15ನೇ ಹಣಕಾಸು ಯೋಜನೆ ಅನುದಾನ ದುರುಪಯೋಗ ಆರೋಪ: 18 ಗ್ರಾಮ ಪಂಚಾಯತ್ಗಳ ವಿರುದ್ಧ ತನಿಖೆಗೆ ಒತ್ತಾಯ

ಹುಮನಾಬಾದ್: ತಾಲ್ಲೂಕಿನ 18 ಗ್ರಾಮ ಪಂಚಾಯಿತಿಗಳಲ್ಲಿ ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್ಟಿ) ಸಮುದಾಯಗಳ ಅಭಿವೃದ್ಧಿಗಾಗಿ ಮೀಸಲಿರಬೇಕಿದ್ದ 15ನೇ ಹಣಕಾಸು ಯೋಜನೆಯ ಅನುದಾನದಲ್ಲಿ ಕೋಟ್ಯಂತರ ರೂಪಾಯಿ ದುರುಪಯೋಗ ಹಾಗೂ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಬುಧವಾರ ಹುಮನಾಬಾದ್ ಶಾಸಕ ಡಾ. ಸಿದ್ದು ಪಾಟೀಲ್ ಅವರಿಗೆ ದೂರು ಸಲ್ಲಿಸಲಾಯಿತು.
ದೂರಿನಲ್ಲಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿಯಮಾವಳಿಗಳನ್ನು ಉಲ್ಲಂಘಿಸಿ ಎಸ್ಸಿ-ಎಸ್ಟಿ ಸಮುದಾಯಗಳಿಗೆ ಮೀಸಲಾಗಬೇಕಿದ್ದ ಅನುದಾನವನ್ನು ಬೇರೆ ಉದ್ದೇಶಗಳಿಗೆ ಬಳಸಲಾಗಿದೆ ಎಂದು ಆರೋಪಿಸಲಾಗಿದೆ.
ನಿಯಮದ ಪ್ರಕಾರ, ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆಯಾಗುವ 15ನೇ ಹಣಕಾಸು ಯೋಜನೆಯ ಅನುದಾನದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಎಸ್ಸಿ-ಎಸ್ಟಿ ಉಪಯೋಜನೆಗಳಿಗೆ ಕಡ್ಡಾಯವಾಗಿ ಹಣ ಮೀಸಲಿಡಬೇಕು. ಆದರೆ, ಇ-ಗ್ರಾಮ ಸ್ವರಾಜ್ ಪೋರ್ಟಲ್ನಲ್ಲಿರುವ 2025-26ನೇ ಸಾಲಿನ ಕ್ರಿಯಾ ಯೋಜನೆಗಳ ಪ್ರಕಾರ, ಹುಮನಾಬಾದ್ ವ್ಯಾಪ್ತಿಯ 18 ಗ್ರಾಮ ಪಂಚಾಯಿತಿಗಳಲ್ಲಿ ಸಾಮಾನ್ಯ ವರ್ಗಕ್ಕೆ ಅನುದಾನ ಮೀಸಲಿಟ್ಟಿದ್ದರೂ, ಎಸ್ಸಿ-ಎಸ್ಟಿ ವಿಭಾಗಗಳಿಗೆ ಶೂನ್ಯ ರೂಪಾಯಿ ಹಂಚಿಕೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕ್ರಮವು ಎಸ್ಸಿ/ಎಸ್ಟಿ ಉಪಯೋಜನೆ ಕಾಯ್ದೆಯ ಉಲ್ಲಂಘನೆಯಾಗಿದ್ದು, ಪರಿಶಿಷ್ಟ ಸಮುದಾಯಗಳ ಹಕ್ಕುಗಳನ್ನು ಕಸಿದುಕೊಳ್ಳುವ ವ್ಯವಸ್ಥಿತ ಆಡಳಿತಾತ್ಮಕ ಭ್ರಷ್ಟಾಚಾರವಾಗಿದೆ ಎಂದು ಆರೋಪಿಸಲಾಗಿದೆ.
ಸಿಂಧನಕೇರಾ, ಧೂಮ್ಮನಸೂರ, ಬೇನಚಿಂಚೋಳಿ, ಚಂದನಹಳ್ಳಿ, ದುಬಲಗುಂಡಿ, ಘಾಟಬೋರಳ, ಘೋಡವಾಡಿ, ಹಳ್ಳಿಖೇಡ (ಕೆ), ಹುಡುಗಿ, ಕಲ್ಲೂರ, ಕನಕಟ್ಟಾ, ಮದರಗಾಂವ, ಮಾಣಿಕನಗರ, ನಂದಗಾವ, ಜಲಸಂಗಿ, ಸೇಡೊಳ, ಸೀತಾಳಗೇರಾ ಹಾಗೂ ಸುಲ್ತಾನಾಬಾದ್ ಗ್ರಾಮ ಪಂಚಾಯಿತಿಗಳಲ್ಲಿ ಈ ಅಕ್ರಮಗಳು ನಡೆದಿವೆ ಎಂದು ದೂರಿನಲ್ಲಿ ಹೇಳಲಾಗಿದೆ.
ಸಂಬಂಧಪಟ್ಟ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಜವಾಬ್ದಾರಿಯಿರುವ ಜನಪ್ರತಿನಿಧಿಗಳ ವಿರುದ್ಧ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ, ಎಸ್ಸಿ-ಎಸ್ಟಿ ಸಮುದಾಯಗಳಿಗೆ ನ್ಯಾಯಯುತವಾಗಿ ಸಿಗಬೇಕಾದ 15ನೇ ಹಣಕಾಸು ಯೋಜನೆಯ ಅನುದಾನವನ್ನು ತಕ್ಷಣ ಮರುಹಂಚಿಕೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಸುಶೀಲಕುಮಾರ್ ಎಚ್. ಭೋಲಾ, ಸಿದ್ಧಾರ್ಥ ಜಾನವೀರ್, ಗಣಪತಿ ಅಷ್ಟೋರೆ, ಅನಂತ್ ಮಾಳಗೆ, ವಿಠಲ್ ಶಿವನಾಯಕ್ ಹಾಗೂ ವಿಶಾಲ್ ಸಿಂಧನಕೇರಾ ಸೇರಿದಂತೆ ಇತರರು ಉಪಸ್ಥಿತರಿದ್ದರು.






