ಮನಸ್ಸಿಗೆ ಶಾಂತಿ ಸಿಗಬೇಕಾದರೆ ಧರ್ಮಗಳು ಕಲಿಸಿಕೊಟ್ಟ ಜೀವನ ಕ್ರಮ ಅನುಸರಿಸಬೇಕು : ಮುಹಮ್ಮದ್ ಕುಂಞಿ

ಬೀದರ್ : ಮನಸ್ಸಿಗೆ ಶಾಂತಿ ಸಿಗಬೇಕಾದರೆ ಧರ್ಮಗಳು ಕಲಿಸಿಕೊಟ್ಟ ಜೀವನ ಕ್ರಮ ಅನುಸರಿಸಬೇಕು. ಆಗ ಮಾತ್ರ ಶಾಂತಿ ನೆಲೆಸಲು ಸಾಧ್ಯವಿದೆ. ಪವಿತ್ರ ಕುರ್ ಆನ್ ಮನುಷ್ಯನಿಗೆ ಅತ್ಯಂತ ಶಾಂತಿಯುತವಾದ ಬದುಕಿನ ವಾಗ್ದಾನ ಮಾಡಿದೆ. ಈ ಗ್ರಂಥದ ಸಂದೇಶಗಳು ದೇವನ ಕಡೆಯಿಂದ ಬಂದಿರುವ ಸೌಭಾಗ್ಯವಾಗಿದೆ. ಕುರ್ ಆನ್ ನ ಸಂದೇಶಗಳು ಜನರ ಮನಸ್ಸನ್ನು ಬೆಳಗಿಸುತ್ತದೆ ಎಂದು ಖ್ಯಾತ ಪ್ರವಚನಕಾರ ಮುಹಮ್ಮದ್ ಕುಂಞಿ ಅವರು ಹೇಳಿದರು.
ಇಂದು ಬಸವಕಲ್ಯಾಣದಲ್ಲಿ ನಡೆದ ಕುರ್ ಆನ್ ಪ್ರವಚನದ ಎರಡನೇ ದಿವಸದ ಕಾರ್ಯಕ್ರಮದಲ್ಲಿ 'ಮನಶಾಂತಿ' ಎಂಬ ವಿಷಯದ ಬಗ್ಗೆ ಪ್ರವಚನ ನೀಡಿದ ಅವರು, ಮನಸ್ಸಿನ ಶಾಂತಿ ಎಂಬುದು ಜಗತ್ತಿನ ಪ್ರತಿಯೊಬ್ಬರು ಬಯಸುವ ವಸ್ತುವಾಗಿದೆ. ಹಾಗೆಯೇ ಬಹುತೇಕರು ಕಳೆದುಕೊಂಡ ವಸ್ತು ಕೂಡ ಆಗಿದೆ ಎಂದರು.
ಇತ್ತೀಚಿಗೆ ವಿಶ್ವಸಂಸ್ಥೆಯ ಒಂದು ವರದಿಯ ಪ್ರಕಾರ, ಜಗತ್ತಿನಲ್ಲಿ ಒಂದೂ ನೂರು ಕೋಟಿ ಜನರು ಮಾನಸಿಕ ರೋಗಗಳಿಗೆ ಒಳಗಾಗಿದ್ದಾರೆ. ಸರಕಾರಗಳು ಪ್ರಜೆಗಳ ಆರೋಗ್ಯದ ಸಮಸ್ಯೆಗಳಿಗೆ ಎಷ್ಟು ಹಣ ವೆಚ್ಚ ಭರಿಸುತ್ತಿದೆಯೋ ಅದಕ್ಕಿಂತ ಹೆಚ್ಚು ಮಾನಸಿಕ ಆರೋಗ್ಯದ ಸಂರಕ್ಷಣೆ ಮಾಡಬೇಕು ಎಂದು ಡಬ್ಲ್ಯೂಎಚ್ಒ ಹೇಳುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಕುರ್ ಆನ್ ಹೇಗೆ ಬದುಕಬೇಕು ಎನ್ನುವ ಮಾರ್ಗದರ್ಶನ ನೀಡುತ್ತದೆ. ನೀವು ಆ ಮಾರ್ಗದರ್ಶನ ಅನುಸರಿಸುವುದಾದರೆ ನೀವು ನೆಮ್ಮದಿಯ ಜೀವನ ನಡೆಸಬಹುದು. ಆಕಾಶ, ಚಂದ್ರ, ಸೂರ್ಯ ಇಲ್ಲೆಲ್ಲೂ ಸಂಘರ್ಷಗಳಿಲ್ಲ, ಶಾಂತಿ ಇದೆ. ಭಯ ಮತ್ತು ವ್ಯಥೆಗಳಿಲ್ಲದ ಒಂದು ಜೀವನ ಕ್ರಮವನ್ನು ಕುರ್ ಆನ್ ಕಲಿಸಿಕೊಟ್ಟಿದೆ. ನಿಮ್ಮಲ್ಲಿ ಭಯವಿದ್ದರೆ ನಿಮ್ಮ ವೇಗ ಕುಂಠಿತಗೊಳ್ಳುತ್ತದೆ. ಭಯದಿಂದ ಆರೋಗ್ಯ ಹಾಗೂ ನೆಮ್ಮದಿಯನ್ನು ಹಾಳಾಗುತ್ತದೆ. ಕಷ್ಟದಲ್ಲೂ ಸುಖದಲ್ಲೂ ನೆಮ್ಮದಿಯಾಗಿ ಬದುಕಬೇಕು. ನೀವು ನಿಮ್ಮ ಸೃಷ್ಠಿಕರ್ತನ ಮೇಲೆ ನಂಬಿಕೆ ಇಟ್ಟು ಬದುಕಿದರೆ ಸಂತೋಷವಾಗಿ ಬದುಕಬಹುದು ಎಂದು ನುಡಿದರು.
ದೇವನು ನಿಮ್ಮನ್ನು ಪರೀಕ್ಷಿಸುತ್ತಾನೆ. ಸಮಸ್ಯೆಗಳು ದೇವನ ವತಿಯಿಂದ ಬರುತ್ತವೆ. ಸಮಸ್ಯೆ, ಸಂಕಷ್ಟಗಳಿಂದ ಹೊರಬರಬೇಕಾದರೆ ನಿಮಗೆ ನಿಮ್ಮ ದೇವನ ಮೇಲೆ ಸದಾ ನಂಬಿಕೆ ಇರಬೇಕು. ನನ್ನ ಬಳಿ ಏನು ಇಲ್ಲ ಎನ್ನುವ ಮಾನಸಿಕತೆಯಿಂದ ಹೊರಬಂದು ನನ್ನಲ್ಲಿ ಎಲ್ಲವೂ ಇದೆ. ನನಗೆ ದೇವರು ಎಲ್ಲವನ್ನು ಕೊಟ್ಟಿದ್ದಾನೆ ಎಂಬ ಆತ್ಮವಿಶ್ವಾಸದಿಂದ ಬದುಕಿದರೆ ದೇವರು ಎಲ್ಲವನ್ನು ನೀಡಬಲ್ಲನು. ನೀವು ಏನೇ ಮಾಡಿದರು ಕೂಡ ಸಮಾಜದಲ್ಲಿ ನಕಾರಾತ್ಮಕವಾಗಿ ಮಾತಾಡುವ ಜನರು ಇರುತ್ತಾರೆ. ಅವರು ಸಮಾಜಕ್ಕೆ ಕ್ಯಾನ್ಸರ್ ರೋಗ ಇದ್ದಂತೆ. ಅವರನ್ನು ಕಡೆಗಣಿಸಿ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಾಣಿ, ಪಕ್ಷಿಗಳು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಕಾರಣ ಅವುಗಳಲ್ಲಿ ಆತ್ಮವಿಶ್ವಾಸ ಇರುತ್ತದೆ. ಮನುಷ್ಯ ನದಿಯ ಹಾಗೆ ಬದುಕಬೇಕು. ನದಿಗೆ ಏನೇ ಎಸೆದರು ಕೂಡ ಅದು ಎಲ್ಲವನ್ನು ಸ್ವೀಕರಿಸಿಕೊಂಡು ಸಾಗುತ್ತದೆ. ಮನುಷ್ಯ ಆ ನದಿಯ ಹಾಗೆ ಬದುಕಬೇಕು. ಮೇಣದ ಬತ್ತಿ ತಾನು ಬೇರೆಯವರಿಗೆ ಬೆಳಕು ನೀಡುತ್ತದೆ. ಮನುಷ್ಯ ಕೂಡ ಆ ಮೇಣದ ಬತ್ತಿ ಹಾಗೆ ಬದುಕಬೇಕು. ಯಾರೊಂದಿಗೂ ಹಗೆತನ, ದ್ವೇಷವಿಲ್ಲದೆ ಬದುಕಬೇಕು. ಆವಾಗ ಮಾತ್ರ ನೀವು ನನ್ನವರು ಎಂದು ಪ್ರವಾದಿ ಹೇಳಿದ್ದರು. ಅವರು ಹೇಳಿದ ಹಾಗೆಯೇ ನಾವೆಲ್ಲರೂ ಬದುಕಬೇಕು ಎಂದರು.
