ಬೀದರ್ | ಮೊಬೈಲ್ ಕ್ಯಾಂಟಿನ್ ತರಬೇತಿಗಾಗಿ ಅರ್ಜಿ ಆಹ್ವಾನ

ಬೀದರ್ : ಪ್ರವಾಸೋದ್ಯಮ ಇಲಾಖೆ ವತಿಯಿಂದ 2024-25ನೇ ಸಾಲಿನಲ್ಲಿ ಎಸ್.ಸಿ.ಎಸ್.ಪಿ, ಟಿ.ಎಸ್.ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಣ್ಣ ಉದ್ಯಮಿದಾರರನ್ನು (Entrepreneurship) ಉತ್ತೇಜಿಸಲು ಒಂದು ತಿಂಗಳ ಉದ್ಯಮಶೀಲತೆ ತರಬೇತಿ ಹಾಗೂ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಮೊಬೈಲ್ ಕ್ಯಾಂಟಿನ್ ನಡೆಸಲು 5 ಲಕ್ಷ ರೂ. ವರೆಗೆ ಸಹಾಯ ಧನ ನೀಡಲು ಉದ್ದೇಶಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೀದರ್ ಜಿಲ್ಲೆಗೆ ಪರಿಶಿಷ್ಟ ಜಾತಿಗೆ 6 ಅಭ್ಯರ್ಥಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ 4 ಅಭ್ಯರ್ಥಿಗಳ ಗುರಿಯನ್ನು ನೀಡಲಾಗಿದೆ. ಪರಿಶಿಷ್ಟ ಜಾತಿಗೆ 3 ಮತ್ತು ಪರಿಶಿಷ್ಟ ಪಂಗಡದ 3 ಅಭ್ಯರ್ಥಿಗಳ ಗುರಿಯನ್ನು ಸಾಧಿಸಲಾಗಿದೆ. ಬೀದರ್ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ 3 ಮತ್ತು ಪರಿಶಿಷ್ಟ ಪಂಗಡಕ್ಕೆ 1 ಗುರಿ ಬಾಕಿ ಉಳಿದಿದೆ. ಆ ಗುರಿ ತಲುಪಲು ಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಅಭ್ಯರ್ಥಿಯ ವಿದ್ಯಾರ್ಹತೆ ಎಸೆಸೆಲ್ಸಿ ಉತ್ತೀರ್ಣರಾಗಿರಬೇಕು. ನಿಗಧಿಪಡಿಸಿದ ಅರ್ಜಿ ಪ್ರವಾಸೋದ್ಯಮ ಇಲಾಖೆಯ ಕಚೇರಿಯಲ್ಲಿ ಪಡೆದುಕೊಂಡು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ದ್ವಿಪ್ರತಿಯಲ್ಲಿ ಎಲ್ಲಾ ಅಗತ್ಯ ಪ್ರಮಾಣ ಪತ್ರಗಳ ಸ್ವಯಂ ದೃಢೀಕೃತ ಪತ್ರಗಳೊಂದಿಗೆ ಜು.30 ರ ಸಂಜೆ 5 ಗಂಟೆಯೊಳಗೆ ನಗರದ ಚಿಕ್ಕಪೇಟದ ಕನ್ನಡ ಭವನದಲ್ಲಿರುವ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು ಎಂದು ಅವರು ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಗೆ ಸಂಪರ್ಕಿಸಬೇಕು ಎಂದು ಅವರು ತಿಳಿಸಿದ್ದಾರೆ.







