೆ. ಮಹಿಳೆಯರ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಲಾಗಿದ್ದು, ವಿದ್ಯಾಭ್ಯಾಸ ಮಧ್ಯದಲ್ಲಿ ನಿಲ್ಲಿಸಿದವರಿಗೆ ಮರುಅಧ್ಯಯನದ ಅವಕಾಶ ಕಲ್ಪಿಸಲಾಗಿದೆ. ಮಹಿಳೆಯರ ವಸತಿ ನಿಲಯಗಳು ಮತ್ತು ಬಿ.ಎಸ್.ಸಿ ನರ್ಸಿಂಗ್ ಕೋರ್ಸ್ ಆರಂಭಿಸುವ ಕುರಿತು ಸದನದಲ್ಲಿ ಚರ್ಚಿಸಿ ಅನುಮತಿ ದೊರೆತಿದೆ ಎಂದು ತಿಳಿಸಿದ್ದಾರೆ.
ಪ್ರತಿ ತಿಂಗಳ ನಾಲ್ಕನೇ ಶನಿವಾರವನ್ನು ಮಹಿಳೆಯರ ಸಮಸ್ಯೆಗಳನ್ನು ಆಲಿಸಲು ಮೀಸಲಿಟ್ಟಿದ್ದು, ಅವರ ಸಲಹೆ-ಸೂಚನೆಗಳನ್ನು ಪಡೆದುಕೊಳ್ಳಲಾಗುತ್ತಿದೆ. ಸಂಡೂರು ಕ್ಷೇತ್ರವನ್ನು ಸಮೃದ್ಧ ಕ್ಷೇತ್ರವನ್ನಾಗಿಸಲು ಎಲ್ಲರ ಸಹಕಾರ ಬೇಕೆಂದು ಅವರು ಕೋರಿದರು.
ಕಾರ್ಯಕ್ರಮದಲ್ಲಿ ಮಿನರಲ್ ಕಾರ್ಪೊರೇಷನ್ ಉಪಾಧ್ಯಕ್ಷ ಲಕ್ಷ್ಮಣ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿ ಉಪಾಧ್ಯಕ್ಷೆ ಆಶಾಲತಾ ಸೋಮಪ್ಪ, ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ನೂರುದ್ದೀನ್, ತಹಶೀಲ್ದಾರ ಅನಿಲ್ ಕುಮಾರ್, ಕಾರ್ಯನಿರ್ವಾಹಕ ಅಧಿಕಾರಿ ಮಡಿಗಿನ ಬಸಪ್ಪ, ಬಿಇಒ ಡಾ. ಐ.ಆರ್. ಅಕ್ಕಿ, ಸಿಡಿಪಿಒ ನಾಗರಾಜ್, ಮಹೇಶ್ ಗೌಡ, ವಲಿ ಬಾಷಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರು, ಗ್ರಾಮ ಪಂಚಾಯತ್ ಅಧ್ಯಕ್ಷೆಯರು, ತಾಲೂಕು ಸದಸ್ಯೆಯರು ಮತ್ತು ವಿವಿಧ ಇಲಾಖೆಗಳ ಮಹಿಳಾ ಸಿಬ್ಬಂದಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಭಾಗವಹಿಸಿದ ಎಲ್ಲಾ ಮಹಿಳೆಯರಿಗೆ ಊಟ ವ್ಯವಸ್ಥೆ ಮತ್ತು ಉಡುಗೊರೆ ನೀಡಲಾಯಿತು.







