ನ್ಯಾಯಾಂಗ ವ್ಯವಸ್ಥೆಯಲ್ಲಿ AI ಸಹಾಯಕವಾಗಿ ಉಳಿಯಬೇಕೇ, ಹೊರತು ಪರ್ಯಾಯವಾಗಬಾರದು: ಸಿಜೆಐ ಸೂರ್ಯಕಾಂತ್

ಬೆಂಗಳೂರು: ನ್ಯಾಯಾಧೀಶರ ಗ್ರಹಿಕೆ, ವಿಶ್ಲೇಷಣೆ, ತರ್ಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸನ್ನಿವೇಶಗಳ ಅವಲೋಕನವು ನ್ಯಾಯ ನಿರ್ಣಯದ ಬೆನ್ನೆಲುಬಾಗಿರಬೇಕು. ಹೀಗಾಗಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆಯಂತಹ(ಎಐ) ತಂತ್ರಜ್ಞಾನವು ಸಹಾಯಕವಾಗಿ ಉಳಿಯಬೇಕೇ, ಹೊರತು ಪರ್ಯಾಯವಾಗಿರಬಾರದು ಎಂದು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ಜಿಕೆವಿಕೆಯ ಆವರಣದಲ್ಲಿರುವ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತರ ರಾಷ್ಟ್ರೀಯ ಸಂಭಾಗಣದಲ್ಲಿ ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘವು(ಕೆಜೆಒಎ) ಆಯೋಜಿಸಿದ್ದ 22ನೇ ದ್ವೈವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ನ್ಯಾಯ ನಿರ್ಣಯದಲ್ಲಿ ಸಹಾನುಭೂತಿ, ಮೌಲ್ಯ ಪ್ರಜ್ಞೆ, ಸಾಂವಿಧಾನಿಕ ಆಶಯಗಳು ಪ್ರಧಾನ ಅಂಶಗಳಾಗಿವೆ. ಇವುಗಳ ಜಾಗವನ್ನು ಯಾವುದೇ ತಾಂತ್ರಿಕತೆಯು ತುಂಬಲಾರದು ಎಂದರು.
ಎಐ ಸೇರಿ ಯಾವುದೇ ಆಧುನಿಕ ತಂತ್ರಜ್ಞಾನದ ಅಳವಡಿಕೆಗೆ ನ್ಯಾಯಾಂಗ ವ್ಯವಸ್ಥೆಯು ಹೊರತಾಗಿರಲು ಸಾಧ್ಯವಿಲ್ಲ. ಆದರೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಎಐ ಅಳವಡಿಕೆಯು ಅನುಕೂಲಗಳೊಂದಿಗೆ ಗಂಭೀರ ಸವಾಲುಗಳನ್ನು ಒಡ್ಡಿದೆ. ಎಐ ತಾಂತ್ರಿಕತೆಯಿಂದಾಗಿ ನಕಲಿ ಉಲ್ಲೇಖಿತ ಪ್ರಕರಣಗಳೂ ಕಾಣಿಸಿಕೊಳ್ಳುತ್ತಿವೆ. ಎಐ ಮೂಲಕ ಲಭ್ಯವಾಗುವ ಮಾಹಿತಿಯನ್ನು ದೃಢೀಕರಿಸಿಕೊಳ್ಳಬೇಕಾದ ಜವಾಬ್ದಾರಿ ಹೆಚ್ಚಾಗುತ್ತಿದ್ದು, ನ್ಯಾಯನಿರ್ಣಯ ಪ್ರಕ್ರಿಯೆಯನ್ನು ಯಾಂತ್ರಿಕವಾಗಿಸಲು ಆಸ್ಪದ ನೀಡಬಾರದು ಎಂದು ಅವರು ತಿಳಿಸಿದರು.
ಪ್ರಸ್ತುತ ನ್ಯಾಯಾಂಗ ವ್ಯವಸ್ಥೆಯಲ್ಲಿ ಎಐ ಅಳವಡಿಕೆಯು ತೀವ್ರ ಚರ್ಚಿತ ವಿಷಯವಾಗಿದೆ. ಈ ವ್ಯವಸ್ಥೆಯಲ್ಲಿ ಎಐ ಅನ್ನು ದತ್ತಾಂಶ ಪರಿಶೀಲನೆ, ಪ್ರಕರಣಗಳ ವಿಚಾರಣೆಗೆ ದಿನಾಂಕ ನಿಗದಿ, ಪುನರಾವರ್ತಿತ ಕೆಲಸಗಳ ನಿರ್ವಹಣೆ ಸೇರಿದಂತೆ ದೈನಂದಿನ ಕಾರ್ಯಗಳಿಗೆ ಬಳಸಿಕೊಂಡು ನ್ಯಾಯ ವಿತರಣೆ ಪ್ರಕ್ರಿಯೆಯನ್ನು ತ್ವರಿತಗೊಳಿಸುವುದು ಮುಖ್ಯ ಗುರಿಯಾಗಬೇಕು ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದರು.
