Sandur | ಸ್ಥಳೀಯ ಲಾರಿಗಳಿಗೆ ಆದ್ಯತೆ ನೀಡುವಂತೆ ಗಣಿ ಲಾರಿ ಮಾಲಕರ ಸಂಘದಿಂದ ಮನವಿ

ಸಂಡೂರು : ತಾಲೂಕಿನ ಧರ್ಮಾಪುರ ಗ್ರಾಮದ ಸಮೀಪದ ನರಸಿಂಹ ಐರನ್ ಓರ್ ಗಣಿ ಕಂಪನಿ ಹಾಗೂ ಸಿದ್ದಾಪುರ ಗ್ರಾಮದ ಬಳಿಯ ಕರಡಿಕೊಳ್ಳಿ ಐರನ್ ಓರ್ ಗಣಿ ಕಂಪನಿಗಳಿಂದ ಎಂಎಸ್ಪಿಎಲ್ ಬಲ್ಡೋಟ ಹಾಲವರ್ತಿ, ಕೊಪ್ಪಳ ಕಾರ್ಖಾನೆ ಮತ್ತು ವೈಟಿಜಿ ಎಂಎಸ್ಪಿಎಲ್ ಪ್ಲಾಂಟ್ಗೆ ನಡೆಯುತ್ತಿರುವ ಅದಿರು ಸಾಗಾಣಿಕೆಯಲ್ಲಿ ಹೊರ ಜಿಲ್ಲೆಗಳ 14 ಹಾಗೂ 16 ಚಕ್ರದ ಲಾರಿಗಳನ್ನು ಬಳಸುತ್ತಿರುವುದನ್ನು ತಕ್ಷಣ ನಿಲ್ಲಿಸಿ, ಸ್ಥಳೀಯ 10 ಹಾಗೂ 12 ಚಕ್ರದ ಲಾರಿಗಳಿಗೆ ಆದ್ಯತೆ ನೀಡುವಂತೆ ಗಣಿ ಲಾರಿ ಮಾಲೀಕರ ಸಂಘ ಸಂಡೂರು ತಾಲೂಕು (ರಿ) ವತಿಯಿಂದ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಜೆ. ಬಾಬುನಾಯ್ಕ ಅವರ ನೇತೃತ್ವದಲ್ಲಿ ಸಲ್ಲಿಸಲಾದ ಮನವಿಯಲ್ಲಿ, ಕಳೆದ ಒಂದು ವರ್ಷದಿಂದ ಹೊರ ಜಿಲ್ಲೆಗಳ ಭಾರೀ ಗಾತ್ರದ ಲಾರಿಗಳ ಮೂಲಕ ಅದಿರು ಸಾಗಾಣಿಕೆ ನಡೆಯುತ್ತಿದ್ದು, ಇದರಿಂದ ಟ್ರಾಫಿಕ್ ಜಾಮ್, ಅಪಘಾತಗಳ ಸಂಭವ, ರಸ್ತೆಗಳಲ್ಲಿ ಧೂಳು ಹೆಚ್ಚಳ ಸೇರಿದಂತೆ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ ಎಂದು ಆರೋಪಿಸಲಾಗಿದೆ.
ರೈತರು, ವಿದ್ಯಾರ್ಥಿಗಳು, ಆಂಬ್ಯುಲೆನ್ಸ್ ಸಂಚಾರ ಹಾಗೂ ಸಾಮಾನ್ಯ ಜನರ ಓಡಾಟಕ್ಕೂ ಸಮಸ್ಯೆಯಾಗುತ್ತಿದ್ದು, ಸ್ಥಳೀಯರ ಬದುಕಿನ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎಂದು ಸಂಘದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.
