ಬಿಡದಿ ಟೌನ್ಶಿಪ್ ವಿರುದ್ಧ ಹೋರಾಟ: ಸಂತೋಷ್ ಹೆಗ್ಡೆ ಬೆಂಬಲ

ಸಂತೋಷ್ ಹೆಗ್ಡೆ
ಬೆಂಗಳೂರು : ಬೆಂಗಳೂರು ದಕ್ಷಿಣ ಜಿಲ್ಲೆ ಬಿಡದಿ ಟೌನ್ಶಿಪ್ ವಿರೋಧಿಸಿ ನಡೆಯುತ್ತಿರುವ ಹೋರಾಟದಲ್ಲಿ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಪಾಲ್ಗೊಂಡು, ರೈತರ ನ್ಯಾಯಯುತ ಬೇಡಿಕೆಗಳನ್ನು ಬೆಂಬಲಿಸಿದರು.
ಗುರುವಾರ ಬಿಡದಿ ಬಳಿ ನಡೆಯುತ್ತಿರುವ ಹೋರಾಟ ಸ್ಥಳಕ್ಕೆ ಆಗಮಿಸಿದ ಸಂತೋಷ್ ಹೆಗ್ಡೆ ಅವರ ಪ್ರತಿಭಟನಾ ಸ್ಥಳದಲ್ಲೇ ಸರಕಾರಕ್ಕೆ ಪತ್ರ ಬರೆದು ಬಿಡದಿ ಟೌನ್ ಶಿಪ್ಗೆ ಬಲವಂತವಾಗಿ ಭೂಸ್ವಾಧೀನ ಮಾಡದಂತೆ ಮನವಿ ಮಾಡಿದರು. ಅಭಿವೃದ್ಧಿ ಹೆಸರಲ್ಲಿ ರೈತರ ಹಕ್ಕುಗಳಿಗೆ ಧಕ್ಕೆ ಮಾಡಬೇಡಿ. ರೈತರ ಅಭಿಪ್ರಾಯ ಕಡೆಗಣಿಸಿ ಬಲವಂತ ಭೂಸ್ವಾಧೀನ ಮಾಡದಂತೆ ಪತ್ರದಲ್ಲಿ ಉಲ್ಲೇಖಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಆರೋಗ್ಯ ಸಮಸ್ಯೆ, ವೈದ್ಯರು ಮನೆಯಿಂದ ಹೊರ ಹೋಗದಂತೆ ಸೂಚನೆ ನೀಡಿದ್ದರು. ಆದರೆ, ರೈತರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮಾಡುತ್ತಿರುವುದು ನೋವು ತಂದಿದೆ. ವ್ಯವಸಾಯ ಇಲ್ಲದೇ ಅಭಿವೃದ್ಧಿ ಸಾಧ್ಯವಿಲ್ಲ. ಯಾವುದೇ ಎಐ ಬಂದರೂ ಕೃಷಿ ಮಾಡದಿದ್ದರೆ ಹೊಟ್ಟೆ ತುಂಬಲ್ಲ. ಕೃಷಿ ಕ್ಷೀಣವಾದರೆ ಭವಿಷ್ಯದಲ್ಲಿ ಕೆಟ್ಟ ಪರಿಸ್ಥಿತಿ ಬರುತ್ತದೆ ಎಂದರು.
ನಾನು ಇರುವಷ್ಟು ದಿನ ರೈತರ ಜೊತೆ ಇರುತ್ತೇನೆ, ಹೋರಾಟಕ್ಕೆ ಕೈಜೋಡಿಸುತ್ತೇನೆ. ಮೊದಲು ರೈತರನ್ನು ರಕ್ಷಣೆ ಮಾಡಿ. ನಂತರ ಅಭಿವೃದ್ಧಿ ಹೆಸರಲ್ಲಿ ಕೃಷಿ ಜಮೀನು ಹಾಳು ಮಾಡಬೇಡಿ ಎಂದು ಸಂತೋಷ್ ಹೆಗ್ಡೆ ಸರಕಾರಕ್ಕೆ ಮನವಿ ಮಾಡಿದರು.






