ರೈತರ ಸಂಕಷ್ಟದ ಸ್ಥಿತಿಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ : ಮುಖ್ಯಮಂತ್ರಿ

ಬೆಂಗಳೂರು : ಸರಿಯಾದ ಮಳೆ ಇಲ್ಲದೆ ಅನ್ನದಾತ ಪಡುತ್ತಿರುವ ಆತಂಕ ನಮ್ಮ ಸರಕಾರದ ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ. ರೈತರ ಈ ಸಂಕಷ್ಟದ ಸ್ಥಿತಿಯನ್ನು ಸರಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಗುರುವಾರ ಎಕ್ಸ್ ನಲ್ಲಿ ರಾಜ್ಯದ ಬರಪೀಡಿತ ತಾಲೂಕುಗಳ ಪಟ್ಟಿಯನ್ನು ಪೋಸ್ಟ್ ಮಾಡಿರುವ ಅವರು, ಪ್ರಸಕ್ತ ಸಾಲಿನ ಜೂ.1 ರಿಂದ ಆ.21ರವರೆಗೆ, ರಾಜ್ಯದ 29 ಜಿಲ್ಲೆಗಳಲ್ಲಿ ಮಳೆ ಕೊರತೆ ದಾಖಲಾಗಿದ್ದರೆ, ಕೇವಲ 2 ಜಿಲ್ಲೆಗಳಲ್ಲಿ ಮಾತ್ರ ಸಾಮಾನ್ಯ ಮಳೆಯಾಗಿದೆ. ತಾಲೂಕು ಮಟ್ಟದಲ್ಲಿ, 176 ತಾಲೂಕುಗಳು ಮಳೆ ಕೊರತೆ ವರ್ಗದಲ್ಲಿ ಹಾಗೂ 15 ತಾಲೂಕುಗಳು ತೀವ್ರ ಮಳೆ ಕೊರತೆ ವರ್ಗದಲ್ಲಿವೆ. ಕೇವಲ 49 ತಾಲೂಕುಗಳಲ್ಲಿ ಮಾತ್ರ ಸಾಮಾನ್ಯದಿಂದ ಅಧಿಕ ಮಳೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ವೈಜ್ಞಾನಿಕ ಮೌಲ್ಯಮಾಪನ ಮತ್ತು ನಿಗದಿತ ಮಾರ್ಗಸೂಚಿಗಳ ಅನ್ವಯ ರಾಜ್ಯದ 101 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಸರಕಾರ ಘೋಷಿಸಿದೆ. ಇವುಗಳಲ್ಲಿ, 89 ತಾಲೂಕುಗಳನ್ನು ತೀವ್ರವಾಗಿ ಬಾಧಿತವಾದವು ಎಂದು ಮತ್ತು 12 ತಾಲೂಕುಗಳನ್ನು ಮಧ್ಯಮವಾಗಿ ಬಾಧಿತವಾದವು ಎಂದು ವರ್ಗೀಕರಿಸಲಾಗಿದೆ. ಈ ಘೋಷಣೆಯು ತಕ್ಷಣವೇ ಜಾರಿಗೆ ಬರಲಿದ್ದು, ರಾಜ್ಯ ಸರಕಾರವು ಮುಂಚಿತವಾಗಿ ರದ್ದುಗೊಳಿಸದ ಹೊರತು ಆದೇಶದ ದಿನಾಂಕದಿಂದ ಆರು ತಿಂಗಳವರೆಗೆ ಜಾರಿಯಲ್ಲಿರುತ್ತದೆ ಎಂದು ಅವರು ಹೇಳಿದ್ದಾರೆ.
