ಭಾಲ್ಕಿ | ಒಳ ಮೀಸಲಾತಿ ವರ್ಗಿಕರಣ ತಡೆದು, ಹಳೆಯ ಮೀಸಲಾತಿ ಜಾರಿಗೊಳಿಸಲು ಒತ್ತಾಯಿಸಿ ಧರಣಿ

ಭಾಲ್ಕಿ: ಒಳ ಮೀಸಲಾತಿ ವರ್ಗಿಕರಣ ತಡೆದು, ಹಳೆಯ ಪದ್ಧತಿಯ ಮೀಸಲಾತಿಯೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಪಾಪವ್ವಾ ಚೌಕ್ ಮೂಲಕ ಪಾಪವ್ವ ದೇವಿಯ ಪ್ರತಿಮೆಗೆ ಪೂಜೆ ಸಲ್ಲಿಸಿ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆಯು ಮಹಾತ್ಮಾ ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ತಹಸೀಲ್ದಾರ್ ಕಚೇರಿಯಲ್ಲಿ ಸಮಾವೇಶ ಗೊಂಡಿತು. ಪ್ರತಿಭಟನೆಯುದ್ಧಕ್ಕೂ ಒಳಮೀಸಲಾತಿ ವಿರುದ್ಧ ಘೋಷಣೆಗಳು ಕೂಗಲಾಯಿತು.
ತಹಸೀಲ್ದಾರ್ ಅವರ ಮೂಲಕ ರಾಜ್ಯಪಾಲ ಹಾಗೂ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಕರ್ನಾಟಕದಲ್ಲಿಯ ಬಂಜಾರ, ಭೋವಿ, ಲಮಾಣಿ, ಕೊರಮ, ಕೊಂಚ, ಜಾಂಬವ, ವಡ್ಡರ, ಹೊಲೆಯ, ಛಲವಾದಿ, ಚರ್ಮಕಾರ ಸೇರಿದಂತೆ 101 ಸೂಕ್ಷ್ಮ ಜಾತಿಗಳು ಪರಿಶಿಷ್ಠ ಜಾತಿಗಳ ಪಟ್ಟಿಯಲಿವೆ. ಆದರೆ ಕರ್ನಾಟಕ ರಾಜ್ಯದಲ್ಲಿ ಒಳಮೀಸಲಾತಿ ಹೆಸರಿನಲ್ಲಿ ಇತ್ತೀಚೆಗೆ ನಡೆದ ನೇಮಕಾತಿಗಳಲ್ಲಿ ಪರಿಶಿಷ್ಟ ಜಾತಿಗಳ ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ ಗುಂಪಿಗೆ ಶೂನ್ಯ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಛಲವಾದಿ, ಬಂಜಾರ, ಭೋವಿ, ಕೊರಮ, ಕೊರಚ, ವಡ್ಡರ, ಕೊಂಚ, ಬುರುಬುರ ಪೋಚಮ್ಮ ಸೇರಿದಂತೆ 70ಕ್ಕೂ ಹೆಚ್ಚು ಜಾತಿಗಳಿಗೆ ಘೋರ ಅನ್ಯಾಯವಾಗಿದೆ. ಕಾರಣ ಸರ್ಕಾರ ಹಳೇ ಮೀಸಲಾತಿಯ ನಿಯಮದಂತೆ ಶೇ.50ರ ಅನ್ವಯ ನೇಮಕಾತಿ ಮತ್ತು ಶೈಕ್ಷಣಿಕ ಪ್ರವೇಶ ಪ್ರಕ್ರಿಯಯನ್ನು ಮುಂದುವರಿಸಬೇಕು. ಇದಕ್ಕೆ ತ್ವರಿತವಾಗಿ ನೇಮಕಾತಿ ಅಧಿಸೂಚನೆ ಹೊರಡಿಸಬೇಕು. ಈ ಹಿಂದೆ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಹೆಚ್ಚಳ ಮಾಡಿರುವ ಆದೇಶವನ್ನು ಸಂವಿಧಾನದ 9ನೇ ಷೆಡ್ಯೂಲ್ನಲ್ಲಿ ಸೇರಿಸಲು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಲಿಕೊಡಲು ಪ್ರಧಾನಮಂತ್ರಿಗಳ ಹತ್ತಿರ ನಿಯೋಗ ಹೋಗಿ, ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಒತ್ತಾಯಿಸಲಾಗಿದೆ.
ಏಕಪಕ್ಷೀಯವಾಗಿ ಒಳಮೀಸಲಾತಿ ವರ್ಗೀಕರಣ ನಿರ್ಧಾರ ಮಾಡಬಾರದು. ಪರಿಶಿಷ್ಟ ಜಾತಿ ಪ್ರವರ್ಗ ಎ, ಬಿ ಮತ್ತು ಸಿ ಎಂದು ನಮೂದಿಸಿದ ಜಾತಿ ಪ್ರಮಾಣಪತ್ರಗಳು ಹಿಂಪಡೆಯಬೇಕು ಎಂದು ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಬಂಜಾರಾ ಸೇವಾ ಸಂಘದ ಅದ್ಯಕ್ಷ ವಿಲಾಸ್ ರಾಠೋಡ್, ಕರ್ನಾಟಕ ಪ್ರದೇಶ ಬಂಜಾರಾ ಸೇವಾ ಸಂಘದ ಜಿಲ್ಲಾ ಉಪಾಧ್ಯಕ್ಷ ಸುಭಾಷ್ ಚವ್ಹಾಣ, ಸುಭಾಷ್ ಆಡೆ, ಭೊವಿ ವಡ್ಡರ ಸಮಾಜದ ಸಂಜೀವ್ ಸಿಂಧೆ, ರಾಜಕುಮಾರ್ ಸಿಂಧೆ, ವೆಂಕಟ್ ಸಿಂಧೆ, ದತ್ತು ಪವಾರ್, ಪ್ರಕಾಶ್ ಸಂಪಂಗೆ, ಸುರೇಶ್ ಚವ್ಹಾಣ, ಚಂದು ಸಂಪಂಗೆ, ಸಂಜು ಸಿಂದೆ, ಪ್ರಮುಖರಾದ ಸಿದ್ದಪ್ಪ ಪೋಚಮ್ಮ, ಸಂತೋಷ ಮಾನೆ, ಪ್ರಕಾಶ್ ಯದವಾ, ಜಗನ್ನಾಥ್ ಸಂಪಂಗೆ, ಲಾಲು ರಾಮಲೆ, ರಂಗಲಾಲ್ ಜಾಧವ್, ವಿಶ್ವನಾಥ್ ಸಂಪಂಗೆ, ನಾಗನಾಥ್ ಸಂಪಂಗೆ, ಸುನೀಲ್ ಬುಡ್ಡಣ್ಣ, ವಿಲಾಸ್ ರಾಠೋಡ್, ಸುಭಾಷ್ ರಾಠೋಡ್, ಮಾನಾಜಿ ಚವ್ಹಾಣ, ವಿಜಯಕುಮಾರ್ ಜಾಧವ್, ಸಂತೋಷ್ ಮಾನೆ, ಮುಕೇಶ್ ಚವ್ಹಾಣ ಹಾಗೂ ಬಸವರಾಜ್ ಸಂಪಂಗೆ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.







