ಪೆಲೆಟ್ ಗನ್ ಬಳಕೆ ಆರೋಪ | FIR ದಾಖಲಿಸಲು ರಾಹುಲ್ ಗಾಂಧಿ 8 ಗಂಟೆ ಧರಣಿ ನಡೆಸಬೇಕಾದ ಅನಿವಾರ್ಯ ಸೃಷ್ಟಿಯಾಗಿದ್ದು ದುರದೃಷ್ಟಕರ : ಪ್ರಿಯಾಂಕ್ ಖರ್ಗೆ

ಬೆಂಗಳೂರು : ದಿಲ್ಲಿ ಪ್ರತಿಭಟನಾನಿತರ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ ಸಂಬಂಧ ಎಫ್ಐಆರ್ ದಾಖಲಿಸಲು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಎಂಟು ಗಂಟೆಗಳ ಧರಣಿ ನಡೆಸಬೇಕಾದ ಅನಿವಾರ್ಯ ಸೃಷ್ಟಿಯಾಗಿದ್ದು ನಿಜಕ್ಕೂ ದುರದೃಷ್ಟಕರ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ, ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಜಂತರ್-ಮಂತರ್ನಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಸಂಬಂಧ ಆರೋಪಿತರ ವಿರುದ್ಧ ಎಫ್ಐಆರ್ ದಾಖಲಿಸಲು ಆಗ್ರಹಿಸಿ ರಾಹುಲ್ ಗಾಂಧಿ ಧರಣಿ ನಡೆಸಿದ ಬಳಿಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದರು.
ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಯಾರು ಹಾರಿಸಿದರು, ಇದಕ್ಕೆ ಆದೇಶ ನೀಡಿದವರು ಯಾರು? ಎಂಬುದು ಎಲ್ಲರಿಗೂ ಗೊತ್ತಿದೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಬಂದರೂ 8 ಗಂಟೆಯ ವರೆಗೂ ಕಾಯಿಸಿದ್ದು, ದುರದುಷ್ಟಕರ. ಇದರಿಂದ ಸಾಮಾನ್ಯ ವ್ಯಕ್ತಿಗಳ ನ್ಯಾಯ ಸಿಗುವುದಿಲ್ಲ ಎಂಬುದು ಸ್ಪಷ್ಟ ಎಂದು ಅವರು ಟೀಕಿಸಿದರು.
ಘಟನೆ ಬಳಿಕ ಬಿಜೆಪಿ ಸ್ವತಂತ್ರ ತನಿಖೆಗೆ ಆಗ್ರಹಿಸಬೇಕಾಗಿತ್ತು. ಆದರೆ ಅವರೇ ತಪ್ಪಿತಸ್ಥರಾಗಿದ್ದರಿಂದ ತನಿಖೆ ಹೇಗೆ ಮಾಡಲಿದ್ದಾರೆ. ಪ್ರಧಾನಿ ಮೋದಿ, ಕೇಂದ್ರ ಗ್ರಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಲಿಲ್ಲ. ಇನ್ನೂ ಎಫ್ಐಆರ್ ದಾಖಲಿಸುವ ಮಾತು ಎಲ್ಲಿ? ಎಂದು ಕೇಳಿದ ಅವರು, ದೇಶದ ಜನರನ್ನ ದಾರಿ ತಪ್ಪಿಸಲು ವಂದೇ ಮಾತರಂ ವಿವಾದ ಸೃಷ್ಟಿಸಲಾಯಿತು ಎಂದು ದೂರಿದರು.
ರಾಜೀನಾಮೆ ನೀಡಲು ಸಿದ್ಧ: ಬಿಜೆಪಿಯವರು ನಿಜಕ್ಕೂ ದೇಶಭಕ್ತರಾಗಿದ್ದರೆ ಪ್ರಧಾನಿ ಮೋದಿ, ಅಮಿತ್ ಶಾ, ನಾಗಪುರದಲ್ಲಿನ ಆರೆಸ್ಸೆಸ್ ಮುಖ್ಯಸ್ಥ ಭಾಗವತ್ಗೆ ‘ನಮಸ್ತೆ ಸದಾ ವತ್ಸಲೇ’ ಹಾಡುವುದನ್ನ ಬಿಟ್ಟು ಎಲ್ಲ ಶಾಖೆಗಳಲ್ಲಿ ತ್ರಿವರ್ಣ ಧ್ವಜ ಮುಂದೆ ರಾಷ್ಟ್ರಗೀತೆ ಜೊತೆಗೆ ವಂದೇ ಮಾತರಂ ಹಾಡಲಿ. ಮೋದಿ ಸೇರಿದಂತೆ ಬಿಜೆಪಿ ನಾಯಕರು ಟೆಲಿಪ್ರಾಂಪ್ಟರ್ ಇಲ್ಲದೇ ವಂದೇ ಮಾತರಂನ ಕೊನೆಯ ಎರಡು ಚರಣಗಳನ್ನ ಸೇರಿಸಿ ಪೂರ್ಣವಾಗಿ ಹಾಡಿದರೆ ನಾನು ರಾಜೀನಾಮೆ ನೀಡಲು ಸಿದ್ದನಿದ್ದೇನೆ ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.
ಭ್ರಷ್ಟಚಾರ ಆರೋಪ ಸಂಬಂಧ ಸಚಿವ ಬಿ.ನಾಗೇಂದ್ರ ವಿಚಾರಣೆ ಕೋರಿ ಸಿಬಿಐ ರಾಜ್ಯ ಸರಕಾರಕ್ಕೆ ಪತ್ರ ಬರೆದಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಈವರೆಗೂ ಸರಕಾರಕ್ಕೆ ಅಧಿಕೃತವಾಗಿ ಸಿಬಿಐನಿಂದ ಪತ್ರ ಬಂದಿಲ್ಲ. ಯಾವ ಆಧಾರದ ಮೇರೆಗೆ ವಿಚಾರಣೆಗೆ ಅನುಮತಿ ಕೇಳಿದೆ ಎಂಬುದು ಗೊತ್ತಿಲ್ಲ. ಈ ಹಿಂದೆ ಹೆಚ್ಚುವರಿ ಸಿಬ್ಬಂದಿ ಕೋರಿ ಸಿಬಿಐ ಪತ್ರ ಬರೆದಿತ್ತು ಎಂದು ಸ್ಪಷ್ಟಪಡಿಸಿದರು.






