ನಟ ದರ್ಶನ್ ಪತ್ನಿ ಮನೆಯಲ್ಲಿ ನಗದು ಕಳ್ಳತನ : ಪ್ರಕರಣ ದಾಖಲು

ಬೆಂಗಳೂರು, ಸೆ.13: ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರ ಮನೆಯಲ್ಲಿ 3 ಲಕ್ಷ ರೂಪಾಯಿ ನಗದು ಕಳ್ಳತನವಾಗಿರುವ ಸಂಬಂಧ ಇಲ್ಲಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ನಟ ದರ್ಶನ್ ಮ್ಯಾನೇಜರ್ ನಾಗರಾಜ್ ಎಂಬುವರು ನೀಡಿದ ದೂರಿನನ್ವಯ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಕೈಗೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ವಾಸವಿರುವ ಹೊಸಕೆರೆಹಳ್ಳಿಯ ಅಪಾರ್ಟ್ಮೆಂಟ್ನ ಫ್ಲ್ಯಾಟ್ನಲ್ಲಿ ಘಟನೆ ನಡೆದಿದ್ದು, ಸೆಪ್ಟೆಂಬರ್ 4ರಂದು ವಿಜಯಲಕ್ಷ್ಮೀ ಮೈಸೂರಿಗೆ ತೆರಳಿದ್ದರು. ಮನೆಯ ಬೀಗವನ್ನು ತನ್ನ ತಾಯಿಗೆ ಕೊಟ್ಟು ಕೆಲಸದ ಮೇಲೆ ಮ್ಯಾನೇಜರ್ ನಾಗರಾಜ್ ಕೂಡ ಹೊರಗೆ ತೆರಳಿದ್ದಾರೆ. ಬಳಿಕ ಸೆ.8ರಂದು ಮನೆಯ ವಾರ್ಡ್ ರೋಬ್ನಲ್ಲಿ ನೋಡಿದಾಗ ಹಣ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಕೂಡಲೇ ಮನೆಯ ಎಲ್ಲೆ ಕಡೆಗಳಲ್ಲಿ ವಿಜಯಲಕ್ಷ್ಮೀ ಹಾಗೂ ಮ್ಯಾನೇಜರ್ ನಾಗರಾಜ್ ಹುಡುಕಾಟ ನಡೆಸಿದ್ದಾರೆ. ಎಲ್ಲಿಯೂ ಪತ್ತೆಯಾಗಿಲ್ಲ. ಬಳಿಕ ಮನೆಯ ಕೆಲಸದವರನ್ನು ವಿಚಾರಿಸಿದಾಗ ಹಣದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಈ ಘಟನೆಯ ಹಿಂದೆ ಮನೆ ಕೆಲಸದವರ ಕೈವಾಡ ಇದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.





