Siruguppa | ಬಡವರ ಗುಡಿಸಲು ತೆರವು ವಿರೋಧಿಸಿ ಮಾಜಿ ಶಾಸಕ ಸೋಮಲಿಂಗಪ್ಪ ಆಕ್ರೋಶ

ಸಿರುಗುಪ್ಪ: ಬಡ ಕುಟುಂಬಗಳ ಗುಡಿಸಲುಗಳನ್ನು ತೆರವುಗೊಳಿಸಿ ಅದೇ ಜಾಗದಲ್ಲಿ ಪಟ್ಟಣ ಪಂಚಾಯಿತಿಯ ನೂತನ ಕಾರ್ಯಾಲಯ ಕಟ್ಟಡ ನಿರ್ಮಿಸಲು ಮುಂದಾಗಿರುವ ಕ್ರಮಕ್ಕೆ ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ವಿಚಾರವಾಗಿ ಹಾಲಿ ಶಾಸಕ ಬಿ.ಎಂ. ನಾಗರಾಜ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ತೆಕ್ಕಲಕೋಟೆಯಲ್ಲಿ ನಡೆಯಿತು.
ತಾಲೂಕಿನ ತೆಕ್ಕಲಕೋಟೆ ಪಟ್ಟಣದ 2ನೇ ವಾರ್ಡ್ನ ನಿಟ್ಟೂರು ರಸ್ತೆಯಲ್ಲಿರುವ ಪೌರಕಾರ್ಮಿಕರ ವಸತಿಗೃಹದ ಜಾಗದಲ್ಲಿ ಅನಧಿಕೃತ ಗುಡಿಸಲುಗಳ ತೆರವು ಕಾರ್ಯಾಚರಣೆ ನಡೆಯುತ್ತಿದ್ದ ಸ್ಥಳಕ್ಕೆ ಶಾಸಕ ಬಿ.ಎಂ. ನಾಗರಾಜ ಭೇಟಿ ನೀಡಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ಸೋಮಲಿಂಗಪ್ಪ, “ಬಡವರನ್ನು ಒಕ್ಕಲೆಬ್ಬಿಸಿ ಪಟ್ಟಣ ಪಂಚಾಯಿತಿ ಕಾರ್ಯಾಲಯ ನಿರ್ಮಿಸುವ ಅಗತ್ಯವೇನು? ಯಾರನ್ನು ಮೆಚ್ಚಿಸಲು ಈ ಕಾರ್ಯ ಮಾಡುತ್ತಿದ್ದೀರಿ?” ಎಂದು ಪ್ರಶ್ನಿಸಿ ಅಸಮಾಧಾನ ವ್ಯಕ್ತಪಡಿಸಿದರು.
ಎರಡು ಎಕರೆ ಜಾಗದಲ್ಲಿ ಈಗಾಗಲೇ ಪೊಲೀಸ್ ವಸತಿಗೃಹ, ನೀರಾವರಿ ಇಲಾಖೆಯ ವಸತಿಗೃಹ, ಪಶು ಆಸ್ಪತ್ರೆ ಹಾಗೂ ಇಂದಿರಾ ಕ್ಯಾಂಟೀನ್ಗೆ ಬಹುತೇಕ ಜಾಗ ಬಳಕೆಯಾಗಿದೆ. ಪೌರಕಾರ್ಮಿಕರ ವಸತಿಗೃಹಕ್ಕೆ ಮೀಸಲಿಟ್ಟ ಜಾಗದಲ್ಲಿ ಪಟ್ಟಣ ಪಂಚಾಯಿತಿ ಕಾರ್ಯಾಲಯ ನಿರ್ಮಿಸುವುದು ಅವೈಜ್ಞಾನಿಕ. ರಾಷ್ಟ್ರೀಯ ಹೆದ್ದಾರಿ ಸಮೀಪ ಕೆಇಬಿ ಹಿಂಭಾಗದಲ್ಲಿರುವ ಜಾಗದಲ್ಲಿ ಕಚೇರಿ ನಿರ್ಮಿಸಬೇಕು ಎಂದು ಸೋಮಲಿಂಗಪ್ಪ ಆಗ್ರಹಿಸಿದರು.
ಪರಿಹಾರ, ನಿವೇಶನದ ಭರವಸೆ :
ಸ್ಥಳದಲ್ಲಿ ಧರಣಿ ನಡೆಸುತ್ತಿದ್ದ ಕುಟುಂಬಗಳನ್ನು ಶಾಸಕ ಬಿ.ಎಂ. ನಾಗರಾಜ ಭೇಟಿ ಮಾಡಿ, ಸರ್ಕಾರದ ವತಿಯಿಂದ ಪರಿಹಾರ ಹಾಗೂ ನಿವೇಶನ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
“ಪರಿಹಾರ ದೊರೆಯುವವರೆಗೆ ಜಾಗ ಖಾಲಿ ಮಾಡುವುದಿಲ್ಲ. ಪರಿಹಾರ ಸಿಗುವವರೆಗೆ ಧರಣಿ ಮುಂದುವರಿಸುತ್ತೇವೆ” ಎಂದು ಧರಣಿ ನಿರತ ಮಲ್ಲಮ್ಮ ಹೇಳಿದರು.
ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿಪಿಐಗಳಾದ ಚಂದನ್ ಗೋಪಾಲ, ಹನುಮಂತಪ್ಪ, ಪಿಎಸ್ಐಗಳಾದ ಸದ್ದಾಂ ಹುಸೇನ್, ಪರಶುರಾಮ, ಶಶಿಧರ ನಾಯಕ ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಬಂದೋಬಸ್ತ್ ಕೈಗೊಂಡಿದ್ದರು.
ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಬಲಪ್ಪ, ನಾಗಪ್ಪ, ನರೇಂದ್ರಸಿಂಹ, ಶ್ಯಾಮಸುಂದರ, ಖಾದರ್ಭಾಷ ಹಾಗೂ ಬಿಜೆಪಿ ತಾಲೂಕು ಅಧ್ಯಕ್ಷ ಕುಂಟ್ನಾಳ್ ಮಲ್ಲಿಕಾರ್ಜುನಸ್ವಾಮಿ, ಮಂಜುನಾಥ, ರಾಘವೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.






