Siruguppa | ತೆಕ್ಕಲಕೋಟೆಯಲ್ಲಿ ವಿಜಯನಗರ ಕಾಲದ ಬಂಡೆಗಲ್ಲು ಶಾಸನ ಪತ್ತೆ

ಸಿರುಗುಪ್ಪ : ತಾಲೂಕಿನ ತೆಕ್ಕಲಕೋಟೆಯಲ್ಲಿ ಈಚೆಗೆ ಪ್ರಾಗೈತಿಹಾಸಿಕ ಕಾಲದ ಉತ್ಖನನ ನಡೆದ ‘ಗೌಡ್ರ ಮೂಲೆ’ ಪ್ರದೇಶದಲ್ಲಿ ಕೆರೆ ನಿರ್ಮಾಣಕ್ಕೆ ಸಂಬಂಧಿಸಿದ ಬಂಡೆಗಲ್ಲು ಶಾಸನವೊಂದು ಪತ್ತೆಯಾಗಿದೆ.
ಸ್ಥಳೀಯ ಇತಿಹಾಸ ಸಂಶೋಧನಾರ್ಥಿ ಮನೋಹರ್ ಸಿ.ಎಂ ಅವರು ಶಾಸನವನ್ನು ಗುರುತಿಸಿದ್ದು, ಧಾರವಾಡದ ಲಿಪಿತಜ್ಞ ಮಾರುತಿ ಭಜಂತ್ರಿ ಅಧ್ಯಯನ ನಡೆಸಿದ್ದಾರೆ. ಶಾಸನದ ಲಿಪಿ ಹಾಗೂ ಬರವಣಿಗೆಯ ಶೈಲಿಯನ್ನು ಆಧರಿಸಿ ಇದು ವಿಜಯನಗರ ಅಥವಾ ವಿಜಯನಗರೋತ್ತರ ಕಾಲಘಟ್ಟದ (17ರಿಂದ 18ನೇ ಶತಮಾನ) ಶಾಸನವಾಗಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆರು ಸಾಲುಗಳನ್ನು ಹೊಂದಿರುವ ಈ ಬಂಡೆಗಲ್ಲು ಶಾಸನದಲ್ಲಿ ಕನ್ನಡ ಲಿಪಿ ಬಳಸಲಾಗಿದ್ದು, ಆರಂಭದಲ್ಲಿ ಸೂರ್ಯ ಮತ್ತು ಚಂದ್ರನ ಸಂಕೇತಗಳನ್ನು ಕೆತ್ತಲಾಗಿದೆ. “ಟೆಕಲಕೊಟೆ ನಾಡಗೌಡ ಯರೆ ತ್ರಿಜಣ ಗೌಡನ ಮಗ ಮಲಣಗೌಡನ ಮಗ ಚಿಣಗೌಡನ ಮಗ ಪ್ರಜಟನ ಮಗ ಗೌಡಪನ ಮಗ ತ್ರಿಚಣ ಚನ್ನವಿರಪ ಗೌಡನು ಕಟಿಸಿದ ಕೆರೆ” ಎಂದು ಶಾಸನದಲ್ಲಿ ಉಲ್ಲೇಖಿಸಲಾಗಿದೆ.
ಈ ಪ್ರದೇಶದಲ್ಲಿ ಗೌಡರ ಅಧಿಪತ್ಯ ಇದ್ದ ಹಿನ್ನೆಲೆಯಲ್ಲಿ ಈ ಸ್ಥಳಕ್ಕೆ ‘ಗೌಡ್ರ ಮೂಲೆ’ ಎಂಬ ಹೆಸರು ಬಂದಿರಬಹುದು ಎಂಬುದನ್ನು ಶಾಸನ ಸೂಚಿಸುತ್ತದೆ. ಜೊತೆಗೆ ತೆಕ್ಕಲಕೋಟೆಯನ್ನು “ಟೆಕಲಕೊಟೆ” ಎಂದು ಉಲ್ಲೇಖಿಸಿರುವುದು ಐತಿಹಾಸಿಕ ಮಹತ್ವ ಪಡೆದಿದೆ.
ಶಾಸನದ ಪ್ರಕಾರ ತ್ರಿಚಣ ಚನ್ನವಿರಪ ಗೌಡನು ತಾನು ನಿರ್ಮಿಸಿದ ಕೆರೆಯ ನೆನಪಿಗಾಗಿ ಹಾಗೂ ತನ್ನ ವಂಶದ ಪ್ರತಿಷ್ಠೆ ತೋರಿಸುವ ಉದ್ದೇಶದಿಂದ ಈ ಶಾಸನ ಕೆತ್ತಿಸಿದ್ದಾನೆ ಎಂದು ತಿಳಿದುಬಂದಿದೆ. ವಿಜಯನಗರ ಕಾಲದಲ್ಲಿ ನಾಡಗೌಡರಾಗಿದ್ದ ತನ್ನ ಹಿರಿಯರ ಹೆಸರನ್ನೂ ಶಾಸನದಲ್ಲಿ ದಾಖಲಿಸಿರುವುದು ವಿಶೇಷವಾಗಿದೆ.
ಇದೇ ವೇಳೆ, ತೆಕ್ಕಲಕೋಟೆ ಕುರುಗೋಡಿನ ಸಿಂಧರ ಕಾಲದಲ್ಲಿ “ತೆಕ್ಕೆಕಲ್ಲು 12” ಎಂಬ ಹೆಸರಿನಿಂದ ಪ್ರಸಿದ್ಧಿಯಾಗಿದ್ದು, ವಿಜಯನಗರ ಕಾಲದಲ್ಲಿಯೂ ಪ್ರಮುಖ ನಾಡಾಗಿ ಗುರುತಿಸಿಕೊಂಡಿತ್ತು ಎಂಬ ಮಾಹಿತಿ ದೊರೆತಿದೆ.
ಬೃಹತ್ ಬಂಡೆಯ ಮೇಲೆ ಕೆತ್ತಲಾದ ಈ ಶಾಸನದ ಮುಂಭಾಗದಲ್ಲೇ ಕೆರೆಯ ಕುರುಹುಗಳು ಕಂಡುಬರುತ್ತಿದ್ದು, ಪ್ರಸ್ತುತ ಅದನ್ನು “ಗುನ್ನಯ್ಯನ ಕೆರೆ” ಎಂದು ಕರೆಯಲಾಗುತ್ತಿದೆ. ಕೃಷಿ, ಸಾರ್ವಜನಿಕರ ಉಪಯೋಗ ಹಾಗೂ ಪ್ರಾಣಿ-ಪಕ್ಷಿಗಳಿಗೆ ನೀರುಣಿಸುವ ಉದ್ದೇಶದಿಂದ ಕೆರೆಯನ್ನು ನಿರ್ಮಿಸಿದ್ದ ಮಹತ್ವದ ಕಾರ್ಯವನ್ನು ಈ ಶಾಸನ ಸ್ಮರಿಸುತ್ತದೆ.
ಶಾಸನ ಪತ್ತೆ ಕಾರ್ಯದಲ್ಲಿ ಅಶೋಕ್ ಅಬಕಾರಿ ಹಾಗೂ ಎಂ. ನಾಗರಾಜ ಸಹಕರಿಸಿದ್ದಾರೆ.






