ಕಂಪ್ಲಿ | ರಮಝಾನ್–ಯುಗಾದಿ ಹಬ್ಬಗಳನ್ನು ಸೌಹಾರ್ದದಿಂದ ಆಚರಿಸಿ : ಡಿವೈಎಸ್ಪಿ ಪ್ರಸಾದ್ ಗೋಖಲೆ

ಕಂಪ್ಲಿ: ಈ ಬಾರಿ ರಮಝಾನ್ ಹಾಗೂ ಯುಗಾದಿ ಹಬ್ಬಗಳು ಒಂದೇ ಸಮಯದಲ್ಲಿ ಬಂದಿರುವುದರಿಂದ ಎಲ್ಲರೂ ಸೌಹಾರ್ದಯುತವಾಗಿ ಹಬ್ಬಗಳನ್ನು ಆಚರಿಸಬೇಕು ಎಂದು ಡಿವೈಎಸ್ಪಿ ಪ್ರಸಾದ್ ಗೋಖಲೆ ತಿಳಿಸಿದ್ದಾರೆ.
ಪಟ್ಟಣದ ಕಂಪ್ಲಿ ಪೊಲೀಸ್ ಠಾಣೆ ಸಭಾಂಗಣದಲ್ಲಿ ಗುರುವಾರ ರಮಝಾನ್ ಮತ್ತು ಯುಗಾದಿ ಹಬ್ಬಗಳ ಅಂಗವಾಗಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಿಂದೂಗಳಿಗೆ ಯುಗಾದಿ ಹಾಗೂ ಮುಸ್ಲಿಂ ಸಮುದಾಯದವರಿಗೆ ರಮಝಾನ್ ಪವಿತ್ರ ಹಬ್ಬಗಳಾಗಿವೆ. ಎರಡೂ ಹಬ್ಬಗಳನ್ನು ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಗುತ್ತದೆ. ಕಿಡಿಗೇಡಿಗಳು ಹರಡುವ ವದಂತಿಗಳಿಗೆ ಕಿವಿಗೊಡದೇ ಎಲ್ಲರೂ ಶಾಂತಿಯುತವಾಗಿ ಹಬ್ಬಗಳನ್ನು ಆಚರಿಸಬೇಕು ಎಂದು ಅವರು ತಿಳಿಸಿದರು.
ಹಬ್ಬದ ವೇಳೆ ಯುವಕರು ಸಂಚಾರ ನಿಯಮಗಳನ್ನು ಉಲ್ಲಂಘಿಸದೇ, ನಿಯಮಾನುಸಾರ ವಾಹನ ಚಲಾಯಿಸಬೇಕು ಎಂದು ಸೂಚಿಸಿದರು. ಯಾವುದೇ ಅಹಿತಕರ ಘಟನೆಗಳು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಭೆಯಲ್ಲಿ ಮಾತನಾಡಿದ ಪಿ.ಐ ವಾಸುಕುಮಾರ್, ಹಬ್ಬಗಳ ಸಂದರ್ಭದಲ್ಲಿ ಯಾವುದೇ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ. ಹಬ್ಬಗಳನ್ನು ಶಾಂತಿ, ಸುವ್ಯವಸ್ಥೆ ಮತ್ತು ಸಾಮರಸ್ಯದಿಂದ ಆಚರಿಸುವುದೇ ಸಭೆಯ ಮುಖ್ಯ ಉದ್ದೇಶ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಕೆ.ಎಂ. ಹೇಮಯ್ಯಸ್ವಾಮೀ, ಎಪಿಎಂಸಿ ಅಧ್ಯಕ್ಷ ಎನ್. ಹಬೀಬಿ ರೆಹಮಾನ್, ಉಸ್ಮಾನ್, ಮಸ್ತನವಲಿ ಕಡಪ, ಮೈಮೂದಸಾಬ್, ವಾಹಿದ್ ಸಾಬ್, ಕರೆಕಲ್ ಮನೋಹರ್, ಎಲಿಗಾರ ನಾಗರಾಜ್, ಕೆ. ಮೆಹೆಬೂಬ್, ಸುದರ್ಶನ್ ರೆಡ್ಡಿ ಪತ್ರಯ್ಯಸ್ವಾಮಿ, ಮೌಲಾಹುಸೇನ್, ನವಾಬ್ ಸಾಬ್, ಸತ್ಯಪ್ಪ, ಹೊನ್ನೂರಸಾಬ್ ಸೇರಿದಂತೆ ಸರ್ವ ಧರ್ಮದ ಮುಖ್ಯಸ್ಥರು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಜರಿದ್ದರು.






