ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ ಪುನಶ್ವೇತನಕ್ಕೆ ಕ್ರಮ : ಸಚಿವ ಶಿವಾನಂದ್ ಪಾಟೀಲ್

ಬೆಳಗಾವಿ : ಹುಮನಾಬಾದ್ ತಾಲೂಕಿನ ಹಳ್ಳಿಖೇಡ್ ಗ್ರಾಮದ ಬಳಿ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಯ ಪುನಶ್ವೇತನಕ್ಕೆ ಸರಕಾರ ಕ್ರಮವಹಿಸಲಿದೆ ಎಂದು ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ್ ಪಾಟೀಲ್ ಹೇಳಿದ್ದಾರೆ.
ಮಂಗಳವಾರ ವಿಧಾನ ಪರಿಷತ್ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಭೀಮರಾವ್ ಬಸವರಾಜ್ ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದ ಶಿವಾನಂದ್ ಪಾಟೀಲ್, ಕಾರ್ಖಾನೆಯ ಪುನಶ್ಚೇತನ ಪ್ರಕ್ರಿಯೆಯು 2022ರಿಂದಲೇ ಆರಂಭವಾಗಿದೆ. 2022-23ನೇ ಹಂಗಾಮಿನಿಂದ 40 ವರ್ಷಗಳ ಅವಧಿಗೆ ಎಲ್ ಆರ್ ಓ ಟಿ ಆಧಾರದ ಮೇಲೆ ಇದ್ದಲ್ಲಿ ಯಥಾಸ್ಥಿತಿಯಲ್ಲಿ ಖಾಸಗಿ ಅವರಿಗೆ ಗುತ್ತಿಗೆ ನೀಡಲು 2023ರಲ್ಲಿ ದಿನಪತ್ರಿಕೆಯಲ್ಲಿ ಟೆಂಡರ್ ಕರೆದರೂ ಸಹ ಬಿಡ್ದಾರರು ಆಸಕ್ತಿ ತೋರಲಿಲ್ಲ. ಎರಡನೇ ಬಾರಿಗೆ ಟೆಂಡರ್ ಕರೆದರೂ ಸಹ ಯಾರೊಬ್ಬ ಬಿಡ್ದಾರರು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗಿಯಾಗಲಿಲ್ಲ ಎಂದು ಹೇಳಿದರು.
ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಪ್ರಸ್ತಾವವನ್ನು ಒಳಗೊಂಡಂತೆ ಒಟ್ಟು 6 ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಎನ್ ಸಿ ಡಿ ಸಿ ಯಿಂದ ನೆರವನ್ನು ಪಡೆಯುವ ಕುರಿತು ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಲಾಗುವುದು. ಎನ್ ಸಿಡಿಸಿಯಿಂದ ಆರ್ಥಿಕ ನೆರವು ಲಭ್ಯವಾಗದಿದ್ದಲ್ಲಿ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಎಲ್ ಆರ್ ಓ ಟಿ ಆಧಾರದ ಮೇಲೆ ಇದ್ದಲ್ಲಿ ಯಥಾಸ್ಥಿತಿಯಲ್ಲಿ ಖಾಸಗಿಯವರಿಗೆ ದೀರ್ಘಾವಧಿಗೆ ಗುತ್ತಿಗೆ ನೀಡಲು ಮತ್ತೊಮ್ಮೆ ಟೆಂಡರ್ ಪ್ರಕಟಣೆ ಹೊರಡಿಸಲು ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.







