Bidar | ಬಿಸಿಎಂ ವಸತಿ ನಿಲಯದಲ್ಲಿ ಕಳಪೆ ಆಹಾರ, ಸ್ವಚ್ಛತೆ ಕೊರತೆ ಆರೋಪ : ಕ್ರಮಕ್ಕೆ ಆಗ್ರಹ

ಬೀದರ್: ಔರಾದ್ (ಬಿ) ತಾಲೂಕಿನ ಬಿಸಿಎಂ ವಿದ್ಯಾರ್ಥಿ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದ್ದು, ಸ್ವಚ್ಛತೆಯ ಕೊರತೆಯೂ ಇದೆ ಎಂದು ಆರೋಪಿಸಿ ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆ ವತಿಯಿಂದ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡುತ್ತಿಲ್ಲ. ಆವರಣದಲ್ಲಿ ಅಗತ್ಯ ಸ್ವಚ್ಛತೆ ಕಾಪಾಡದಿರುವುದರಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ, ಸ್ವಚ್ಛ ಹಾಗೂ ಆರೋಗ್ಯಕರ ವಾತಾವರಣ ಕಲ್ಪಿಸಬೇಕು. ವಸತಿ ನಿಲಯದ ನಿರ್ವಹಣೆಯನ್ನು ನಿಯಮಾನುಸಾರ ನಡೆಸುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ಅಧಿಕಾರಿಗಳು ಕೂಡಲೇ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಆರೋಪಗಳು ಸತ್ಯವೆಂದು ಕಂಡುಬಂದರೆ ಸಂಬಂಧಪಟ್ಟ ತಾಲೂಕು ಅಧಿಕಾರಿ ಹಾಗೂ ನಿಲಯ ಪಾಲಕರ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ದಾವಿದ್ ಎಕಲರಕರ್, ಕಮಲ್ ಹಾಸನ್ ಬಾವಿದೊಡ್ಡಿ, ವೆಂಕಟರಾವ್ ಪಾಟೀಲ್, ವಿಶಾಲ್ ಚೌಹಾಣ, ಸಚೀನ್ ಗೌಳಿ, ವಿಶಾಲ್ ಕಮಲನಗರ ಹಾಗೂ ಶಿವರಾಜ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.