ಬದುಕಿನಲ್ಲಿ ನೆಮ್ಮದಿ ಇರಬೇಕು ಎಂದರೆ ಬದುಕಿಗೆ ನಿಯಮಗಳು ಇರಬೇಕು. ಬದುಕಿಗೆ ನಿಯಮ ಇರಬಾರದು ಎಂದು ಪ್ರಚಾರ ಮಾಡಲಾಗುತ್ತಿದೆ. ಆದರೆ ಬದುಕಿಗೆ ನಿಯಮ, ಚೌಕಟ್ಟುಗಳಿಲ್ಲದಿದ್ದರೆ ಆರಾಜಕತೆ ಉಂಟಾಗಿ ಆತ್ಮಹತ್ಯೆಗಳು ಹೆಚ್ಚಾಗುತ್ತವೆ. ಹಾಗಾಗಿ ಬದುಕಿಗೆ ನಿಯಮಗಳಿರಬೇಕು. ಆವಾಗ ಮಾತ್ರ ಬದುಕು ನೆಮ್ಮದಿ, ಸುಂದರಮಯ, ಸಂತೋಷಮಯವಾಗಿರಲು ಸಾಧ್ಯವಿದೆ. ಶಾಂತಿ ಬೇಕಾದರೆ ನಿಮ್ಮ ದೇವನನ್ನು ಅತೀ ಹೆಚ್ಚಾಗಿ ಪ್ರೀತಿಸಬೇಕು. ಹಾಗೆಯೇ ಆ ದೇವನ ಬಗ್ಗೆ ನಿಮಗೆ ಭಯ ಇರಬೇಕು ಎಂದು ತಿಳಿಸಿದರು.
ಡಾ.ಬಸವಲಿಂಗ ಪಟ್ಟದೇವರು ಮಾತನಾಡಿ, ನಮ್ಮ ಅತೀ ದೊಡ್ಡ ಆಸ್ತಿ ಎಂದರೆ ಹಣ, ಸಂಪತ್ತು ಇಲ್ಲ. ನೆಮ್ಮದಿಯಾಗಿ ಬದುಕುವುದೇ ನಮ್ಮದು ಅತೀ ದೊಡ್ಡ ಆಸ್ತಿಯಾಗಿದೆ. ಶಾಂತಿ ಎನ್ನುವುದು ಬಡತನ, ಶ್ರೀಮಂತಿಕೆಯಲ್ಲಿ ಇಲ್ಲ. ಬದಲಾಗಿ ಅದು ನಮ್ಮ ಮನಸ್ಸಿನಲ್ಲಿ ಇದೆ. ಮನುಷ್ಯನ ಮನಸ್ಸು ಚಂಚಲಮಯವಾಗಿದೆ. ನಮ್ಮ ಮನಸ್ಸನ್ನು ನಮ್ಮ ನಿಯಂತ್ರಣದಲ್ಲಿರಬೇಕು. ಮನಸು ಅಂತರ್ಮುಖಿಯಾಗಿರಬೇಕು. ಮನಸ್ಸಿನ ಹಾಗೆ ನಾವು ಕುಣಿಯಬಾರದು, ನಮ್ಮ ವಿವೇಕದಲ್ಲಿ ನಮ್ಮ ಮನಸು ಇರಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ನಿಲಂಗಾದ ಹೈದರ್ ವಲಿಲ್ಲಾ ಖಾದ್ರಿ, ಮುಹಮ್ಮದ್ ಆಶೀಫುದ್ದೀನ್, ಸರಸ್ವತಿ ಬೆಹೆನ್ ಜೀ, ಶಿವಾನಂದ್ ಮೇತ್ರೆ ಹಾಗೂ ಮುಜಾಹಿದ್ ಪಾಷಾ ಸೇರಿದಂತೆ ಅನೇಕ ಜನರು ಉಪಸ್ಥಿತರಿದ್ದರು.







