ಬೀದರ್ | ಜು.30 ರಂದು ಮಾನವ ಕಳ್ಳ ಸಾಗಾಣಿಕೆ ತಡೆ ದಿನ : ಪ್ರತಿಜ್ಞಾ ವಿಧಿ ಕೈಗೊಳ್ಳಲು ಡಿಸಿ ಶಿಲ್ಪಾ ಶರ್ಮಾ ಸೂಚನೆ

ಶಿಲ್ಪಾ ಶರ್ಮಾ
ಬೀದರ್ : ವಿಶ್ವಸಂಸ್ಥೆಯು ಜು.30 ರಂದು ಮಾನವ ಕಳ್ಳ ಸಾಗಾಣಿಕೆ ತಡೆ ದಿನ ಎಂದು ಘೋಷಿಸಿದ್ದು, ಆ ದಿನದಂದು ಜಿಲ್ಲೆಯಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಲು ಹಾಗೂ ಜಿಲ್ಲೆಯ ಎಲ್ಲಾ ಹಂತದ ಸರಕಾರಿ ಕಚೇರಿಗಳಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟಲು ಪ್ರತಿಜ್ಞಾ ವಿಧಿ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ತಿಳಿಸಿದ್ದಾರೆ.
ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದ್ದು, ಇದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ಹಿನ್ನೆಲೆಯಲ್ಲಿ ಮಾನವ ಸಾಗಾಣಿಕೆಯನ್ನು ತಡೆಗಟ್ಟಲು ಮತ್ತು ಸಾಗಾಣಿಕೆಗೆ ಒಳಪಟ್ಟ ಮಹಿಳೆ ಮತ್ತು ಮಕ್ಕಳ ಪುನರ್ ವಸತಿ ಮಾಡುವುದು ನಾಗರಿಕ ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಭಾರತೀಯ ಸಂವಿಧಾನದಲ್ಲಿ ಶೋಷಣೆಯ ವಿರುದ್ಧದ ಹಕ್ಕು ಅನುಚ್ಚೇದ 23 ಮತ್ತು 24 ರಲ್ಲಿ ವಿವರಿಸಲಾಗಿದೆ. ಇದರ ಪ್ರಕಾರ ಮಾನವ ಕಳ್ಳ ಸಾಗಾಣಿಕೆ ಕಾನೂನಿನ್ವಯ ಶಿಕ್ಷಾರ್ಹ ಅಪರಾಧವಾಗಿದೆ. ಐಪಿಸಿ ಸೆಕ್ಷನ್ 370 (2) ಪ್ರಕಾರ ಕಳ್ಳ ಸಾಗಾಣಿಕೆಗೆ 7 ವರ್ಷಗಳಗಿಂತ ಕಡಿಮೆ ಶಿಕ್ಷೆ ಇರಬಾರದು ಹಾಗೂ 10 ವರ್ಷಗಳ ವಿಸ್ತರಿಸಿ ಜೈಲು ಶಿಕ್ಷೆ ಮತ್ತು ದಂಡ ಸಹ ವಿಧಿಸಲಾಗುತ್ತದೆ. ಐಪಿಸಿ ಸೆಕ್ಷನ್ 370 (3) ಪ್ರಕಾರ ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳ ಕಳ್ಳ ಸಾಗಾಣಿಕೆ ಮಾಡಿದರೆ 10 ವರ್ಷಗಿಂತ ಕಡಿಮೆ ಶಿಕ್ಷೆ ಇರಬಾರದು ಹಾಗೂ ಅದು ವಿಸ್ತರಿಸಿ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.







