ದಲಿತ ಮಹಿಳೆಯರ ವಿರುದ್ಧ ಹೇಳಿಕೆ ಆರೋಪ | ಯತ್ನಾಳ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದಾವಣಗೆರೆಯಲ್ಲಿ ದಸಂಸ ಧರಣಿ

ದಾವಣಗೆರೆ : ದಸರಾ ಉದ್ಘಾಟನೆ ಮಾಡಲು ದಲಿತ ಮಹಿಳೆಯರಿಗೆ ಅಧಿಕಾರವಿಲ್ಲ ಎಂದು ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಶನಿವಾರ ನಗರದ ಜಯದೇವ ವೃತ್ತದಲ್ಲಿ ಧರಣಿ ನಡೆಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಜಿಲ್ಲಾ ಸಂಚಾಲಕ ಕುಂದವಾಡ ಮಂಜುನಾಥ ಮಾತನಾಡಿ, ದಸರಾ ಹಬ್ಬದಲ್ಲಿ ದಲಿತ ಹೆಣ್ಣು ಮಕ್ಕಳಿಗೆ ಹೂ ಮುಡಿಸಲು ಅವಕಾಶವಿಲ್ಲವೆಂದು ಹೇಳುವ ಮೂಲಕ ಇಡೀ ದಲಿತ ಸಮುದಾಯಕ್ಕೆ ಶಾಸಕ ಯತ್ನಾಳ್ ಅವರು ಅವಮಾನ ಮಾಡಿದ್ದಾರೆ. ಆದ್ದರಿಂದ ಅವರ ವಿರುದ್ಧ ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಕೇಸು ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿದರು. ಹಾಗೂ ದಾವಣಗೆರೆ ಎಸ್ಪಿಗೆ ಅವಹೇಳನ ಮಾಡಿರುವ ಹರಿಹರ ಶಾಸಕ ಬಿ.ಪಿ. ಹರೀಶ್ ವಿರುದ್ಧವೂ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಧರಣಿಯಲ್ಲಿ ಮಹಿಳಾ ಘಟಕದ ವಿಜಯಮ್ಮ, ದುಗ್ಗಪ್ಪ, ಪ್ರದೀಪ, ಮೈಲಾರಪ್ಪ ಚಿಕ್ಕನಹಳ್ಳಿ, ಸದಾನಂದ, ಮಂಜುನಾಥ ಚಿತನಹಳ್ಳಿ, ನಾಗರಾಜ, ಶಂಕರ ಗಾಂಧಿನಗರ, ತಿಪ್ಪೇಶ್, ಜೀವನ್ ಅಣಬೇರು, ರಾಜು ಬಾಬು, ಮಳ್ಳೆಕಟ್ಟೆ ಪರಶುರಾಮ, ಕೊಡಗನೂರು ಲಕ್ಷ್ಮಣ, ಮೈಲಾರಪ್ಪ ಗಾಂಧಿನಗರ ಇತರರಿದ್ದರು.





