ಅ.5 ರಂದು ಬೆಂಗಳೂರಲ್ಲಿ ಬಸವ ಸಂಸ್ಕೃತಿ ಅಭಿಯಾನ ಸಮಾರೋಪ ಸಮಾರಂಭ: ಬಸವರಾಜ್ ಧನ್ನೂರ್

ಬೀದರ್: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಬಸವ ಸಂಸ್ಕೃತಿ ಅಭಿಯಾನ ಯಶಸ್ವಿಯಾಗಿ ಜರುಗಿದ್ದು, ಅ. 5 ರಂದು ಬೆಂಗಳೂರಿನ ಅರಮನೆ ಮೈದಾನದ ಗೇಟ್ ಸಂಖ್ಯೆ 4ರ ಗಾಯತ್ರಿ ವಿಹಾರದಲ್ಲಿ ಸಮಾರೋಪ ಸಮಾರಂಭ ಜರುಗಲಿದೆ. ಸುಮಾರು 500ಕ್ಕೂ ಅಧಿಕ ಬಸವಪರ ಮಠಾಧೀಶರು, ಬಸವ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭೆಯ ರಾಜ್ಯ ಉಪಾಧ್ಯಕ್ಷ ಬಸವರಾಜ್ ಧನ್ನೂರ್ ಅವರು ತಿಳಿಸಿದರು.
ಸೋಮವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ, ಎಲ್ಲಾ ಶಾಲಾ ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಬಸವೇಶ್ವರರ ಭಾವಚಿತ್ರ ಅಳವಡಿಸಲು ಆದೇಶಿಸಿ ಒಂದು ವರ್ಷ ಪೂರೈಸಿದೆ. ಮುಂದಿನ ಪೀಳಿಗೆಗೆ ಬಸವಣ್ಣನವರ ಜೀವನ ಸಾಧನೆ ಪರಿಚಯಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಈ ಪ್ರಯುಕ್ತ ಈ ಅಭಿಯಾನ ಜರುಗಿದ್ದು, ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭೆ ಸೇರಿದಂತೆ ಹತ್ತಾರು ಬಸವಪರ ಸಂಘಟನೆಗಳ ವತಿಯಿಂದ ಅ. 5ರಂದು ಬೆಂಗಳೂರಿನಲ್ಲಿ ಸಿಎಂ ಸಿದ್ಧರಾಮಯ್ಯನವರಿಗೆ ಅಭಿನಂದನೆ ಸಲ್ಲಿಸಲಾಗುತ್ತಿದೆ ಎಂದರು.
ಬೀದರ್ ಜಿಲ್ಲೆಯಿಂದ ಸುಮಾರು 10 ಸಾವಿರಕ್ಕೂ ಅಧಿಕ ಬಸವ ಭಕ್ತರು ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದು, ಪ್ರತಿಯೊಬ್ಬರೂ ಬಿಳಿ ಧೋತಿ ಮತ್ತು ಇಳಕಲ್ ಸೀರೆ ಧರಿಸತಕ್ಕದ್ದು. ಬೆಂಗಳೂರಿಗೆ ಹೋಗಲು ವಿಶೇಷ ರೈಲಿನ ವ್ಯವಸ್ಥೆಗಾಗಿ ಈಗಾಗಲೇ ಸಂಸದ ಸಾಗರ್ ಖಂಡ್ರೆ ಹಾಗೂ ಕೇಂದ್ರದ ರಾಜ್ಯ ರೈಲ್ವೆ ಖಾತೆಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಲಾಗಿದೆ. ಸಕಾರಾತ್ಮಕವಾಗಿ ಅವರು ಸ್ಪಂದನೆ ಮಾಡಿದ್ದಾರೆ. ಸರ್ಕಾರಿ ಬಸ್ ವ್ಯವಸ್ಥೆ ಕೂಡಾ ಮಾಡಲಾಗಿದೆ. ಒಬ್ಬರಿಗೆ ಹೋಗಿ ಬರಲು 2 ಸಾವಿರ ರೂ. ಮತ್ತು ಸ್ಲೀಪರ್ ಕೋಚ್ ಬಸ್ಸಿಗೆ ಹೋಗಿ ಬರಲು ಒಬ್ಬರಿಗೆ 3 ಸಾವಿರ ಹಣ ನಿಗದಿಪಡಿಸಲಾಗಿದೆ. ನಾಲ್ಕು ಚಕ್ರದ ವಾಹನದಲ್ಲಿ ಹೋಗುವವರು ಅ. 4ರಂದು ಸಾಯಂಕಾಲ 6 ಗಂಟೆಗೆ ನೌಬಾದ್ ನ ಬಸವೇಶ್ವರ್ ವೃತ್ತದ ಹತ್ತಿರ ಸೇರಬೇಕು ಎಂದು ಅವರು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ಸುರೇಶ್ ಸ್ವಾಮಿ (94482 63614), ಯೋಗೇಶ್ ಶ್ರೀಗಿರಿ (99498 21117), ವಿಲಾಸ್ ಪಾಟೀಲ್ (95350 76555), ವೀರಶೆಟ್ಟಿ ಪಾಟೀಲ್ (98454 55630) ಯೋಗೇಂದ್ರ ಯದಲಾಪುರೆ (70190 71385) ಇವರಿಗೆ ಗೆ ಸಂಪರ್ಕಿಸಬಹುದು ಎಂದು ಅವರು ಮಾಹಿತಿ ನೀಡಿದರು.
ಬೆಂಗಗಳೂರಿನ ಅಭಿಯಾನಕ್ಕೆ ಬರುವ ಶರಣರಿಗಾಗಿ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಸ್ನಾನ, ಪೂಜೆ, ಪ್ರಸಾದದ ವ್ಯವಸ್ಥೆ ಮಾಡಿಸಲಾಗಿದೆ. ಶ್ರೀಮಠದ ಪಿಆರ್ಓ ನಾಗರಾಜ್ (94488 99233) ಇವರನ್ನು ಸಂಪರ್ಕಿಸಬಹುದಾಗಿದೆ ಎಂದರು.
ತ್ರಿಪುರಾಂತ ಕೆರೆಗೆ ರೇವಣಸಿದ್ಧರ ಹೆಸರಿಡಬೇಕು. ಬಸವಕಲ್ಯಾಣದಲ್ಲಿ ರೇಣುಕಾಚಾರ್ಯರ ವೃತ್ತ ಸ್ಥಾಪಿಸಬೇಕು ಎಂದು ಹೇಳಿಕೆ ನೀಡಿರುವ ರಂಭಾಪುರಿ ಶ್ರೀಗಳು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು. ನಾವು ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ಕೊಡುವುದಿಲ್ಲ. ಹಾಗೆನಾದರೂ ಪ್ರಯತ್ನಗಳು ನಡೆದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ರಾಜೇಂದ್ರ ಜೊನ್ನಿಕೇರಿ, ಜೈರಾಜ್ ಖಂಡ್ರೆ, ವೀರಭದ್ರಪ್ಪ ಬುಯ್ಯಾ, ಯೋಗೇಂದ್ರ ಯದಲಾಪುರ್ ಹಾಜರಿದ್ದರು.







