ಔರಾದ್ | ಎಸ್ಐಆರ್, ಇವಿಎಂ ವಿರುದ್ದದ 21 ದಿನಗಳ ಏಕಾಂಗಿ ಉಪವಾಸ ಸತ್ಯಾಗ್ರಹ ಅಂತ್ಯ

ಔರಾದ್ : ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಹಾಗೂ ಇವಿಎಂ ಸಂಪೂರ್ಣ ರದ್ದುಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಟ್ಟಣದ ನಿವಾಸಿ ಗೋಪಾಲ್ ಸಿಂಗ್ ಠಾಕೂರ್ ಅವರು ನಡೆಸುತ್ತಿದ್ದ ಏಕಾಂಗ ಉಪವಾಸ ಸತ್ಯಾಗ್ರಹ ಶನಿವಾರ 21ನೇ ದಿನಕ್ಕೆ ಅಂತ್ಯಗೊಂಡಿತು.
ಪಟ್ಟಣದ ಮಿನಿ ವಿಧಾನಸೌಧ ಎದುರು “ವೋಟ್ ಸತ್ಯಾಗ್ರಹ” ಹೆಸರಿನಲ್ಲಿ ಮೇ 3ರಿಂದ ಕೇವಲ ನೀರು ಸೇವಿಸಿ ಗೋಪಾಲ್ ಸಿಂಗ್ ಠಾಕೂರ್ ಉಪವಾಸ ಆರಂಭಿಸಿದ್ದರು. ಈ ಕುರಿತು ಜಿಲ್ಲಾಡಳಿತದ ಮೂಲಕ ಭಾರತದ ರಾಷ್ಟ್ರಪತಿಗಳಿಗೆ ಮನವಿ ರವಾನಿಸಿ, ಪ್ರತಿಕ್ರಿಯೆ ಬರುವವರೆಗೆ ಸತ್ಯಾಗ್ರಹ ಮುಂದುವರೆಸುವುದಾಗಿ ತಿಳಿಸಿದ್ದರು.
ಉಪವಾಸ 17ನೇ ದಿನಕ್ಕೆ ಕಾಲಿಟ್ಟಾಗ ಅವರ ಆರೋಗ್ಯದಲ್ಲಿ ಏರುಪೇರಾಗಿ ಅಸ್ವಸ್ಥಗೊಂಡ ಹಿನ್ನೆಲೆ ಔರಾದ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಚಿಕಿತ್ಸೆ ಪಡೆದು ಮತ್ತೆ ಸತ್ಯಾಗ್ರಹ ಮುಂದುವರೆಸಿದ್ದರು.
ಶನಿವಾರ ಬೀದರ್ ಜಿಲ್ಲಾ ಎಸ್ಐಆರ್ ವಿರೋಧಿ ಸಮಿತಿಯ ಪ್ರಮುಖರು ಧರಣಿ ಸ್ಥಳಕ್ಕೆ ಭೇಟಿ ನೀಡಿ, ಆರೋಗ್ಯದ ಹಿತದೃಷ್ಟಿಯಿಂದ ಸತ್ಯಾಗ್ರಹ ಕೈಬಿಡುವಂತೆ ಮನವೊಲಿಸಿದರು. ನಂತರ ತಹಸೀಲ್ದಾರ್ ಮಹೇಶ್ ಪಾಟೀಲ್ ಹಾಗೂ ಸಮಿತಿಯ ಸದಸ್ಯರು ಗೋಪಾಲ್ ಸಿಂಗ್ ಠಾಕೂರ್ ಅವರಿಗೆ ಎಳೆನೀರು ಕುಡಿಸಿ ಉಪವಾಸ ಅಂತ್ಯಗೊಳಿಸಿದರು.
ಬಳಿಕ ಮಾತನಾಡಿದ ಗೋಪಾಲ್ ಸಿಂಗ್ ಠಾಕೂರ್, “ಪ್ರಜಾಪ್ರಭುತ್ವದಲ್ಲಿ ಮತಹಕ್ಕು ಕಸಿಯುವ ಕೆಲಸ ನಡೆಯಬಾರದು. ಎಸ್ಐಆರ್ ಹಾಗೂ ಇವಿಎಂ ಮೂಲಕ ಪ್ರಜಾತಂತ್ರ ದುರ್ಬಲಗೊಳಿಸುವ ನೀತಿಗಳ ವಿರುದ್ಧ ಗಾಂಧೀಜಿಯವರ ಅಹಿಂಸಾ ಮಾರ್ಗದಲ್ಲಿ ಹೋರಾಟ ನಡೆಸಿದ್ದೇನೆ,” ಎಂದರು.
ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ವ್ಯವಸ್ಥೆ ಮರು ಜಾರಿಗೆ ತರಬೇಕು ಹಾಗೂ ಪಾರದರ್ಶಕ ಚುನಾವಣೆ ನಡೆಯಬೇಕು ಎಂದು ಅವರು ಆಗ್ರಹಿಸಿದರು. ಜೊತೆಗೆ, ಶಹೀದ್ ಭಗತ್ ಸಿಂಗ್ ಅವರಿಗೆ “ಭಾರತ ರತ್ನ” ಪ್ರಶಸ್ತಿ ನೀಡಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟರು.
ಈ ಸಂದರ್ಭದಲ್ಲಿ ಸಿದ್ಧರಾಮ ಶರಣರು ಬೆಲ್ದಾಳ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಕೆ.ಪುಂಡಲಿಕರಾವ್, ಅರವಿಂದಕುಮಾರ್ ಅರಳಿ, ಪ್ರಮುಖರಾದ ಅಬ್ದುಲ್ ಮನ್ನಾನ್ ಸೇಠ್, ಬಾಬುರಾವ್ ಹೊನ್ನಾ, ಓಂಪ್ರಕಾಶ್ ರೊಟ್ಟೆ, ಮಹೇಶ್ ಗೋರನಾಳಕರ್, ಮಾರುತಿ ಬೌದ್ಧೆ, ಡಾ.ಫಯಾಝ್, ಬಂಟಿ ದರ್ಬಾರೆ, ಶರಣಪ್ಪ ಪಾಟೀಲ್, ಅಮೀರೋದ್ದಿನ್, ಜಗದೀಶ್ವರ್ ಬಿರಾದಾರ್, ರಜೀಯಾ ಬಳಬಟ್ಟಿ, ಮಂಜುಳಾ, ರಾಮಣ್ಣ ಒಡೆಯರ್, ಶಿವಮೂರ್ತಿ ಸುಬಾನೆ, ಪ್ರಕಾಶ್ ರಾವಣ್, ಚಂದ್ರಶೇಖರ್ ಪಾಟೀಲ್ ಹೊಚಕನಳ್ಳಿ, ಸುಭಾಷ್ ಲಾಧಾ ಹಾಗೂ ಗಣಪತಿ ವಾಸುದೇವ್ ಸೇರಿದಂತೆ ಅನೇಕರಿದ್ದರು.






