ಅಬಕಾರಿ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಈಡಿಗ, ಬಿಲ್ಲವ ಸಮಾಜದ ಉದ್ದಿಮೆದಾರರಿಗೆ ಲಾಭಾಂಶ ನೀಡಲು ಸಮಿತಿ ರಚನೆ: ಆರ್.ಬಿ.ತಿಮ್ಮಾಪುರ

ಬೆಂಗಳೂರು, ಆ.14 : ಅಬಕಾರಿ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಈಡಿಗ, ಬಿಲ್ಲವ ಸಮಾಜದ ಉದ್ದಿಮೆದಾರರಿಗೆ ಲಾಭಾಂಶ ನೀಡಲು ಸಮಿತಿ ರಚಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದ್ದಾರೆ.
ಗುರುವಾರ ವಿಧಾನ ಪರಿಷತ್ನ ಶೂನ್ಯವೇಳೆಯಲ್ಲಿ ಕಾಂಗ್ರೆಸ್ನ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, ‘ತೆಲಂಗಾಣದಲ್ಲಿ ಅಬಕಾರಿ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಗೌಡ ಸಮುದಾಯಕ್ಕೆ ಅಲ್ಲಿನ ಸರಕಾರ ವ್ಯಾವಹಾರಿಕ ಬೆಂಬಲದ ಜತೆಗೆ, ಲಾಭಾಂಶವನ್ನೂ ನೀಡುತ್ತಿದೆ’ ಎಂದು ಗಮನ ಸೆಳೆದಿದರು.
ಮೊದಲು ಅಬಕಾರಿ ಮೂಲದಿಂದ ದೊರೆಯುತ್ತಿದ್ದ ಲಾಭದಲ್ಲಿ ಶೇ.20ರಷ್ಟು ಮೂಲಕಸುಬುದಾರ ಕುಟುಂಬಗಳಿಗೆ ನೀಡಲಾಗುತ್ತಿತ್ತು. ಈಗ ಅದನ್ನು ಶೇ.10ಕ್ಕೆ ಇಳಿಸಲಾಗಿದೆ. ಸನ್ನದು ಶುಲ್ಕವನ್ನೂ ವಿಧಿಸಲಾಗುತ್ತಿದೆ. ಉದ್ದೇಶಪೂರ್ವಕವಾಗಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಇಂತಹ ಕಿರುಕುಳಗಳಿಂದಾಗಿ ವೃತ್ತಿ ಘೋಷಣೆ ಮಾಡಿಕೊಂಡಿದ್ದ ಶೇ.25ರಷ್ಟು ಮಂದಿ ಮೂಲ ವೃತ್ತಿ ತೊರೆದಿದ್ದಾರೆ. ಸರಕಾರ ಅವರ ನೆರವಿಗೆ ನಿಲ್ಲಬೇಕು. ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ನೀಡಿರುವ ಸಲಹೆಗಳನ್ನು ಪರಿಗಣಿಸಬೇಕು ಎಂದು ಬಿ.ಕೆ. ಹರಿಪ್ರಸಾದ್ ಒತ್ತಾಯಿಸಿದರು.
ಇದಕ್ಕೆ ಉತ್ತರ ನೀಡಿದ ಸಚಿವ ಆರ್.ಬಿ. ತಿಮ್ಮಾಪುರ, ರಾಜ್ಯದಲ್ಲೂ ಈ ಸೌಲಭ್ಯವನ್ನು ಮೂಲ ಕಸುಬುದಾರರಾದ ಈಡಿಗ, ಬಿಲ್ಲವರಿಗೆ ನೀಡಲು ಸರಕಾರ ಸಿದ್ದವಿದೆ. ಸಮಿತಿ ವರದಿ ನೀಡಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.