ರೈತರಿಗೆ ತುರ್ತು ಪರಿಹಾರ ಮತ್ತು ಬೆಂಬಲವನ್ನು ಒದಗಿಸಲು, ಎಸ್ಡಿಆರ್ ಎಫ್ ನಿಯಮಗಳಡಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಹಾಗೂ ಆದ್ಯತೆಯ ಮೇರೆಗೆ ಜಂಟಿ ಬೆಳೆ ನಷ್ಟ ಸಮೀಕ್ಷೆ ನಡೆಸಿ ತಕ್ಷಣವೇ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಮಳೆಯ ಮುನ್ಸೂಚನೆ ಹಾಗೂ ಬೆಳೆಗಳ ಸ್ಥಿತಿಗತಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ, ಸರಕಾರವು ಪ್ರತಿವಾರವೂ ಈ ಪರಿಸ್ಥಿತಿಯನ್ನು ಪರಿಶೀಲಿಸುವುದನ್ನು ಮುಂದುವರಿಸಲಿದೆ. ಮುಂಬರುವ ದಿನಗಳಲ್ಲಿ ಪರಿಸ್ಥಿತಿಗೆ ತಕ್ಕಂತೆ, ಅಗತ್ಯವಿರುವ ಕಡೆಗಳಲ್ಲಿ ಹೆಚ್ಚಿನ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗುವುದು ಎಂದು ಶಿವಕುಮಾರ್ ಹೇಳಿದ್ದಾರೆ.
ಕಷ್ಟದ ಈ ಕಾಲದಲ್ಲಿ ನಮ್ಮ ಸರಕಾರವು ಕರ್ನಾಟಕದ ರೈತರ ಬೆನ್ನಿಗೆ ಗಟ್ಟಿಯಾಗಿ ನಿಲ್ಲಲಿದೆ. ಯಾರೂ ಆತಂಕ ಪಡಬೇಕಿಲ್ಲ. ನಾವು ನಿಮ್ಮೊಂದಿಗೆ ಇದ್ದೇವೆ ಮತ್ತು ಈ ಕಷ್ಟದ ಅವಧಿಯಲ್ಲಿ ನಿಮ್ಮೊಂದಿಗೆ ಸದಾ ಜೊತೆಯಾಗಿರುತ್ತೇವೆ ಎಂದು ಮುಖ್ಯಮಂತ್ರಿ ಅಭಯ ನೀಡಿದ್ದಾರೆ.
ಸರಿಯಾದ ಮಳೆ ಇಲ್ಲದೆ ಅನ್ನದಾತ ಪಡುತ್ತಿರುವ ಆತಂಕ ನಮ್ಮ ಸರ್ಕಾರದ ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ. ರೈತರ ಈ ಸಂಕಷ್ಟದ ಸ್ಥಿತಿಯನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ.
— DK Shivakumar (@DKShivakumar) August 27, 2026
ಜೂನ್ 1 ರಿಂದ 2026ರ ಆಗಸ್ಟ್ 21ರವರೆಗೆ, ರಾಜ್ಯದ 29 ಜಿಲ್ಲೆಗಳಲ್ಲಿ ಮಳೆ ಕೊರತೆ ದಾಖಲಾಗಿದ್ದರೆ, ಕೇವಲ 2 ಜಿಲ್ಲೆಗಳಲ್ಲಿ ಮಾತ್ರ ಸಾಮಾನ್ಯ ಮಳೆಯಾಗಿದೆ.… https://t.co/Rze9Y1GcnL
ಸರಿಯಾದ ಮಳೆ ಇಲ್ಲದೆ ಅನ್ನದಾತ ಪಡುತ್ತಿರುವ ಆತಂಕ ನಮ್ಮ ಸರ್ಕಾರದ ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ. ರೈತರ ಈ ಸಂಕಷ್ಟದ ಸ್ಥಿತಿಯನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ.
— DK Shivakumar (@DKShivakumar) August 27, 2026
ಜೂನ್ 1 ರಿಂದ 2026ರ ಆಗಸ್ಟ್ 21ರವರೆಗೆ, ರಾಜ್ಯದ 29 ಜಿಲ್ಲೆಗಳಲ್ಲಿ ಮಳೆ ಕೊರತೆ ದಾಖಲಾಗಿದ್ದರೆ, ಕೇವಲ 2 ಜಿಲ್ಲೆಗಳಲ್ಲಿ ಮಾತ್ರ ಸಾಮಾನ್ಯ ಮಳೆಯಾಗಿದೆ.… https://t.co/Rze9Y1GcnL






