ಮುದ್ರಣ ತಂತ್ರಜ್ಞಾನಕ್ಕೆ ಜೀವ ಸಂಕುಲ ಇರುವವರೆಗೂ ಸಾವಿಲ್ಲ: ಡಾ.ವಸುಂಧರಾ ಭೂಪತಿ

ಬಳ್ಳಾರಿ: ಮುದ್ರಣಗೊಳ್ಳುವ ಪುಸ್ತಕಗಳಿಗೂ ಹಾಗೂ ಮುದ್ರಣ ತಂತ್ರಜ್ಞಾನಕ್ಕೂ ಜೀವ ಸಂಕುಲ ಇರುವವರೆಗೂ ಸಾವಿಲ್ಲ ಎಂದು ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷರಾದ ಡಾ.ವಸುಂಧರಾ ಭೂಪತಿ ಹೇಳಿದರು.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಹಾಗೂ ಕರ್ನಾಟಕ ಪ್ರಕಾಶಕರ ಸಂಘದ ಜಂಟಿ ಸಹಭಾಗಿತ್ವದಲ್ಲಿ ಆಯೋಜಿಸಿರುವ ಎರಡು ದಿನಗಳ ಪುಸ್ತಕ ಪ್ರಕಾಶನ ಕಮ್ಮಟ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಡಾ.ವಸುಂಧರಾ ಭೂಪತಿ, ಎಐ, ಇ-ಪುಸ್ತಕಗಳು, ಪ್ರಿಂಟ್ ಆನ್ ಡಿಮಾಂಡ್(ಪಿಓಡಿ) ಮುಂತಾದ ತಂತ್ರಜ್ಞಾನದ ಯುಗದಲ್ಲಿ ಕೇವಲ ಗಂಟೆಯಲ್ಲಿಯೇ ಪುಸ್ತಕವನ್ನು ಹೊರತರಬಹುದು. ಆದರೆ ಮುದ್ರಣವಾಗುವ ಪುಸ್ತಕಗಳು, ದಿನನಿತ್ಯ ಬಳಸುವ (ಕರೆನ್ಸಿ) ನೋಟುಗಳು ಮುದ್ರಣದ ಅವಿಭಾಜ್ಯ ಅಂಗವಾಗಿದ್ದು, ಅವುಗಳು ಎಂದಿಗೂ ನಿಲ್ಲುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಕ್ರಿ.ಶ. 400ರಲ್ಲಿ ಚೀನಾದಲ್ಲಿ ಉಗಮವಾದ ಹಿರಾಕಸೂತ್ರ ಎಂಬ ಮುದ್ರಣವು ಮುಂದೆ ಜಪಾನ್, ಜರ್ಮನಿ ದೇಶಗಳಲ್ಲಿ ಅಚ್ಚುಮೊಳೆಗಳ ಮೂಲಕ ಮುಂದುವರೆದು ಗುಟೆನ್ಬರ್ಗ್ ಪ್ರೆಸ್ ವಿಕಸನಕ್ಕೆ ನಾಂದಿ ಹಾಡಿದವು. ಕ್ರಿ.ಶ.1556ರಲ್ಲಿ ಭಾರತದಲ್ಲಿ ಪ್ರಥಮ ಮುದ್ರಣ ಯಂತ್ರವು ಗೋವಾದಲ್ಲಿ ಬಂದಿಳಿಯಿತು. 1578ರಲ್ಲಿ ಭಾರತದ ಪ್ರಥಮ ಭಾಷಾ ಪುಸ್ತಕವಾದ ತಮಿಳಿನ ಥಂಬಿರನ್ ಒನಕ್ಕಮ್ ಪ್ರಕಟವಾಯಿತು ಎಂದು ಹೇಳಿದರು.
ವಿವಿಯ ಸಿಂಡಿಕೇಟ್ ಸದಸ್ಯರಾದ ಅಮರೇಶ್ ನುಗಡೋಣಿ ಮಾತನಾಡಿ, ಲೇಖಕ, ಪ್ರಕಾಶಕ, ಓದುಗ ಮತ್ತು ಪುಸ್ತಕಗಳು ಎಂಬ ನಾಲ್ಕು ದಿಸೆಯ ಅನನ್ಯವಾದ ಸಮಾಗಮ ನೆಲೆಗೊಂಡಿದೆ. 10ನೇ ಶತಮಾನದಲ್ಲಿ ಶಿಕ್ಷಿತರ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿದ್ದರಿಂದ ವಚನಕಾರರು, ಸಂತಕವಿಗಳು ತಮ್ಮ ಅನುಭವ, ಸಂವಾದ, ಚರ್ಚೆಗಳು ಎಂಬ ಮೌಖಿಕ ಸಂವಹನದ ಮೂಲಕ ಜನಪದ ಕಾವ್ಯಗಳನ್ನು ಎಲ್ಲೆಡೆ ಹರಡಿದರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವಿಯ ಕುಲಪತಿಗಳಾದ ಪ್ರೊ ಎಂ ಮುನಿರಾಜು ಮಾತನಾಡಿ, ಕಲೆ, ಸಾಹಿತ್ಯದ ಆಸಕ್ತಿ ಎಲ್ಲರಲ್ಲಿಯೂ ಕ್ಷೀಣಿಸುತ್ತಿದೆ. ಓದುವ, ಬರೆಯುವ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಯಲ್ಲಿ ವಿವಿಧ ತಾಂತ್ರಿಕ ಕೋರ್ಸ್ಗಳನ್ನು ಶೀಘ್ರದಲ್ಲೆ ಆರಂಭಿಸುವುದಾಗಿ ಕುಲಪತಿಗಳು ಘೋಷಿಸಿದರು.
ವಿವಿಯ ಮೌಲ್ಯಮಾಪನ ಕುಲಸಚಿವರಾದ ಪ್ರೊ ಎನ್ ಎಂ ಸಾಲಿ ಎರಡು ದಿನಗಳ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ವಿವಿಯ ಸಿಂಡಿಕೇಟ್ ಸದಸ್ಯರಾದ ಬಿ ಪೀರ್ಬಾಷಾ, ಶಿವಕುಮಾರ್ ಕೆ ಮತ್ತು ಕರ್ನಾಟಕ ಪ್ರಕಾಶಕರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ನ.ರವಿಕುಮಾರ್ ವೇದಕೆಯಲ್ಲಿದ್ದರು. ಕಾರ್ಯಕ್ರಮದ ಸಂಯೋಜಕರಾದ ವಿವಿಯ ಪ್ರಸಾರಾಂಗದ ಪ್ರಭಾರ ನಿರ್ದೇಶಕರಾದ ಪ್ರೊ.ತಿಪ್ಪೇರುದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಸಾಯನಶಾಸ್ತ್ರ ವಿಭಾಗದ ಪ್ರೊ ಅರುಣ್ಕುಮಾರ್ ಲಗಶೆಟ್ಟಿ ಸ್ವಾಗತಿಸಿದರು. ಡಾ ಶಶಿಧರ್ ಕೆಲ್ಲೂರ್ ನಿರೂಪಿಸಿದರು.







