ಬೆಂಗಳೂರು | ಹಿರಿಯ ಪತ್ರಕರ್ತ ದೊಡ್ಡಬೊಮಯ್ಯ ನಿಧನ

ದೊಡ್ಡಬೊಮಯ್ಯ
ಬೆಂಗಳೂರು, ಡಿ.20: ಬೆಳಗಾವಿ ಅಧಿವೇಶನ ಮುಗಿಸಿ ಬೆಂಗಳೂರಿಗೆ ಹಿಂತಿರುಗಿ ಬರುವಾಗ ಹೃದಯಾಘಾತದಿಂದ ಹಿರಿಯ ಪತ್ರಕರ್ತ ಹಾಗೂ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಉಪಾಧ್ಯಕ್ಷ ದೊಡ್ಡ ಬೊಮಯ್ಯ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ.
ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನದ ಕಾರ್ಯಕಲಾಪಗಳ ವರದಿಗಾಗಿ ತೆರಳಿದ್ದ ಅವರು ಇಂದು ಬೆಳಗ್ಗೆ ಬೆಂಗಳೂರಿಗೆ ವಾಪಸ್ಸಾಗಿದರು. ಕೆಎಸ್ಆರ್ಟಿಸಿ ಬಸ್ ನಿಂದ ಇಳಿದು, ಬಾಗಲೂರಿನಲ್ಲಿರುವ ತಮ್ಮ ಮನೆ ತಲುಪಲು ಬಿಎಂಟಿಸಿ ಬಸ್ ಹತ್ತಿದ್ದ ಸಂದರ್ಭದಲ್ಲಿ ತೀವ್ರ ಹೃದಯಾಘಾತವಾಗಿದೆ. ಸಹಪ್ರಯಾಣಿಕರು ಉಪಚರಿಸಿದ ಹೊರತಾಗಿಯೂ ಬಸ್ ನಲ್ಲಿಯೇ ನಿಧನ ಹೊಂದಿದ್ದಾರೆ.
ಮೂಲತಃ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ರೊಪ್ಪ ಗ್ರಾಮದ ದೊಡ್ಡಯ್ಯ ಮತ್ತು ಚಿಕ್ಕಮ ದಂಪತಿಯ ಪುತ್ರರಾದ ದೊಡ್ಡಬೊಮಯ್ಯ ಅವರು ಈ ಮೊದಲು ಸಂಜೆವಾಣಿ ಮತ್ತು ಪ್ರಸ್ತುತ ಇಂದು ಸಂಜೆ ಪತ್ರಿಕೆಯಲ್ಲಿ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಅರೆಕಾಲಿಕ ಸಹಾಯಕ ಸುದ್ದಿ ಸಂಪಾದಕರಾಗಿ ಕೆಲಸ ಮಾಡಿದ್ದರು. ಸುಮಾರು 30 ವರ್ಷ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದ ಅವರು, ಅಪಾರವಾದ ಆತ್ಮೀಯ ಬಳಗವನ್ನು ಗಳಿಸಿಕೊಂಡಿದ್ದರು.
ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಉಪಾಧ್ಯಕ್ಷರಾಗಿದ್ದರು. ಪ್ರೆಸ್ ಕ್ಲಬ್ ಪದಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು.
ಅವರ ನಿಧನಕ್ಕೆ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ರಮೇಶ್ಪಾಳ್ಯ, ಸಂಘದ ಪದಾಧಿಕಾರಿಗಳು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಪ್ರೆಸ್ಕ್ಲಬ್ ಅಧ್ಯಕ್ಷ ಶ್ರೀಧರ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ, ವರದಿಗಾರರ ಕೂಟದ ಅಧ್ಯಕ್ಷ ಆರ್.ಟಿ.ವಿಠಲ ಮೂರ್ತಿ ಮತ್ತಿತರ ಹಿರಿಯ ಪತ್ರಕರ್ತರು ಸಂತಾಪ ವ್ಯಕ್ತಪಡಿಸಿದ್ದಾರೆ.







