ಮತಗಳ್ಳತನ ಪ್ರಜಾಪ್ರಭುತ್ವದ ಕಗ್ಗೊಲೆ : ಪ್ರಶಾಂತ್ ಭೂಷಣ್

ಬೆಂಗಳೂರು : ಮತಗಳ್ಳತನವೂ ಪ್ರಜಾಪ್ರಭುತ್ವದ ಕಗ್ಗೊಲೆಯಂತಹ ಹೀನ ಕೃತ್ಯವಾಗಿದೆ. ಇಂತಹ ದುರ್ಘಟನೆಗಳ ವಿರುದ್ಧ ದೇಶದ ಜನರು ಜಾಗೃತರಾಗಬೇಕು. ಇಲ್ಲದಿದ್ದಲ್ಲಿ, ಪ್ರಜಾಪ್ರಭುತ್ವ ವ್ಯವಸ್ಥೆಯೇ ಕೈತಪ್ಪಲಿದೆ ಎಂದು ಸುಪ್ರೀಂ ಕೋರ್ಟ್ನ ಹಿರಿಯ ನ್ಯಾಯವಾದಿ, ಚಿಂತಕ ಪ್ರಶಾಂತ್ ಭೂಷಣ್ ಆತಂಕ ವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದ ಸೈಂಟ್ ಜೋಸೆಫ್ ವಿಶ್ವವಿದ್ಯಾನಿಲಯದ ವತಿಯಿಂದ ಆಯೋಜಿಸಿದ್ದ ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆಯೇ? ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ಇತ್ತೀಚಿಗೆ ನಡೆದ ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಹಗಲಿನಲ್ಲಿಯೇ ಮತ ದರೋಡೆ ನಡೆದಿದೆ. ಈ ಬಗ್ಗೆ ಸಾಕ್ಷ್ಯಗಳ ಸಮೇತ ದೂರುಗಳನ್ನು ಸಲ್ಲಿಕೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಜನರ ನಿರ್ಧಾರವನ್ನು ವಂಚಿಸುವಂತಹ ಇಂತಹ ಅನೈತಿಕ ಕೃತ್ಯವೇ ಆಗಿದೆ ಎಂದರು.
ದೇಶದ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಕೇಂದ್ರದಲ್ಲಿರುವ ಆಡಳಿತರೂಢ ಪಕ್ಷದ ಸಂಸದರು ಬಹಿರಂಗವಾಗಿಯೇ ಹೇಳುತ್ತಿದ್ದರೂ, ಆ ಪಕ್ಷದ ನಾಯಕರು ಸುಮ್ಮನಿದ್ದು ಮೌನ ಸಮ್ಮತಿ ನೀಡಿದ್ದಾರೆ. ರೈತರು, ಬಡವರು, ಕಾರ್ಮಿಕರು ಹಾಗೂ ಮಹಿಳಾ ವಿರುದ್ಧ ಹಾಗೂ ಬಂಡವಾಳಶಾಹಿಗಳ ಪರವಾಗಿ ನೀತಿಗಳನ್ನು ರೂಪಿಸುತ್ತಾ ಬಂದಿರುವ ಆ ಪಕ್ಷ ಎಂದಿಗೂ ಜನಸಾಮಾನ್ಯರ ಪರವಾಗಿ ಯೋಚಿಸಿಲ್ಲ ಎಂದು ಅವರು ಟೀಕಿಸಿದರು.
ಮತಗಳ್ಳತನಕ್ಕೆ ವಿರೋಧ ಹಾಗೂ ಸಂವಿಧಾನ ರಕ್ಷಣೆಗೆ ಬದ್ಧ ಎಂಬ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಎಲ್ಲೆಡೆ ಜಾಗೃತಿ ಜಾಥಾ ನಡೆಸಬೇಕು. ನಮ್ಮೆಲ್ಲರ ಒಗ್ಗಟ್ಟಿನಿಂದ ಮಾತ್ರ ಪ್ರಜಾಪ್ರಭುತ್ವ ಇನ್ನಷ್ಟು ಬಲಗೊಳ್ಳುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸೈಂಟ್ ಜೋಸೆಫ್ ವಿಶ್ವವಿದ್ಯಾನಿಲಯದ ಸಮಾಜ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಪಾಲ್ ನ್ಯೂಮನ್, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಟ್ಯಾನೆನ್ ನಿಲ್ ಲಿಂಕನ್ ಉಪಸ್ಥಿತರಿದ್ದರು.






