Bengaluru | ಅಂಡರ್ ಪಾಸ್ ಕಾಮಗಾರಿ ವೇಳೆ ಮಣ್ಣು ಕುಸಿತ; ಇಬ್ಬರು ಕಾರ್ಮಿಕರು ಮೃತ್ಯು

ಬೆಂಗಳೂರು : ಬಿಡಿಎ ವತಿಯಿಂದ ನಡೆಯುತ್ತಿದ್ದ ಅಂಡರ್ ಪಾಸ್ ನಿರ್ಮಾಣ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ಬೆಂಗಳೂರಿನ ಎಫ್ಟಿಐ ಸರ್ಕಲ್ ಬಳಿ ನಡೆದಿರುವುದು ವರದಿಯಾಗಿದೆ.
ಮೃತರನ್ನು ಪಶ್ಚಿಮ ಬಂಗಾಳ ಮೂಲದ ಪರಿಮಳ್ (31) ಹಾಗೂ ಒಡಿಶಾ ಮೂಲದ ಸೋನಾರಾಮ್ (26) ಎಂದು ತಿಳಿದು ಬಂದಿದೆ.
ಆರ್ಸಿಸಿ ಹಾಕಲು ಗುಂಡಿಯಲ್ಲಿ ತುಂಬಿದ್ದ ನೀರನ್ನು ಖಾಲಿ ಮಾಡುತ್ತಿದ್ದಾಗ ಏಕಾಏಕಿ ಮಣ್ಣು ಕುಸಿದು ಬಿದ್ದಿದೆ ಎನ್ನಲಾಗಿದೆ. ಈ ವೇಳೆ ಸ್ಥಳದಲ್ಲಿದ್ದ ಐವರು ಕಾರ್ಮಿಕರ ಪೈಕಿ ಮೂವರು ತಕ್ಷಣ ಓಡಿ ಹೋಗಿದ್ದರೆ, ಉಳಿದಿಬ್ಬರು ಮಣ್ಣಿನಡಿ ಸಿಲುಕಿಕೊಂಡಿದ್ದಾರೆ.
ಅವಘಡದಲ್ಲಿ ಪರಿಮಳ್ ಮಣ್ಣಿನಲ್ಲಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸೋನಾರಾಮ್ ಎಂಬುವವರನ್ನ ಸ್ಥಳೀಯರ ನೆರವಿನೊಂದಿಗೆ ನಂದಿನಿ ಲೇಔಟ್ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಮಣ್ಣಿನಿಂದ ಹೊರತೆಗೆದು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋನಾರಾಮ್ ಕೂಡಾ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.




