ಇನ್ನೆರಡು ದಿನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಕೋಗಿಲು ಬಡಾವಣೆ ವರದಿ: ಶಾಸಕ ಎಸ್.ಆರ್.ವಿಶ್ವನಾಥ್

ಬೆಂಗಳೂರು: ಕೋಗಿಲು ಬಡಾವಣೆ ಕುರಿತ ವರದಿಯನ್ನು ಇನ್ನೆರಡು ದಿನಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಿಗೆ ನೀಡಲಾಗುವುದು. ಈ ಜಾಗ ಬಿಬಿಎಂಪಿಗೆ ಹಸ್ತಾಂತರ ಆದ ವಿವರ, ಸರ್ವೇ ನಂಬರ್, ಗೂಗಲ್ ಮ್ಯಾಪ್, ಎಲ್ಲ ಕಾನೂನು ಮತ್ತಿತರ ವಿವರವನ್ನು ಅದು ಒಳಗೊಂಡಿರುತ್ತದೆ ಎಂದು ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ತಿಳಿಸಿದ್ದಾರೆ.
ಶನಿವಾರ ಯಲಹಂಕದ ಕೋಗಿಲು ಲೇಔಟ್ ಬಳಿಯಿರುವ ಫಕೀರ್ ಕಾಲನಿ ಮತ್ತು ವಾಸೀಮ್ ಬಡಾವಣೆಯಲ್ಲಿ ಮನೆ-ಗುಡಿಸಲುಗಳ ನೆಲಸಮ ಕುರಿತ ಸತ್ಯಾಸತ್ಯತೆಯನ್ನು ತಿಳಿಯಲು ಬಿಜೆಪಿ ಸತ್ಯಶೋಧನಾ ತಂಡವು ಇಂದು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು. ಬಹುತೇಕ ನೂರಕ್ಕೆ ಶೇ.95ರಷ್ಟು ಮನೆ-ಗುಡಿಸಲುಗಳನ್ನು ಎರಡು ವರ್ಷಗಳಿಂದ ಕಟ್ಟಲಾಗಿದೆ ಎಂದು ಅವರು ತಿಳಿಸಿದರು.
ಈ ವರದಿಯನ್ನು ರಾಜ್ಯಪಾಲರಿಗೆ ನೀಡುವುದು ಅಥವಾ ನ್ಯಾಯಾಲಯದಲ್ಲಿ ಪ್ರಶ್ನಿಸುವ ಕುರಿತು ಚಿಂತನೆ ನಡೆದಿದೆ. ಸ್ಥಳೀಯರಿಗೂ 2.5ಲಕ್ಷದಲ್ಲೇ ಮನೆಗಳನ್ನು ಕೊಡಬೇಕು. ನಾನೂ 100 ಗುಡಿಸಲು ಹಾಕಿಸುವೆ. ಒಡೆದ ಬಳಿಕ ಮನೆ ಕೊಡಬೇಕಾಗುತ್ತದೆ. ನೆರೆ ಪರಿಹಾರ ಸಂತ್ರಸ್ತರು, ರಾಜಕಾಲುವೆಗಳ ಮೇಲೆ ಮನೆ ಕಟ್ಟಿ ಕಳಕೊಂಡವರಿಗೆ ಮನೆ ನೀಡಿಲ್ಲ. ಇದೆಲ್ಲವೂ ಮತದ ರಾಜಕಾರಣಕ್ಕಾಗಿ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಹಣ ಪಡೆದು ಅಕ್ರಮವಾಗಿ ಒಪ್ಪಂದದಡಿ ಮನೆ ಕೊಟ್ಟ, ವಾಸೀಂ ಆದರೂ ಇರಲಿ, ವಿಶ್ವನಾಥ್ ಆದರೂ ಇರಲಿ. ಆತನನ್ನು ಒದ್ದು ಒಳಗಡೆ ಹಾಕಬೇಕು. ಕಾಂಗ್ರೆಸ್ಸಿನವರು ಇವತ್ತು ಇಂತಹವರಿಗೆಲ್ಲ ರಕ್ಷಣೆ ಕೊಡುತ್ತಾರೆ. ವಾಸೀಮ್ ಬಡಾವಣೆ ನಿರ್ಮಿಸಿದಾತ ತನ್ನ ಹೆಸರನ್ನು ಇಟ್ಟುಕೊಂಡಿದ್ದಾರೆ. ಅವರು ಕಾಂಗ್ರೆಸ್ಸಿನ ಸ್ಥಳೀಯ ಮುಖಂಡ ಮತ್ತು ಸಚಿವರಿಗೆ ಹತ್ತಿರದ ವ್ಯಕ್ತಿ ಎಂದು ಅವರು ದೂರಿದರು.







