Bidar | ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹುತಾತ್ಮ ಸ್ಮಾರಕ ಭವನ ನಿರ್ಮಾಣಕ್ಕೆ ಮನವಿ

ಬೀದರ್ : ಕಲ್ಯಾಣ ಕರ್ನಾಟಕ ವಿಭಾಗದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹುತಾತ್ಮ ಸ್ಮಾರಕ ಭವನಗಳನ್ನು ನಿರ್ಮಿಸಬೇಕು ಎಂದು ಕಲ್ಯಾಣ ಕರ್ನಾಟಕ ಹುತಾತ್ಮ ಸ್ಮಾರಕ ನಿರ್ಮಾಣ ಹೋರಾಟ ಸಮಿತಿಯ ಅಧ್ಯಕ್ಷ ಡಾ. ರಾಜಶೇಖರ್ ಶಿವಾಚಾರ್ಯ ಸ್ವಾಮಿ ಅವರು ಮುಖ್ಯಮಂತ್ರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಪತ್ರದಲ್ಲಿ ಅವರು, 1947ರ ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ದೊರೆತರೂ ಕಲ್ಯಾಣ ಕರ್ನಾಟಕ ಭಾಗವು ಹೈದರಾಬಾದ್ ನಿಜಾಂ ಸಂಸ್ಥಾನದ ಆಳ್ವಿಕೆಯಲ್ಲಿ ಮುಂದುವರಿದಿತ್ತು. ಸ್ವತಂತ್ರ ಭಾರತಕ್ಕೆ ಈ ಭಾಗ ವಿಲೀನಗೊಳ್ಳಲು 13 ತಿಂಗಳು 29 ದಿನಗಳ ಕಾಲ ಕಾಯಬೇಕಾಯಿತು ಎಂದು ಉಲ್ಲೇಖಿಸಿದ್ದಾರೆ.
ಈ ಭಾಗಕ್ಕೆ ಸ್ವಾತಂತ್ರ್ಯ ಸುಲಭವಾಗಿ ದೊರೆಯಲಿಲ್ಲ. ನಿಜಾಂ ಸಂಸ್ಥಾನದ ರಜಾಕಾರರ ವಿರುದ್ಧ ನಡೆದ ವಿಮೋಚನಾ ಹೋರಾಟದಲ್ಲಿ ಅನೇಕ ಹೋರಾಟಗಾರರು, ದೇಶಪ್ರೇಮಿಗಳು ಹಾಗೂ ಹಿರಿಯರು ಪ್ರಾಣಾರ್ಪಣೆ ಮಾಡಿದ ಫಲವಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ನಿಜವಾದ ಸ್ವಾತಂತ್ರ್ಯ ದೊರೆಯಿತು ಎಂದು ಅವರು ತಿಳಿಸಿದ್ದಾರೆ.
ವಿಮೋಚನಾ ಹೋರಾಟದಲ್ಲಿ ಭಾಗವಹಿಸಿದ ವೀರಯೋಧರು ಹಾಗೂ ಹುತಾತ್ಮರ ನೆನಪನ್ನು ಶಾಶ್ವತವಾಗಿ ಉಳಿಸುವುದು ಕಲ್ಯಾಣ ಕರ್ನಾಟಕದ ಜನರ ಬಹುದಿನಗಳ ಆಶಯವಾಗಿದೆ. ಆದ್ದರಿಂದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಕೇಂದ್ರಗಳಲ್ಲಿ ವಿಶಿಷ್ಟ ಮ್ಯೂಸಿಯಂ ಮಾದರಿಯಲ್ಲಿ ಹುತಾತ್ಮ ಸ್ಮಾರಕ ಮತ್ತು ಸ್ಮಾರಕ ಭವನಗಳನ್ನು ನಿರ್ಮಿಸಬೇಕು ಎಂದು ಮನವಿ ಮಾಡಿದ್ದಾರೆ.
ಇದಲ್ಲದೆ, ಕಲ್ಯಾಣ ಕರ್ನಾಟಕ ವಿಮೋಚನಾ ಹೋರಾಟದ ಇತಿಹಾಸವನ್ನು ರಾಜ್ಯದ ಪಠ್ಯಪುಸ್ತಕಗಳಲ್ಲಿ ಸೇರಿಸಿ, ಹೋರಾಟಗಾರರು ಹಾಗೂ ಹುತಾತ್ಮರಿಗೆ ಶಾಶ್ವತ ಗೌರವ ಸಲ್ಲಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಡಾ. ರಾಜಶೇಖರ್ ಶಿವಾಚಾರ್ಯ ಸ್ವಾಮಿ ಆಗ್ರಹಿಸಿದ್ದಾರೆ.






