ಬೃಹತ್ ಭೂ ಹಗರಣ: ಆರೋಪಿಗಳಿಗೆ ಲೋಕಾಯುಕ್ತ ಸಮನ್ಸ್

ಬೆಂಗಳೂರು : ಸರಕಾರಿ ಸಾಫ್ಟ್ವೇರ್ ಹಾಗೂ ಡಿಜಿಟಲ್ ಸಹಿ ದುರ್ಬಳಕೆ ಮಾಡಿಕೊಂಡು 500 ಕೋಟಿ ರೂ.ಮೌಲ್ಯದ 62.20 ಎಕರೆ ಖಾಸಗಿ ಜಮೀನನ್ನು ಅಕ್ರಮವಾಗಿ ಖಾತೆ ವರ್ಗಾವಣೆ ಮಾಡಿರುವ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಸಂಸ್ಥೆಯು ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿದೆ.
ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡು ಶೋಧನಾ ವಾರಂಟ್ ಹೊರಡಿಸಿದ್ದರು. ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ಗಳಾದ ಉಮಾ ಮಹೇಶ್ ಮತ್ತು ಹಾಲಪ್ಪವೈ.ಬಾಲದಂಡಿ ಅವರ ತಂಡವು ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿಗಳ ಕಚೇರಿ ಹಾಗೂ ದೇವನಹಳ್ಳಿ ತಹಶೀಲ್ದಾರ್ ಕಚೇರಿಗಳ ಮೇಲೆ ದಿಢೀರ್ ದಾಳಿ ನಡೆಸಿ ದಾಖಲೆ ಪರಿಶೀಲಿಸಿ ಸತ್ಯಾಂಶಗಳನ್ನು ಹೊರಗೆಳೆದಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿಗಳಾದ ದೊಡ್ಡಬಳ್ಳಾಪುರ ಉಪವಿಭಾಗದಲ್ಲಿ ಉಪವಿಭಾಗಾಧಿಕಾರಿಯಾಗಿದ್ದ ದುರ್ಗಾಶ್ರೀ ಹಾಗೂ ಪ್ರಥಮ ದರ್ಜೆ ಸಹಾಯಕ ಮನೋಜ್ ಎಸ್. ಎಂಬವರು ಇ-ಆಫೀಸ್ನಲ್ಲಿ ಜನರೇಟ್ ಆಗದ ನಕಲಿ ಆದೇಶಗಳನ್ನು ಬೇರೆಡೆ ಸೃಷ್ಟಿಸಿ, ದೇವನಹಳ್ಳಿ ತಹಶೀಲ್ದಾರ್ ಅವರಿಗೆ ‘ಭೂಮಿ’ ತಂತ್ರಾಂಶದಲ್ಲಿ ಸೇರ್ಪಡಿಸಲು ಕಳುಹಿಸಿದ್ದರು. ನಕಲಿ ಆದೇಶಗಳಲ್ಲಿ ಉಲ್ಲೇಖಿಸಲಾಗಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದ ರಿಟ್ ಅರ್ಜಿ ಹಾಗೂ ಕೆಎಟಿ ಪ್ರಕರಣ ಸಂಖ್ಯೆಗಳು ಆನ್ಲೈನ್ನಲ್ಲಿ ಪರಿಶೀಲಿಸಿದಾಗ, ಅವು ಈ ಜಮೀನುಗಳಿಗೆ ಸಂಬಂಧಿಸಿಲ್ಲದಿರುವುದು ದೃಢಪಟ್ಟಿದೆ.
ವಿಷಯ ನಿರ್ವಾಹಕ ಮನೋಜ್ ಎಸ್.ಅವರ ಲಾಗಿನ್ ಮೂಲಕ ನಕಲಿ ದಾಖಲೆಗಳನ್ನು ಆರ್ಟಿಸಿ ಮ್ಯಾನೇಜ್ಮೆಂಟ್ ಟೂಲ್ನಲ್ಲಿ ಅಪ್ಲೋಡ್ ಮಾಡಲಾಗಿತ್ತು. ನಂತರ ಎಸಿ ದುರ್ಗಾಶ್ರೀ ಅವರು ತಮ್ಮ ಬಯೋಮೆಟ್ರಿಕ್ ಥಂಬ್ ಹಾಗೂ ಡಿಜಿಟಲ್ ಸಿಗ್ನೇಚರ್ ಬಳಸಿ ಅಕ್ರಮವಾಗಿ ಅನುಮೋದನೆ ನೀಡಿದ್ದಾರೆ.
ಸೆ.22ಕ್ಕೆ ಖುದ್ದು ಹಾಜರಾತಿಗೆ ಆದೇಶ: ಸಾರ್ವಜನಿಕ ದಾಖಲೆಗಳನ್ನು ತಿರುಚಿ, ಸರಕಾರಿ ವ್ಯವಸ್ಥೆಗೆ ಧಕ್ಕೆ ತಂದು ನೂರಾರು ಕೋಟಿ ಮೌಲ್ಯದ ಆಸ್ತಿ ಅಕ್ರಮ ವರ್ಗಾವಣೆ ಎಸಗಿರುವ ಹಿನ್ನೆಲೆಯಲ್ಲಿ, ಆರೋಪಿಗಳಾದ ದುರ್ಗಾಶ್ರೀ ಹಾಗೂ ಮನೋಜ್ ಎಸ್. ಸೆ.22ರಂದು ಲೋಕಾಯುಕ್ತ ಪೀಠದ ಮುಂದೆ ಖುದ್ದಾಗಿ ಹಾಜರಾಗಿ ತಮ್ಮ ಆಕ್ಷೇಪ ಸಲ್ಲಿಸಬೇಕು ಎಂದು ಉಪಲೋಕಾಯುಕ್ತ ಬಿ.ವೀರಪ್ಪಆದೇಶಿಸಿದ್ದಾರೆ.