ನಮ್ಮ ಸಮಾಜದಲ್ಲಿ ಜನಸಾಮಾನ್ಯರು ವಿಚಾರಣಾ ನ್ಯಾಯಲಯಗಳ ಮೂಲಕವೇ ನ್ಯಾಯಾಂಗ ವ್ಯವಸ್ಥೆಯೊಂದಿಗೆ ಸಂಪರ್ಕಕ್ಕೆ ಬರುತ್ತಾರೆ. ಅನೇಕರು ನಂತರದ ಹಂತದ ಕೋರ್ಟ್ಗಳೊಂದಿಗೆ ಸಂಪರ್ಕಕ್ಕೆ ಬರುವುದೇ ಇಲ್ಲ. ಹೀಗಾಗಿ, ಜನರಿಗೆ ಸಂವಿಧಾನದ ಆಶಯಗಳ ರಕ್ಷಣೆಯ ಬಗ್ಗೆ ವಿಚಾರಣಾ ನ್ಯಾಯಾಲಯದ ಹಂತದಲ್ಲೇ ವಿಶ್ವಾಸ ಮೂಡಬೇಕು. ವ್ಯವಸ್ಥೆ ಬಗೆಗಿನ ನಂಬಿಕೆಯು ಬಲಗೊಳ್ಳುವುದು ಅಥವಾ ಶಿಥಿಲವಾಗುವುದು ವಿಚಾರಣಾ ನ್ಯಾಯಲಯಗಳ ಹಂತವನ್ನೇ ಅವಲಂಬಿಸಿರುತ್ತದೆ ಎಂದು ಅವರು ಹೇಳಿದರು.
ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮಾತನಾಡಿ, ಈಗ ನ್ಯಾಯಾಂಗ ವ್ಯವಸ್ಥೆಯಲ್ಲಿ ಎಐ ಅಳವಡಿಸಬೇಕೇ ಅಥವಾ ಬೇಡವೇ ಎಂಬುದು ಪ್ರಶ್ನೆಯಾಗಿ ಉಳಿದಿಲ್ಲ. ಯಾವ ರೀತಿಯಲ್ಲಿ ಎಐ ಅನ್ನು ಅಳವಡಿಸಬೇಕು ಎಂಬುದಷ್ಟೇ ಈಗಿನ ಪ್ರಶ್ನೆಯಾಗಿದೆ. ಕರ್ನಾಟಕದ ನ್ಯಾಯಾಂಗ ವ್ಯವಸ್ಥೆಯಲ್ಲಿ ದಾಖಲೆಗಳ ಡಿಜಿಟಲೀಕರಣ, ಇ-ಫೈಲಿಂಗ್ ಹಾಗೂ ಕಾಗದರಹಿತ ವ್ಯವಸ್ಥೆ ನಿರ್ಮಿಸುವ ದಿಸೆಯಲ್ಲಿ ಉಪಕ್ರಮಗಳು ಆರಂಭಗೊಂಡಿದ್ದು, ಇದು ವೇಗ ಪಡೆದುಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಡಾ.ನಾಗರತ್ನ ಮಾತನಾಡಿ, ನ್ಯಾಯಾಂಗ ವ್ಯವಸ್ಥೆಗೆ ಎಐ ಅಳವಡಿಸುವಾಗ ಹೆಚ್ಚಿನ ಜವಾಬ್ದಾರಿಯೂ ಅತ್ಯಗತ್ಯ. ಎಐನಿಂದಾಗಿ, ಸುಪ್ರೀಂ ಕೋರ್ಟ್ನಲ್ಲೂ ನಕಲಿ ಪ್ರಕರಣಗಳ ಉಲ್ಲೇಖಗಳು ಕಂಡುಬರುತ್ತಿವೆ. ಇದಕ್ಕೆ ಕಡಿವಾಣ ಹಾಕುವಲ್ಲಿ ವಕೀಲರ ಪಾತ್ರ ಮುಖ್ಯವಾಗುತ್ತದೆ. ಹಾಗೆಯೇ, ವೈಯಕ್ತಿಕ ಮಾಹಿತಿಗಳ ಗೌಪ್ಯತೆ ಮತ್ತು ದತ್ತಾಂಶಗಳ ರಕ್ಷಣೆಯೂ ಪ್ರಮುಖವಾಗುತ್ತದೆ ಎಂದರು.
‘ಬೆಂಗಳೂರಿನ ನ್ಯಾಯಾಲಯಗಳಲ್ಲಿ ಕಡತಗಳ ಸಂಗ್ರಹ ಹಾಗೂ ಲಭ್ಯತೆಯೇ ದೊಡ್ಡ ತೊಡಕಾಗಿತ್ತು. ಈ ಕೊರತೆಯನ್ನು ನೀಗಿಸುವ ಸಲುವಾಗಿ, ಆನೇಕಲ್ನಲ್ಲಿ 1.40 ಲಕ್ಷ ಚದುರು ಅಡಿಗಳಷ್ಟು ವಿಸ್ತೀರ್ಣದಲ್ಲಿ ದಾಖಲೆಗಳ ಸ್ಕ್ಯಾನಿಂಗ್, ಸಂಗ್ರಹ ಹಾಗೂ ಕಡತಗಳ ನಿರ್ವಹಣೆ ಸೌಲಭ್ಯವನ್ನು ಸ್ಥಾಪಿಸಲಾಗುತ್ತಿದ್ದು, ಇದರಿಂದ ಕಾರ್ಯದಕ್ಷತೆ ಹೆಚ್ಚಲಿದೆ’
-ವಿಭು ಬಖ್ರು, ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ






