ಬೆಂಗಳೂರು | ಸಾಲ ತೀರಿಸಲು ಸ್ನೇಹಿತನ ಮನೆಯಲ್ಲಿ ಕಳ್ಳತನ: ಆರೋಪಿ ಸೆರೆ

ಸಾಂದರ್ಭಿಕ ಚಿತ್ರ
ಬೆಂಗಳೂರು: ಸಾಲ ತೀರಿಸಲು ಸ್ನೇಹಿತನ ಮನೆಗೆ ಕನ್ನ ಹಾಕಿದ್ದ ಬಿ.ಇ. ಪದವೀಧರನನ್ನು ಇಲ್ಲಿನ ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿ 5.80 ಲಕ್ಷ ರೂ. ಮೌಲ್ಯದ 58 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಕಲಬುರಗಿ ಮೂಲದ ಮಂಜುನಾಥ್(38) ಬಂಧಿತ ಪದವೀಧರ ಎಂದು ಗುರುತಿಸಲಾಗಿದೆ. ಆತನ ಮನೆಯಲ್ಲಿದ್ದ 58 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ 5.80 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.
ಆರೋಪಿ ಮಂಜುನಾಥ್ ಬೆಂಗಳೂರಿನ ಕೆ.ಆರ್.ಪುರಂನ ಅಯ್ಯಪ್ಪನಗರದಲ್ಲಿ ವಾಸವಾಗಿದ್ದು, ಬಿ.ಇ. ಸಿವಿಲ್ ಇಂಜಿನಿಯರ್ ವ್ಯಾಸಂಗ ಮಾಡಿರುವ ಈತ ನಗರದ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದಾನೆ.
ಸಾಲ ಮಾಡಿಕೊಂಡಿದ್ದ ಮಂಜುನಾಥ್ ಅದನ್ನು ತೀರಿಸಲು ಕಳ್ಳತನದ ಹಾದಿ ಹಿಡಿದಿದ್ದ. ಕೊಡಿಗೆಹಳ್ಳಿ ಗ್ರಾಮದಲ್ಲಿ ಈತನ ಸ್ನೇಹಿತ ನವೀನ್ ವಾಸವಾಗಿದ್ದು, ಆ.29ರಂದು ಸಂಜೆ ಗ್ರಾಮದಲ್ಲಿ ಕೂರಿಸಿದ್ದ ಗಣೇಶನ ಮೂರ್ತಿಗೆ ಪೂಜೆ ಮಾಡಿಸಿಕೊಂಡು ಬರಲು ನವೀನ್ನ ಪತ್ನಿ ಸುಷ್ಮಾ ಅವರು ಮನೆಗೆ ಬೀಗಹಾಕಿಕೊಂಡು ಹೋಗಿದ್ದರು.
ಇದೇ ಸಮಯಕ್ಕಾಗಿ ಕಾದಿದ್ದ ಮಂಜುನಾಥ್ ಸ್ನೇಹಿತನ ಮನೆಯ ಮುಂಬಾಗಿಲನ್ನು ಒಡೆದು ಒಳನುಗ್ಗಿ ಕೊಠಡಿಯ ಕಬೋರ್ಡ್ನಲ್ಲಿಟ್ಟಿದ್ದ 50 ಗ್ರಾಂ ಚಿನ್ನದ ಮಾಂಗಲ್ಯ ಸರ, 20 ಗ್ರಾಂ 2 ಚಿನ್ನದ ಬಳೆ, 35 ಗ್ರಾಂ ಕಿವಿಯೋಲೆಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದನು ಎಂದು ಪೊಲೀಸರು ವಿವರಿಸಿದ್ದಾರೆ.
ಸುಷ್ಮಾ ಅವರು ಕೆಲ ಸಮಯದ ಬಳಿಕ ಮನೆಗೆ ಬಂದಾಗ ಕಳ್ಳತನವಾಗಿರುವುದು ಕಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಹಲವು ಮಾಹಿತಿಗಳನ್ನು ಕಲೆಹಾಕಿ ಆರೋಪಿ ಮಂಜುನಾಥ್ನನ್ನು ಆತನ ಮನೆಯಲ್ಲೇ ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಸ್ನೇಹಿತನ ಮನೆಯಲ್ಲಿ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.







