ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಯೋಗಾಭ್ಯಾಸ ಅಗತ್ಯ: ಸಚಿವ ಯು.ಟಿ.ಖಾದರ್

ಬೆಂಗಳೂರು: ಆರೋಗ್ಯಕರವಾದ ಸಮಾಜ ನಿರ್ಮಾಣಕ್ಕೆ ಯೋಗಾಭ್ಯಾಸ ಮಾಡುವುದು ಅತ್ಯಂತ ಅಗತ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ವಿಧಾನಸೌಧ ಮುಂಭಾಗದಲ್ಲಿ ಆಯುಷ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ‘ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ' ಎಂಬ ಘೋಷವಾಕ್ಯದಡಿ 12ನೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಯೋಗ ಅಗತ್ಯವಾಗಿದ್ದು, ನಾವು ಮಾತ್ರವಲ್ಲ ಎಲ್ಲರೂ ಯೋಗವನ್ನು ತಮ್ಮ ದಿನಚರಿಯಲ್ಲಿ ಅಳವಡಿಸಿಕೊಂಡಾಗ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.
ಇಂದು ಯೋಗ ನಮ್ಮ ದೇಶ ಮಾತ್ರವಲ್ಲ ವಿದೇಶಕ್ಕೂ ಹಬ್ಬಿದೆ. ಯೋಗ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರದೆ, ಪ್ರತಿದಿನವೂ ಯೋಗದಿನವಾಗಬೇಕು. ನಾವು ಮುಂದಿನ ಪೀಳಿಗೆಗೆ ಯೋಗ ಮಾಡುವುದನ್ನು ವರ್ಗಾಯಿಸಬೇಕು. ಗ್ರಾಮ ಗ್ರಾಮಕ್ಕೂ ಯೋಗ ವಿಸ್ತರಿಸುತ್ತೇವೆ. ಈಗಾಗಲೇ ಹಲವು ಗ್ರಾಮದಲ್ಲಿ ಯೋಗ ಗುರುಗಳಿದ್ದಾರೆ. ಇದನ್ನು ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಬೇಕಿದೆ. ಸಿಎಂ ಮುಂಬೈಯಲ್ಲಿದ್ದಾರೆ. ಡಿಸಿಎಂಗೆ ಅನಾರೋಗ್ಯ ಅದಕ್ಕೆ ಕಾರ್ಯಕ್ರಮಕ್ಕೆ ಬಂದಿಲ್ಲ. ಸಾವಿರಾರು ಜನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಮೂಲಕ ರಾಜ್ಯಕ್ಕೆ ಉತ್ತಮ ಸಂದೇಶ ನೀಡಿದ್ದಾರೆ ಎಂದು ಸಚಿವ ಖಾದರ್ ಹೇಳಿದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಾತನಾಡಿ, ಯೋಗ, ಸಾವಿರಾರು ವರ್ಷಗಳ ಪುರಾತನವಾದದ್ದು. ಮಾನವನ ಆರೋಗ್ಯಕ್ಕೆ ಮಾರ್ಗ ತೋರಿಸಿದ್ದು ಯೋಗ. ಮನಸ್ಸು, ಶರೀರದ ಏಕತೆಗೆ ಯೋಗ ಮುಖ್ಯ. ಇಂದು ಜಗತ್ತು ಸ್ಪರ್ಧೆಗೆ ಬಿದ್ದಿದೆ. ಇದರಿಂದ ಮಾನಸಿಕ ಮತ್ತು ಶರೀರದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಮೋದಿಯವರು ಅಂತರಾಷ್ಟ್ರೀಯ ಯೋಗ ದಿನ ಅಂತ 12 ವರ್ಷಗಳ ಹಿಂದೆ ಘೋಷಣೆ ಮಾಡಿದರು ಎಂದು ತಿಳಿಸಿದರು.
ಯುವ ಸಮೂಹ ಪ್ರತಿದಿನ ಯೋಗಕ್ಕೆ ಸಮಯ ಮೀಸಲಿಡಬೇಕು. ಉತ್ತಮ ಆರೋಗ್ಯಕ್ಕಾಗಿ ಯೋಗ ಎಂಬ ಘೋಷಣೆ ಅನ್ವಯ ಯೋಗ ದಿನ ಆಚರಿಸಲಾಗುತ್ತದೆ. ಯೋಗವನ್ನು ಜೀವನದ ಅಂಗವಾಗಿ ಮಾಡಿಕೊಳ್ಳಬೇಕಾಗಿದೆ. ಈ ಕುರಿತು ರಾಜ್ಯ ಸರಕಾರ ಯೋಗದ ಪ್ರಚಾರ ಹಾಗೂ ಜಾಗೃತಿ ಮೂಡಿಸುತ್ತಿದೆ ಎಂದು ಥಾವರ್ ಚಂದ್ಗೆಹ್ಲೋಟ್ ನುಡಿದರು.
ಕಾರ್ಯಕ್ರಮದಲ್ಲಿ ನಟಿಯರಾದ ಸುಧಾರಾಣಿ, ಹರಿಪ್ರಿಯಾ, ನಟ ವಶಿಷ್ಠ ಸಿಂಹ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.
ವಿಧಾನಸೌಧ ಮುಂಭಾಗದಲ್ಲಿ ಯೋಗ ದಿನಾಚರಣೆಯ ಪ್ರಯುಕ್ತ ಹಲವು ಯೋಗ ಸಂಘಟನೆಗಳಿಂದ ಯೋಗ ಪ್ರದರ್ಶನ ನಡೆಯಿತು. ಈ ವೇಳೆಯಲ್ಲಿ, ಏಳುಬಾರಿ ವಿಶ್ವದಾಖಲೆ ಮಾಡಿರುವ ಬೆಳಗಾವಿ ಮಲ್ಲಗಂಭ ಅಕಾಡೆಮಿ ವತಿಯಿಂದ ನಡೆದ ಮಲ್ಲಗಂಭ ಪ್ರದರ್ಶನವು ಯೋಗ ಪಟುಗಳ ಗಮನ ಸೆಳೆಯಿತು. ಈ ಅಕಾಡೆಮಿಯು ಹಲವು ದೇಶಗಳಲ್ಲಿ ಪ್ರದರ್ಶನ ನೀಡಿದೆ.