ಸಂಡೂರು, ಬಳ್ಳಾರಿ, ಹೊಸಪೇಟೆ ಹಾಗೂ ಕೊಪ್ಪಳ ಭಾಗಗಳಲ್ಲಿ ಸುಮಾರು 7 ಸಾವಿರಕ್ಕೂ ಹೆಚ್ಚು 10 ಮತ್ತು 12 ಚಕ್ರದ ಲಾರಿಗಳಿದ್ದು, 50 ಸಾವಿರಕ್ಕೂ ಹೆಚ್ಚು ಕುಟುಂಬಗಳು ಲಾರಿ ಉದ್ಯಮವನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿವೆ. ಗಣಿ ಪ್ರದೇಶದ ಅನೇಕರು ಚಾಲಕರು ಹಾಗೂ ಕ್ಲೀನರ್ಗಳಾಗಿ ಕೆಲಸ ಆರಂಭಿಸಿ ನಂತರ ಸ್ವಂತ ಲಾರಿಗಳನ್ನು ಖರೀದಿಸಿ ಜೀವನ ಕಟ್ಟಿಕೊಂಡಿದ್ದಾರೆ. ಆದರೆ ಇದೀಗ ಹೊರ ಜಿಲ್ಲೆಗಳ ಲಾರಿಗಳಿಗೆ ಹೆಚ್ಚಿನ ಅವಕಾಶ ನೀಡುತ್ತಿರುವುದು ಸ್ಥಳೀಯ ಲಾರಿ ಮಾಲೀಕರು ಹಾಗೂ ಚಾಲಕರ ಬದುಕಿಗೆ ದೊಡ್ಡ ಹೊಡೆತವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಗಣಿ ಕಂಪನಿಗಳಿಗೆ ಲೀಸ್ ನೀಡುವ ಸಂದರ್ಭದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯಲ್ಲಿ ಸ್ಥಳೀಯ ಲಾರಿಗಳಿಗೆ ಸಾಗಾಣಿಕೆ ಅವಕಾಶ ಕಲ್ಪಿಸುವುದು, ಸ್ಥಳೀಯ ಯುವಕರಿಗೆ ಉದ್ಯೋಗ ಹಾಗೂ ಟ್ರಾನ್ಸ್ಪೋರ್ಟ್ ಕೆಲಸ ನೀಡುವ ಭರವಸೆ ನೀಡಲಾಗಿತ್ತು. ಆದರೆ ಈಗ ಆ ಭರವಸೆಗಳನ್ನು ಕಡೆಗಣಿಸಿ ಹೊರ ಜಿಲ್ಲೆಗಳ ಲಾರಿಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಸಂಘ ಅಸಮಾಧಾನ ವ್ಯಕ್ತಪಡಿಸಿದೆ.
ಆದುದರಿಂದ ಹೊರ ಜಿಲ್ಲೆಗಳ 14 ಹಾಗೂ 16 ಚಕ್ರದ ಲಾರಿಗಳ ಮೂಲಕ ನಡೆಯುತ್ತಿರುವ ಅದಿರು ಸಾಗಾಣಿಕೆಯನ್ನು ತಕ್ಷಣ ನಿಲ್ಲಿಸಿ, ಸ್ಥಳೀಯ ಲಾರಿಗಳಿಗೆ ಅವಕಾಶ ನೀಡುವುದರ ಜೊತೆಗೆ ನ್ಯಾಯಸಮ್ಮತ ಹಾಗೂ ವೈಜ್ಞಾನಿಕ ದರ ನಿಗದಿ ಮಾಡಿಸಬೇಕು ಎಂದು ಒತ್ತಾಯಿಸಲಾಗಿದೆ.
ಮನವಿಯನ್ನು ಪರಿಶೀಲಿಸಿ ಏಳು ದಿನಗಳೊಳಗಾಗಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಕಾನೂನುಬದ್ಧವಾಗಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಸಂಘ ಎಚ್ಚರಿಕೆ ನೀಡಿದೆ.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಜಿ. ಸಿದ್ದಪ್ಪ, ಉಪಾಧ್ಯಕ್ಷ ಕೆ. ಹೊಳಿಯಪ್ಪ, ಕೆ.ಕೆ.ದಾದಾಖಲಂದರ್, ಚಂದ್ರಶೇಖರ್ ಎಚ್.ಒ., ಸ್ವಾಮಿ (ಒಟಿಎಸ್), ಕುಂಬಾರ್ ಶಿವಮೂರ್ತಿ, ಸಿದ್ದಪ್ಪ, ಮಂಜುನಾಯ್ಕ, ಎಂ.ಬಸವರಾಜ್, ಎಚ್.ಜಂಬಯ್ಯ, ಹೆಚ್. ಹುಸೇನ್ ಬಾಷಾ, ಜಿ.ಸಿ.ಮದ್ದಾನಸ್ವಾಮಿ, ಟಿ.ಜಿ.ವಿಜಯ್ ಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ಜಿ.ಮಲ್ಲಿಕಾರ್ಜುನ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.






