ಬೀದರ್ | ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಿರು ಅರಣ್ಯ, ಕಿರು ಪಕ್ಷಿಧಾಮ ನಿರ್ಮಾಣ ಮಾಡಲು ಮನವಿ

ಬೀದರ್ : ಕರ್ನಾಟಕ ರಾಜ್ಯದ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 5 ರಿಂದ 10 ಎಕರೆ ಪ್ರದೇಶದಲ್ಲಿ ಕಿರು ಅರಣ್ಯ ಅಥವಾ ಕಿರು ಪಕ್ಷಿಧಾಮ ಅಭಿವೃದ್ದಿಪಡಿಸಬೇಕು ಎಂದು ಪರಿಸರ ಪ್ರೇಮಿ ಮಹಲಿಂಗಯ್ಯ ತುಮಕೂರ್ ಅವರು ಮನವಿ ಮಾಡಿದ್ದಾರೆ.
ಇಂದು ಅವರು ಸೈಕಲ್ ಜಾಥಾ ಮೂಲಕ ಜಿಲ್ಲೆಗೆ ಆಗಮಿಸಿ ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಶಿಲವಂತ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಜಾಗತೀಕ ತಾಪಮಾನ ಏರಿಕೆಯಿಂದಾಗಿ ಗಾಳಿ, ನೀರು ಮತ್ತು ಇತರ ರೀತಿಯ ಮಾಲಿನ್ಯಗಳು ಪರಿಸರ ಮತ್ತು ಜೀವಿಗಳಿಗೆ ದೊಡ್ಡ ಅಪಾಯವನ್ನುಂಟು ಮಾಡುತ್ತಿದೆ. ಪ್ರಾಣಿ, ಪಕ್ಷಿಗಳು ಸೇರಿದಂತೆ ಸಕಲ ಜೀವ ರಾಶಿಗಳಿಗೆ ಆರೋಗ್ಯ ಹಾನಿಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಪರಿಸರ ಸಂರಕ್ಷಣೆಗೆ ಮೂಲಭೂತ ಸ್ಥಾನಮಾನ ನೀಡಿ, ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 5 ರಿಂದ 10 ಎಕರೆ ಜಮೀನಿನಲ್ಲಿ ಕಿರು ಅರಣ್ಯ ಅಥವಾ ಕಿರು ಪಕ್ಷಿಧಾಮ ನಿರ್ಮಾಣ ಮಾಡುವಂತೆ ರಾಜ್ಯ ಸರಕಾರ ಯೋಜನೆ ರೂಪಿಸಿ, ಆ ಯೋಜನೆ ಜಾರಿಗೆ ತಂದು ಅಭಿವೃದ್ದಿಪಡಿಸಬೇಕು. ರಾಜ್ಯದ ಪ್ರತಿ ಸರಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ಅಭಿವೃದ್ದಿಪಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ವಿಜಯಕುಮಾರ್ ಸೋನಾರೆ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಸುನೀಲ್ ಭಾವಿಕಟ್ಟಿ, ರೈತ ಮುಖಂಡ ಬಸವರಾಜ್ ಅಷ್ಟೂರೆ, ಪತ್ರಕರ್ತ ಚಂದ್ರಕಾಂತ್ ಹಳ್ಳಿಖೇಡಕರ್,ಮ್ ಹಾಗೂ ವಿಜಯಕುಮಾರ ಭಂಡೆ ಸೇರಿದಂತೆ ಇತರರು ಇದ್ದರು.