Bidar | ಒಳ ಮೀಸಲಾತಿಯಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯ ಆರೋಪ: ಭಾಲ್ಕಿಯಲ್ಲಿ ಬೃಹತ್ ಪ್ರತಿಭಟನೆ

ಬೀದರ್: ಪರಿಶಿಷ್ಟ ಜಾತಿಯ ಒಳ ಮೀಸಲಾತಿಯಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ ಭಾಲ್ಕಿಯಲ್ಲಿ ಎಸ್ಸಿ ಬಲಗೈ ಒಳ ಮೀಸಲಾತಿ ಹೋರಾಟ ಸಮಿತಿಯ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ನಗರದ ಭಾಲ್ಕೆಶ್ವರ್ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು. ಮೆರವಣಿಗೆ ಬೊಮ್ಮಗೊಂಡೇಶ್ವರ ವೃತ್ತ, ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತ ಹಾಗೂ ಬಸವೇಶ್ವರ ವೃತ್ತದ ಮೂಲಕ ಸಾಗಿಬಂದು ಮತ್ತೆ ಅಂಬೇಡ್ಕರ್ ವೃತ್ತದಲ್ಲಿ ಜಮಾವಣೆಗೊಂಡಿತು. ಬಳಿಕ ಪ್ರತಿಭಟನಾಕಾರರು ತಹಸೀಲ್ದಾರ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ವಿಠಲದಾಸ್ ಪ್ಯಾಗೆ, ಬಲಗೈ ಸಮಾಜ ಯಾರ ವಿರುದ್ಧವೂ ಕೆಲಸ ಮಾಡಿಲ್ಲ. ಎಲ್ಲರಿಗೂ ನ್ಯಾಯ ಸಿಗುವಂತೆ ಕೆಲಸ ಮಾಡುತ್ತಿದ್ದೇವೆ. ಆದರೆ ಎಡಗೈ ಸಮುದಾಯದವರು ನಮ್ಮನ್ನು ವೈರಿಗಳಂತೆ ಬಿಂಬಿಸುತ್ತಿದ್ದಾರೆ ಎಂದು ಆರೋಪಿಸಿದರು.
ಬಲಗೈ ಸಮುದಾಯದವರು ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಎಡಗೈ ಸಮುದಾಯದವರು ಉದ್ದೇಶಪೂರ್ವಕವಾಗಿ ಆರೋಪಿಸುತ್ತಿದ್ದಾರೆ. ಇದನ್ನು ನಾವು ಒಪ್ಪುವುದಿಲ್ಲ. ಆದರೆ ಒಳ ಮೀಸಲಾತಿ ಜಾರಿಯಲ್ಲಿ ನಮ್ಮ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ಈ ರೀತಿಯ ರೋಸ್ಟರ್ ಪದ್ಧತಿಯನ್ನು ನಾವು ಒಪ್ಪುವುದಿಲ್ಲ ಎಂದು ಹೇಳಿದರು.
ಒಳ ಮೀಸಲಾತಿ ಜಾರಿಯಾದ ಬಳಿಕ ರೋಸ್ಟರ್ ಬಿಂದುಗಳ ನಿಗದಿಯಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಪ್ರವರ್ಗ-ಎ ಅನ್ನು 1ನೇ ಸ್ಥಾನದಲ್ಲಿ, ಪ್ರವರ್ಗ-ಬಿ ಅನ್ನು 9ನೇ ಸ್ಥಾನದಲ್ಲಿ ಹಾಗೂ ಪ್ರವರ್ಗ-ಸಿ ಅನ್ನು 15ನೇ ಸ್ಥಾನದಲ್ಲಿ ನಿಗದಿಪಡಿಸಿರುವುದು ಪ್ರಾಯೋಗಿಕವಾಗಿ ಸಮಾನ ಅವಕಾಶ ಒದಗಿಸುತ್ತದೆಯೇ ಎಂಬ ಪ್ರಶ್ನೆ ಮೂಡಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ರೋಸ್ಟರ್ ಬಿಂದುಗಳನ್ನು ಮರುಪರಿಶೀಲನೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವಿಲಾಸ್ ಮೊರೆ, ವಿಶ್ವನಾಥ್ ಮೊರೆ, ಪ್ರಕಾಶ್ ಭಾವಿಕಟ್ಟೆ, ಕಾಶೀನಾಥ್ ಚೆಲ್ವಾ, ಅಶೋಕ್ ಗಾಯಕವಾಡ್, ಮಾರುತಿ ಭಾವಿಕಟ್ಟೆ, ಕೈಲಾಶ್ ಭಾವಿಕಟ್ಟೆ, ಓಂಕಾರ್ ಮೊರೆ, ರಾಜಕುಮಾರ್ ಮೊರೆ, ಗಗನ್ ಫುಲೆ, ಕಪಿಲ್ ಗೋಡಬೋಲೆ, ನಾಗಾರ್ಜುನ್, ಪ್ರಕಾಶ್ ರಾವಣ, ಲೊಕೇಶ್ ಕಾಂಬ್ಳೆ, ಸಂಜು ಭಾವಿಕಟ್ಟಿ, ಶಿವಕುಮಾರ್ ಮೇತ್ರೆ, ಪ್ರಶಾಂತ್ ಕೋಟಗೇರಾ, ಪ್ರವೀಣ್ ಮೊರೆ, ರಾಜಕುಮಾರ್ ಬೌದ್ದೆ, ಸುರೇಶ್ ಕಾಣೆಕರ್, ಮಹೇಶ್ ಗೋರನಾಳಕರ್ ಹಾಗೂ ಸಮತಾ ಸೈನಿಕ ದಳದವರು ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು.







