Sandur | ನಿಡುಗುರ್ತಿ ಅರಿವು ಕೇಂದ್ರ ಮಧ್ಯಾಹ್ನದ ಬಳಿಕ ಬಂದ್ : ಸಾರ್ವಜನಿಕರ ಆಕ್ರೋಶ

ಸಂಡೂರು: ಜಿಲ್ಲೆಯ ಸಂಡೂರು ತಾಲೂಕಿನ ನಿಡುಗುರ್ತಿ ಗ್ರಾಮ ಪಂಚಾಯಿತಿ ಕೇಂದ್ರದ ಆವರಣದಲ್ಲಿರುವ ಅರಿವು ಕೇಂದ್ರ (ಗ್ರಂಥಾಲಯ) ಕಳೆದ ಏಪ್ರಿಲ್ ಮತ್ತು ಮೇ ತಿಂಗಳಿಂದ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಕಚೇರಿಗಳು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1:30ರವರೆಗೆ ಕಾರ್ಯನಿರ್ವಹಿಸುತ್ತಿದ್ದರೂ, ಗ್ರಂಥಾಲಯಗಳಿಗೆ ಪ್ರತ್ಯೇಕ ಆದೇಶ ಇಲ್ಲದಿದ್ದರೂ ನಿಡುಗುರ್ತಿ ಅರಿವು ಕೇಂದ್ರದ ಗ್ರಂಥಪಾಲಕರು ಇದೇ ವೇಳಾಪಟ್ಟಿಯನ್ನು ಅನುಸರಿಸುತ್ತಿದ್ದಾರೆ ಎನ್ನಲಾಗಿದೆ.
ಈ ಕುರಿತು ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದಾಗ, “ಅರಿವು ಕೇಂದ್ರದ ಸಮಯ ಪಾಲನೆ ಪ್ರತ್ಯೇಕವಾಗಿದ್ದು, ಅವರು ತಮ್ಮ ನಿಯಮಾನುಸಾರ ಕಾರ್ಯನಿರ್ವಹಿಸುತ್ತಾರೆ” ಎಂದು ಸ್ಪಷ್ಟನೆ ನೀಡಿರುವುದಾಗಿ ತಿಳಿದುಬಂದಿದೆ.
ಗ್ರಂಥಪಾಲಕರ ತಾಲೂಕು ಅಧ್ಯಕ್ಷ ಶಿವಕುಮಾರ್ ದೂರವಾಣಿ ಮೂಲಕ ಪ್ರತಿಕ್ರಿಯಿಸಿ, ಮುಂದಿನ ದಿನಗಳಲ್ಲಿ ನಿಯಮಿತ ಸಮಯ ಪಾಲನೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಆದರೆ ಮಧ್ಯಾಹ್ನದ ನಂತರವೂ ಅರಿವು ಕೇಂದ್ರ ಮುಚ್ಚಿರುವುದರಿಂದ ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಯುವಕರು ಹಾಗೂ ಓದುಪ್ರಿಯರು ನಿರಾಸೆಯಿಂದ ಹಿಂದಿರುಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಲಾಗಿದೆ.
ಗ್ರಂಥಪಾಲಕರ ಬೇಜವಾಬ್ದಾರಿ ಹಾಗೂ ಸಮಯ ಪಾಲನೆಯ ಕೊರತೆಯಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಅರಿವು ಕೇಂದ್ರವನ್ನು ನಿಯಮಿತ ವೇಳಾಪಟ್ಟಿಯಂತೆ ನಡೆಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ನಾವು ಪ್ರತಿದಿನ ಸಂಜೆ ವೇಳೆಯಲ್ಲಿ ಓದಲು ಹಾಗೂ ಮಾಹಿತಿ ಪಡೆಯಲು ಅರಿವು ಕೇಂದ್ರಕ್ಕೆ ಬರುತ್ತೇವೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಗ್ರಂಥಾಲಯ ಮುಚ್ಚಿರುತ್ತದೆ. ಯಾವುದೇ ನಿಗದಿತ ಸಮಯ ಪಾಲನೆ ಇಲ್ಲದಿರುವುದು ಸಾರ್ವಜನಿಕರಿಗೆ ದೊಡ್ಡ ತೊಂದರೆಯಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ‘ಬೇಸಿಗೆ ರಜೆ ಇದೆ’ ಎಂಬ ಉತ್ತರ ನೀಡಲಾಗುತ್ತಿದೆ. ಸಾರ್ವಜನಿಕರಿಗಾಗಿ ಇರುವ ಅರಿವು ಕೇಂದ್ರ ನಿಯಮಿತವಾಗಿ ಕಾರ್ಯನಿರ್ವಹಿಸಬೇಕು.
-ಎಸ್. ಹುಲಿಗೇಶ, ಕರ್ನಾಟಕ ರಕ್ಷಣಾ ವೇದಿಕೆಯ ಸಾಮಾಜಿಕ ಜಾಲತಾಣದ ಅಧ್ಯಕ್ಷ, ಸಂಡೂರು ತಾಲೂಕು






