ಸಮನ್ವಯ ಶಿಕ್ಷಣ ಸಂಸ್ಥೆಗಳು ಭಾರತದ ಜಾತ್ಯತೀತ ಸಾಮಾಜಿಕ ವ್ಯವಸ್ಥೆಯನ್ನು ಸಂರಕ್ಷಿಸುವಲ್ಲಿ ದೊಡ್ಡ ಪಾತ್ರ ವಹಿಸುತ್ತವೆ : ಯು.ಟಿ.ಖಾದರ್
‘Artoryx 2026’ ವಿದ್ಯಾರ್ಥಿ ಕಲಾ ಸಾಹಿತ್ಯ ಕಾರ್ಯಕ್ರಮ

ಬೆಂಗಳೂರು : ವಿದ್ಯಾರ್ಥಿಗಳ ಸೃಜನಾತ್ಮಕ ಸಾಮರ್ಥ್ಯಗಳು ಮತ್ತು ನಾಯಕತ್ವ ಗುಣಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ MARKHINS ವಿದ್ಯಾರ್ಥಿ ಸಂಘಟನೆ ಆಯೋಜಿಸಿರುವ ‘Artoryx 2026’ ವಿದ್ಯಾರ್ಥಿ ಕಲಾ ಸಾಹಿತ್ಯ ಕಾರ್ಯಕ್ರಮ ಹಲಸೂರಿನ ಮರ್ಕಿನ್ಸ್ ಕ್ಯಾಂಪಸ್ನಲ್ಲಿ ಚಾಲನೆಯಾಯಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧಾರ್ಮಿಕ-ಲೌಕಿಕ ಸಮನ್ವಯ ಶಿಕ್ಷಣದ ಮಹತ್ವದ ಕುರಿತು ಹಾಗೂ ನಾಳೆಯ ಭರವಸೆಯಾಗಿ ವಿದ್ಯಾರ್ಥಿಗಳು ಬೆಳೆದು ಬರಬೇಕಾದ ಅಗತ್ಯತೆಯ ಕುರಿತು ಮಾತನಾಡಿದರು. ಮರ್ಕಿನ್ಸಿನ ಭವಿಷ್ಯದ ಅಭಿವೃದ್ಧಿ ಯೋಜನೆಗಳಲ್ಲಿ ಸಂಪೂರ್ಣ ಭಾಗವಹಿಸುವಿಕೆ ಮತ್ತು ಬೆಂಬಲದ ಭರವಸೆಯನ್ನು ಅವರು ನೀಡಿದರು.
MARKHINS ಅಧ್ಯಕ್ಷರಾದ ಅಬ್ದುಲ್ ರಝೀಖ್ ಸಾಹಬ್ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಅಲ್ ಉಸ್ತಾದ್ ಮಅರೂಫ್ ಅಲ್ ಖಾದಿರಿರವರು ಸ್ವಾಗತವನ್ನು ಮತ್ತು ಸಂಸ್ಥೆಯ ಪ್ರಾಂಶುಪಾಲರಾದ ಅಲ್ ಉಸ್ತಾದ್ ಜಾಫರ್ ಅಹ್ಮದ್ ನೂರಾನಿ ರವರು ಪ್ರಾಸ್ತಾವಿಕ ಭಾಷಣ ಮಾಡಿದರು.
ಶಿಗ್ಗಾಂವಿ ಕ್ಷೇತ್ರದ ಶಾಸಕರಾದ ಯಾಸಿರ್ ಅಹ್ಮದ್ ಪಠಾಣ್, ಕೆ.ಪಿ.ಸಿ.ಸಿ. ಅಲ್ಪಸಂಖ್ಯಾತ ವಿಭಾಗದ ಉಪಾಧ್ಯಕ್ಷರಾದ ಸಯ್ಯಿದ್ ಇಮ್ರಾನ್, ಹಬೀಬ್ ನಾಳ ಸೇರಿದಂತೆ ಪ್ರಮುಖ ಜನಪ್ರತಿನಿಧಿಗಳು ಹಾಗೂ ರಾಜಕೀಯ, ಸಾಂಸ್ಕೃತಿಕ ಕ್ಷೇತ್ರಗಳ ಪ್ರಮುಖರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಸೆಪ್ಟೆಂಬರ್ 10, 11, 12 ಮತ್ತು 13ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಕಲೆ-ಸಾಂಸ್ಕೃತಿಕ ಪ್ರದರ್ಶನಗಳು ಹಾಗೂ ವಿವಿಧ ಸ್ಪರ್ಧೆಗಳು ನಡೆಯಲಿವೆ.






