ಬೀದರ್–ದೆಹಲಿ ನೇರ ರೈಲು ಸೇವೆಗೆ ಆಪ್ ಆಗ್ರಹ
ಬೀದರ್ ರೈಲ್ವೆ ನಿಲ್ದಾಣದಲ್ಲಿ ಸಾರ್ವಜನಿಕ ಗ್ರಂಥಾಲಯ ಸ್ಥಾಪಿಸಲು ಮನವಿ

ಬೀದರ್: ಬೀದರ್ನಿಂದ ನವದೆಹಲಿಗೆ ನೇರ ರೈಲು ಸೇವೆ ಆರಂಭಿಸಬೇಕು ಹಾಗೂ ಬೀದರ್ ರೈಲ್ವೆ ನಿಲ್ದಾಣದಲ್ಲಿ ಸಾರ್ವಜನಿಕ ಗ್ರಂಥಾಲಯ ಮತ್ತು ವಾಚನಾಲಯ ಸ್ಥಾಪಿಸಬೇಕು ಎಂದು ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ (ಆಪ್) ಬೀದರ್ ಜಿಲ್ಲಾ ಘಟಕವು ರೈಲ್ವೆ ಅಧಿಕಾರಿಗಳ ಮೂಲಕ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿದೆ.
ಬುಧವಾರ ಸಲ್ಲಿಸಿದ ಮನವಿಯಲ್ಲಿ, ಬೀದರ್ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾಗಿರುವ ಬೀದರ್–ದೆಹಲಿ ನೇರ ರೈಲು ಸೇವೆ ಆರಂಭಿಸಿದರೆ ವಿದ್ಯಾರ್ಥಿಗಳು, ಉದ್ಯೋಗಿಗಳು, ವ್ಯಾಪಾರಿಗಳು ಹಾಗೂ ವಿವಿಧ ಕೆಲಸಗಳಿಗಾಗಿ ದೆಹಲಿಗೆ ತೆರಳುವ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಲಾಗಿದೆ.
ಬೀದರ್ ನಗರವು ಶೈಕ್ಷಣಿಕ, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದು, ಪ್ರತಿದಿನ ಸಾವಿರಾರು ಪ್ರಯಾಣಿಕರು ಬೀದರ್ ರೈಲ್ವೆ ನಿಲ್ದಾಣವನ್ನು ಬಳಸುತ್ತಿದ್ದಾರೆ. ರೈಲುಗಳ ಆಗಮನ ಮತ್ತು ನಿರ್ಗಮನದ ನಡುವಿನ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ನಿಲ್ದಾಣದ ಆವರಣದಲ್ಲಿ ಸಾರ್ವಜನಿಕ ಗ್ರಂಥಾಲಯ ಮತ್ತು ವಾಚನಾಲಯ ಸ್ಥಾಪಿಸಬೇಕು ಎಂದು ಆಗ್ರಹಿಸಲಾಗಿದೆ.
ಗ್ರಂಥಾಲಯದಲ್ಲಿ ಪತ್ರಿಕೆಗಳು, ನಿಯತಕಾಲಿಕೆಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳು ಹಾಗೂ ವಿವಿಧ ವಿಷಯಗಳ ಗ್ರಂಥಗಳನ್ನು ಒದಗಿಸಿದರೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಜ್ಞಾನಾರ್ಜನೆಗೆ ಅನುಕೂಲವಾಗಲಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಬೀದರ್ ಜಿಲ್ಲೆಯ ಜನರ ಈ ಎರಡೂ ಬೇಡಿಕೆಗಳನ್ನು ಕೇಂದ್ರ ರೈಲ್ವೆ ಸಚಿವರು ಪರಿಗಣಿಸಿ, ಬೀದರ್–ದೆಹಲಿ ನೇರ ರೈಲು ಸೇವೆ ಆರಂಭಿಸುವುದರ ಜೊತೆಗೆ ರೈಲ್ವೆ ನಿಲ್ದಾಣದಲ್ಲಿ ಸಾರ್ವಜನಿಕ ಗ್ರಂಥಾಲಯ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಪ್ ಜಿಲ್ಲಾ ಘಟಕ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಸಿದ್ದು ಫುಲಾರಿ, ಪಕ್ಷದ ಪ್ರಮುಖರಾದ ಎಂ.ಡಿ ಜಾವಿದ್, ಬಸವರಾಜ್ ಸ್ವಾಮಿ, ಓಂಕಾರ್ ಎನ್, ಮೋಹನ್ ಕುಮಾರ್, ಎಂ.ಡಿ.ಶರೀಫ್, ಶಿವರಾಜ್ ಶಿವಗೊಂಡ, ನಂದಿಬಸವ ಪಾಟೀಲ್, ದಿಲೀಪಕುಮಾರ್, ಸೂರ್ಯಕಾಂತ ರಾಂಪೂರೆ, ಪ್ರಕಾಶ್ ಮಾಣಿಕ, ತುಳಸಿದಾಸ್ ವಾಘಮಾರೆ, ರಮೇಶ್ ಶೆಟಕಾರ್, ಸೈಯದ್ ಮುಕಿಂಗ್, ರಾಜಶೇಖರ್, ದಿಲೀಪಕುಮಾರ್, ವಿಠಲ್ ಹಾಗೂ ತುಕಾರಾಮ್ ಇದ್ದರು.






